
ಬೆಂಗಳೂರು: ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು, ಉಗ್ರರ ದಾಳಿಯಲ್ಲಿ ಮೃತಪಟ್ಟ ಬೆಂಗಳೂರಿನ ಭರತ್ ಭೂಷಣ್ ಮನೆಗೆ ಭೇಟಿ ನೀಡಿ ಘಟನೆ ಕುರಿತು ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ನಗರದ ಮತ್ತಿಕೆರೆಯಲ್ಲಿರುವ ಭರತ್ ಭೂಷಣ್ ಅವರ ನಿವಾಸಕ್ಕೆ ರಾಷ್ಟ್ರೀಯ ತನಿಖಾ ದಳದ ನಾಲ್ವರು ಅಧಿಕಾರಿಗಳು ಭೇಟಿ ನೀಡಿದ್ದು, ಭರತ್ ಅವರ ಪತ್ನಿ ಬಳಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಸುಮಾರು 12 ಗಂಟೆಗಳ ಕಾಲ ಭರತ್ ಭೂಷಣ್ ಅವರ ಮನೆಯಲ್ಲಿ ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಸುಜಾತ ಅವರ ಬಳಿ ಸುಮಾರು 6 ಗಂಟೆಗಳ ಕಾಲ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಕಾಶ್ಮೀರ ಪ್ರವಾಸದ ಕುರಿತು ಪ್ರಶ್ನೆಗಳನ್ನು ಕೇಳಿದ್ದಾರೆ.
ಕಾಶ್ಮೀರಕ್ಕೆ ಹೋಗಿದ್ದು ಯಾವಾಗ?, ಯಾವ ಟ್ರಾವೆಲ್ಸ್ ಮೂಲಕ ಹೋಗಿದ್ದಿರಿ?, ಕಾಶ್ಮೀರದಲ್ಲಿ ಎಲ್ಲಿ ಉಳಿದುಕೊಂಡಿದ್ದಿರಿ?, ಪಹಲ್ಗಾಮ್ಗೆ ಯಾವತ್ತೂ ಹೋಗದ್ದಿರಿ? ಎಷ್ಟೋತ್ತಿಗೆ ಹೋಗಿದ್ದಿ? ಎನ್ನುವಂತೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆಂದು ತಿಳಿದುಬಂದಿದೆ.
ಇದಲ್ಲದೆ, ಉಗ್ರರು ದಾಳಿ ಮಾಡಿದ ಸಮಯ, ಎಷ್ಟು ಜನ ಇದ್ದರು, ಅವರು ಯಾವ ಭಾಷೆಯಲ್ಲಿ ಮಾತನಾಡಿದರು?ಭರತ್ ಭೂಷಣ್ ಬಳಿ ಏನಾದ್ರೂ ಮಾತನಾಡಿದ್ರಾ?, ನಿಮ್ಮ ಬಳಿ ಏನ್ ಮಾತನಾಡಿದ್ದರು?. ಅವರ ಮುಖದ ಚಹರೆ ನೆನಪು ಇದೆಯಾ?, ಮುಖ ಯಾವ ರೀತಿ ಇತ್ತು, ಮುಖದ ಮೇಲೆ ಯಾವುದಾದರೂ ಮಾರ್ಕ್ ಇತ್ತಾ? ಎಂಬ ಪ್ರಶ್ನೆಗಳ ಕೇಳಿದ್ದಾರೆ ಎನ್ನಲಾಗಿದೆ.
ಇದರ ಜೊತೆಗೆ ಸುಮಾರು 14ಕ್ಕೂ ಹೆಚ್ಚು ಶಂಕಿತರ ಫೋಟೋಗಳನ್ನೂ ಅಧಿಕಾರಿಗಳು ತೋರಿಸಿದ್ದು, ಇದರಲ್ಲಿ ಯಾರಾದ್ರೂ ಇದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ವಿಚಾರಣೆ ವೇಳೆ ಭರತ್ ಪತ್ನಿಯವರ ಹೇಳಿಕೆ ಆಧರಿಸಿ ಎನ್ಐಎ ಕೆಲ ರೇಖಾಚಿತ್ರಗಳನ್ನು ಬಿಡಿಸಿದ್ದು, ಈ ರೇಖಾಚಿತ್ರಗಳನ್ನು ತೋರಿಸಿಕೊಂಡು ಇನ್ನಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಈ ನಡುವೆ ಉಗ್ರರ ದಾಳಿ ವೇಳೆ ಸ್ಥಳೀಯ ಫೋಟೋಗ್ರಾಫರ್ ಒಬ್ಬ ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದು, ಉಗ್ರ ದಾಳಿಯ ಸಂಪೂರ್ಣ ವಿಡಿಯೋ ಚಿತ್ರೀಕರಿಸಿದ್ದಾನೆ ಎಂದು ವರದಿಗಳಿಂದ ತಿಳಿದುಬಂದಿದೆ. ಈ ವಿಡಿಯೋದಿಂದ ಎನ್ಐಎ ಮಹತ್ವದ ಮಾಹಿತಿಗಳನ್ನು ಕಲೆಹಾಕುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
ಉಗ್ರರ ಗುಂಡಿನ ಮೊರೆತ ಕೇಳುತ್ತಿದ್ದಂತೆ ಫೋಟೋಗ್ರಾಫರ್ ತನ್ನ ಜೀವ ಉಳಿಸಿಕೊಳ್ಳಲು ಓಡಿದ್ದು, ಈ ವೇಳೆ ಮರವನ್ನೇರಿ ಕುಳಿತು ಸಂಪೂರ್ಣ ವಿಡಿಯೋ ಚಿತ್ರೀಕರಿಸಿದ್ದಾನೆಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement