News Headlines 30-04-25 | BBMP ಮುಖ್ಯ ಆಯುಕ್ತರಾಗಿ ಮಹೇಶ್ವರ ರಾವ್ ನೇಮಕ; ಲಂಚ ಪಡೆಯದೇ 1,000 ಗ್ರಾಮ ಲೆಕ್ಕಿಗರ ನೇಮಕ; ಪಾಕಿಸ್ತಾನವನ್ನು ಬೆಂಬಲಿಸುವುದು ದೇಶದ್ರೋಹ!

News Headlines 30-04-25 | BBMP ಮುಖ್ಯ ಆಯುಕ್ತರಾಗಿ ಮಹೇಶ್ವರ ರಾವ್ ನೇಮಕ; ಲಂಚ ಪಡೆಯದೇ 1,000 ಗ್ರಾಮ ಲೆಕ್ಕಿಗರ ನೇಮಕ; ಪಾಕಿಸ್ತಾನವನ್ನು ಬೆಂಬಲಿಸುವುದು ದೇಶದ್ರೋಹ!

1. BBMP ಮುಖ್ಯ ಆಯುಕ್ತರಾಗಿ ಮಹೇಶ್ವರ ರಾವ್ ನೇಮಕ

BBMP ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಅವರನ್ನು ಬದಲಾವಣೆ ಮಾಡಲಾಗಿದ್ದು. ಹೊಸ ಬಿಬಿಎಂಪಿ ಮುಖ್ಯ ಆಯುಕ್ತರನ್ನಾಗಿ ಮಹೇಶ್ವರ ರಾವ್ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಸೋಮವಾರ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ. ನಗರಾಭಿವೃದ್ಧಿ ಇಲಾಖೆ ಹಾಗೂ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಉಮಾಶಂಕರ್ ಎಪ್ರಿಲ್ 30ರಂದು ನಿವೃತ್ತಿಯಾಗಲಿದ್ದಾರೆ. ಹೀಗಾಗಿ ತುಷಾರ್ ಗಿರಿನಾಥ್ ಅವರನ್ನು ಈ ಹುದ್ದೆಗೆ ನೇಮಕ ಮಾಡಲಾಗಿದೆ. 1995ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಮಹೇಶ್ವರ್‌ ರಾವ್‌ ಅವರು BMRCL ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಅವರಿಗೆ ಹೆಚ್ಚುವರಿ ಜವಾಬ್ದಾರಿ ಕೊಡಲಾಗಿದೆ. ಮಹೇಶ್ವರ್ ರಾವ್ ಅವರಿಗೆ ಹೆಚ್ಚುವರಿಯಾಗಿ BBMP ಮುಖ್ಯ ಆಯುಕ್ತರ ಹುದ್ದೆ ನೀಡಿರುವ ಸರ್ಕಾರದ ನಿರ್ಧಾರದ ಬಗ್ಗೆ ತಜ್ಞರು ಮತ್ತು ಸಾಮಾಜಿಕ ಹೋರಾಟಗಾರರು ತೀವ್ರ ಕಳವಳ ಮತ್ತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 225 ವಾರ್ಡ್‌ಗಳನ್ನು ಹೊಂದಿರುವ ಬಿಬಿಎಂಪಿಗೆ ಪೂರ್ಣಾವಧಿ ಆಯುಕ್ತರಿಲ್ಲದಿರುವುದು ಮಹಾನಗರ ಪಾಲಿಕೆಯ ದೈನಂದಿನ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರ ಸೇವಾವಧಿಯನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಏಪ್ರಿಲ್ 30ರಂದು ನಿವೃತ್ತಿ ಹೊಂದಬೇಕಿದ್ದ ಅಲೋಕ್ ಮೋಹನ್ ಅವರ ಸೇವಾವಧಿಯನ್ನು ಮೇ 21ರವರೆಗೆ ವಿಸ್ತರಣೆ ಮಾಡಲಾಗಿದೆ.

2. ಲಂಚ ಪಡೆಯದೇ 1,000 ಗ್ರಾಮ ಲೆಕ್ಕಿಗರ ನೇಮಕ

ಹೊಸದಾಗಿ ನೇಮಕಗೊಂಡ 1,000 ಗ್ರಾಮ ಲೆಕ್ಕಿಗರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ನೇಮಕಾತಿ ಪತ್ರಗಳನ್ನು ಸಾಂಕೇತಿಕವಾಗಿ ನೀಡಿದರು. ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇಮಕಾತಿ ಪತ್ರಗಳನ್ನು ನೀಡಲಾಯಿತು. ಈ ಹುದ್ದೆಗಳಿಗೆ ಸುಮಾರು 6.3 ಲಕ್ಷ ಜನರು ಅರ್ಜಿ ಸಲ್ಲಿಸಿದ್ದರು. ಬಹುಶಃ ಬೇರೆ ಯಾವುದೇ ಕೆಲಸಕ್ಕೆ ಇಷ್ಟೊಂದು ಅರ್ಜಿಗಳು ಬಂದಿರಲಿಲ್ಲವೆಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. ನಾವು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪರೀಕ್ಷೆಗಳನ್ನು ನಡೆಸಿದ್ದೆವು. ಯಾವುದೇ ಮಧ್ಯವರ್ತಿಗಳಿಲ್ಲದೆ ಹೊಸ ಗ್ರಾಮ ಲೆಕ್ಕಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಪರೀಕ್ಷೆಗಳನ್ನು ಸಂಪೂರ್ಣ ಪಾರದರ್ಶಕತೆಯಿಂದ ನಡೆಸಲಾಗಿದೆ. ಯಾವುದೇ ಶಿಫಾರಸನ್ನು ಸ್ವೀಕರಿಸಲಾಗಿಲ್ಲ ಎಂದು ಹೇಳಿದರು.

3. ಪಾಕಿಸ್ತಾನವನ್ನು ಬೆಂಬಲಿಸುವುದು ದೇಶದ್ರೋಹ

ಪಾಕಿಸ್ತಾನದ ಪರವಾಗಿ ಮಾತನಾಡುವುದು ತಪ್ಪು. ಅಂತಹ ನಡೆ ದೇಶಕ್ಕೆ ದ್ರೋಹ ಬಗೆಯುವುದು ಅಥವಾ ದೇಶದ್ರೋಹವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ವೇಳೆ ಮಂಗಳೂರಿನಲ್ಲಿ ನಡೆದ ಗುಂಪು ಹತ್ಯೆ ಘಟನೆಯನ್ನು ಸಿದ್ದರಾಮಯ್ಯ ಖಂಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿಎಂ, ಗುಂಪು ಹತ್ಯೆ ಮಾಡಿದವರನ್ನು ಬಿಡುವುದಿಲ್ಲ, ತನಿಖೆ ನಡೆಯುತ್ತಿದೆ ಎಂದರು. ಕ್ರಿಕೆಟ್ ಆಡುತ್ತಿದ್ದಾಗ ಕೇರಳ ಮೂಲದ ಮೊಹಮ್ಮದ್ ಅಶ್ರಫ್ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದನು. ಇದರಿಂದ ಕೆರಳಿದ ಆಟಗಾರರು ಆತನಿಗೆ ತೀವ್ರವಾಗಿ ಥಳಿಸಿದ್ದು ಅಶ್ರಫ್ ಮೃತಪಟ್ಟಿದ್ದನು. ಪ್ರಕರಣ ಸಂಬಂಧಿಸಿದಂತೆ ಇಲ್ಲಿಯವರೆಗೆ 20 ಜನರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ದೃಢಪಡಿಸಿದ್ದಾರೆ.

4. Corona ನಿಯಮ ಉಲ್ಲಂಘಿಸಿ ಪ್ರತಿಭಟನೆ Congress ನಾಯಕರಿಗೆ ಸುಪ್ರೀಂ ಬಿಗ್ ರಿಲೀಫ್

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ನ ಇತರ ನಾಯಕರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ. 2022ರಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಪ್ರತಿಭಟಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ನ ಇತರ ನಾಯಕರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ನ್ಯಾಷನಲ್ ಹೆರಾಲ್ಡ್ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 2022ರಲ್ಲಿ ಇಡಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಇದನ್ನು ವಿರೋಧಿಸಿ ರಾಜ್ಯ ಕಾಂಗ್ರೆಸ್ ಸಮಿತಿಯು 2022ರ ಜೂನ್ನಲ್ಲಿ ಪ್ರತಿಭಟನೆ ನಡೆಸಿತ್ತು. ಈ ಪ್ರಕರಣ ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್ಗೆ ಕಾಂಗ್ರೆಸ್ ನಾಯಕರು ಅರ್ಜಿ ಸಲ್ಲಿಸಿದ್ದರು.

5. ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಸ್ಥಗಿತ ಗಡುವು ವಿಸ್ತರಣೆ

ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಟ್ಯಾಕ್ಸಿ ಸಂಸ್ಥೆಗಳಿಗೆ ನೀಡಿದ್ದ ಗಡುವನ್ನು ಕರ್ನಾಟಕ ಹೈಕೋರ್ಟ್ ಮತ್ತೆ ಆರು ವಾರಗಳವರೆಗೆ ವಿಸ್ತರಿಸಿದೆ. ಸಮಯ ವಿಸ್ತರಣೆ ಕೋರಿ ಟ್ಯಾಕ್ಸಿ ಸಂಸ್ಥೆಗಳು ಸಲ್ಲಿಸಿದ್ಜ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ ಶ್ಯಾಮ್ ಪ್ರಸಾದ್ ಅವರಿದ್ದ ಪೀಠ ಮಂಗಳವಾರ ಈ ಆದೇಶ ಹೊರಡಿಸಿದೆ. ಏಪ್ರಿಲ್ 2ರಂದು, ಓಲಾ, ಉಬರ್ ಮತ್ತು ರ್ಯಾಪಿಡೊಗಳಿಗೆ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಹೈಕೋರ್ಟ್ ಆರು ವಾರಗಳ ಕಾಲಾವಕಾಶ ನೀಡಿತ್ತು. ಆರು ವಾರಗಳ ನಂತರ, ಎಲ್ಲಾ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳನ್ನು ನಿಲ್ಲಿಸಬೇಕು ಎಂದು ಖಚಿತಪಡಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೂ ಸೂಚನೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com