
ಬೆಂಗಳೂರು: ಬೆಂಗಳೂರು ಮೆಟ್ರೋ ಇತಿಹಾಸದಲ್ಲೇ ಮೊದಲ ಬಾರಿಗೆ ಯಶಸ್ವಿಯಾಗಿ ಮಾನವ ಅಂಗಾಂಗ ಸಾಗಣೆ ಮಾಡಲಾಗಿದೆ.
ಹೌದು.. ಕರ್ನಾಟಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ಮಾನವ ಅಂಗಾಂಗವನ್ನು ನಮ್ಮ ಮೆಟ್ರೋ ಮೂಲಕ ವೈದೇಹಿ ಆಸ್ಪತ್ರೆಯಿಂದ ಆರ್.ಆರ್.ನಗರದ ಸ್ಪರ್ಶ ಆಸ್ಪತ್ರೆಗೆ ಸಾಗಿಸಲಾಯಿತು. ನಮ್ಮ ಮೆಟ್ರೋದಲ್ಲಿ ಮಾನವ ಯಕೃತ್ತನ್ನು ಶಸ್ತ್ರಚಿಕಿತ್ಸೆಗಾಗಿ ಸಾಗಿಸಲು ಸಹಕಾರ ನೀಡಿದೆ.
ಶುಕ್ರವಾರ, ಆಗಸ್ಟ್ 1, 2025ರ ರಾತ್ರಿ 8:38ಕ್ಕೆ, ಯಕೃತ್ತನ್ನು ವೈದ್ಯರೊಬ್ಬರು ಮತ್ತು ಏಳು ಮಂದಿ ವೈದ್ಯಕೀಯ ಸಿಬ್ಬಂದಿಯೊಂದಿಗೆ ವೈದೇಹಿ ಆಸ್ಪತ್ರೆಯಿಂದ ವೈಟ್ಫೀಲ್ಡ್ ಮೆಟ್ರೋ ನಿಲ್ದಾಣಕ್ಕೆ ಆಂಬ್ಯುಲೆನ್ಸ್ ಮೂಲಕ ಸುರಕ್ಷಿತವಾಗಿ ಸಾಗಿಸಲಾಯಿತು.
ಮೆಟ್ರೋ ನಿಲ್ದಾಣಕ್ಕೆ ತಲುಪಿದ ತಕ್ಷಣ, ಸಹಾಯಕ ಭದ್ರತಾ ಅಧಿಕಾರಿ (ASO) ಮತ್ತು ಮೆಟ್ರೋ ಸಿಬ್ಬಂದಿ ತಂಡವನ್ನು ಸ್ವೀಕರಿಸಿ, ದಾಖಲೆ ಕಾರ್ಯ ಮತ್ತು ಭದ್ರತಾ ಪರಿಶೀಲನೆಗಳನ್ನು ಸಂಯೋಜಿಸಿದರು.
ಆ ಬಳಿಕ, ಯಕೃತ್ತನ್ನು ಹೊತ್ತ ಮೆಟ್ರೋ ರೈಲು ರಾತ್ರಿ 8:42ಕ್ಕೆ ವೈಟ್ ಫೀಲ್ಡ್ ನಿಲ್ದಾಣದಿಂದ ಹೊರಟು, ರಾತ್ರಿ 9:48ಕ್ಕೆ ರಾಜರಾಜೇಶ್ವರಿ ನಗರ (RR ನಗರ) ಮೆಟ್ರೋ ನಿಲ್ದಾಣಕ್ಕೆ ತಲುಪಿತು.
ಅಲ್ಲಿ ಮತ್ತೊಬ್ಬ ASO ಮತ್ತು ಮೆಟ್ರೋ ಸಿಬ್ಬಂದಿ ವೈದ್ಯಕೀಯ ತಂಡವನ್ನು ಸ್ವಾಗತಿಸಿ, ಕಾಯುತ್ತಿರುವ ಆಂಬ್ಯುಲೆನ್ಸ್ಗೆ ವರ್ಗಾವಣೆ ಮಾಡುವಲ್ಲಿ ನೆರವಾದರು. ಅಂಗಾಂಗ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಸಮಯಕ್ಕೆ ಅಂಗವನ್ನು ಸ್ಪರ್ಶ ಆಸ್ಪತ್ರೆಗೆ ಸುರಕ್ಷಿತವಾಗಿ ತಲುಪಿಸಲಾಯಿತು ಎನ್ನಲಾಗಿದೆ.
ಈ ಜೀವ ಉಳಿಸುವ ಕಾರ್ಯಾಚರಣೆಯಲ್ಲಿ ಸಮಯೋಚಿತ ಸಹಕಾರ ಮತ್ತು ಜವಾಬ್ದಾರಿಯನ್ನು ತೋರ್ಪಡಿಸಿದ ಸಹಾಯಕ ಭದ್ರತಾ ಅಧಿಕಾರಿಗಳು, ಹೋಮ್ ಗಾರ್ಡುಗಳು ಮತ್ತು ಮೆಟ್ರೋ ಸಿಬ್ಬಂದಿಗೆ ವೈದ್ಯಕೀಯ ತಂಡದವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಚರಣೆ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಸಂಯುಕ್ತ ಕಾರ್ಯವಿಧಾನ ಆದೇಶ (JPO)ದ ಮಾರ್ಗಸೂಚಿಗಳಡಿ ನೆರವೇರಿಸಲಾಯಿತು.
ಈ ಸಾಧನೆ ಮಾಡಿದ ದೇಶದ 2ನೇ ಮೆಟ್ರೋ
ಇನ್ನು ಅಂಗಾಂಗ ಸಾಗಣೆ ಮೂಲಕ ಬೆಂಗಳೂರು ಮೆಟ್ರೋ ಈ ಸಾಧನೆ ಮಾಡಿದ ದೇಶದ 2ನೇ ಮೆಟ್ರೋ ಸಂಸ್ಥೆಯಾಗಿದೆ. ಈ ಹಿಂದೆ ಮಾರ್ಚ್ ತಿಂಗಳಲ್ಲಿ ಹೈದರಾಬಾದ್ ಮೆಟ್ರೋ ರೈಲಿನಲ್ಲಿ ಅಂಗಾಂಗ ಸಾಗಣೆ ಮಾಡಲಾಗಿತ್ತು. ಅಂದು ಹೃದಯ ಕಸಿ ಶಸ್ತ್ರಚಿಕಿತ್ಸೆಗಾಗಿ ಜೀವಂತ ಹೃದಯವನ್ನು ಸಾಗಾಟ ಮಾಡಲಾಗಿತ್ತು.
Advertisement