ವಿಧಾನಸಭೆ: ಜನಸಂದಣಿ ನಿಯಂತ್ರಣ ಮಸೂದೆ ಸದನ ಸಮಿತಿ ಪರಿಶೀಲನೆಗೆ

ಮಸೂದೆಯ ಪ್ರಕಾರ, ಆಯೋಜಕರು ಉದ್ದೇಶಿತ ಕಾರ್ಯಕ್ರಮಕ್ಕೆ 10 ದಿನಗಳ ಮೊದಲು ಅನುಮತಿಗಾಗಿ ಅರ್ಜಿ ಸಲ್ಲಿಸಬೇಕು ಮತ್ತು ಆಯೋಜಕರು 1 ಕೋಟಿ ರೂ.ಗಳ ಪರಿಹಾರ ಬಾಂಡ್ ಸಲ್ಲಿಸಬೇಕು.
Home Minister
ಗೃಹ ಸಚಿವ ಜಿ ಪರಮೇಶ್ವರ
Updated on

ಬೆಂಗಳೂರು: ಭಾರೀ ದಂಡ ಮತ್ತು ಜೈಲು ಶಿಕ್ಷೆ ವಿಧಿಸಬಹುದಾದ ನಿಬಂಧನೆಗಳನ್ನು ಹೊಂದಿರುವ ಕರ್ನಾಟಕ ಜನಸಂದಣಿ ನಿಯಂತ್ರಣ ಮಸೂದೆ 2025 ಅನ್ನು ವಿವರವಾದ ಚರ್ಚೆ ಮತ್ತು ಪರಿಶೀಲನೆಗಾಗಿ ಸದನ ಸಮಿತಿಗೆ ಉಲ್ಲೇಖಿಸಲಾಗಿದೆ.

ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿ ದುರಂತದಿಂದ ಎಚ್ಚೆತ್ತ ರಾಜ್ಯ ಸರ್ಕಾರ ಈ ಮಸೂದೆಯನ್ನು ರೂಪಿಸಿದ್ದು, ಬುಧವಾರ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರು ವಿಧಾನಸಭೆಯಲ್ಲಿ ಮಂಡಿಸಿ, ಸುದೀರ್ಘ ವಿವರಣೆ ನೀಡಿದರು.

ಈ ಮಸೂದೆಯು ಪ್ರತಿಭಟನೆಗಳನ್ನು ಕಡಿಮೆ ಮಾಡಬಹುದು ಮತ್ತು ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಪ್ರತಿಪಕ್ಷಗಳು ತೀವ್ರ ಕಳವಳ ವ್ಯಕ್ತಪಡಿಸಿದವು.

ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಘಟನೆಯು "ಎಚ್ಚರಿಕೆ ಗಂಟೆ"ಯಾಗಿದ್ದು, ಜನಸಂದಣಿಯನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಈ ಮಸೂದೆಯನ್ನು ತಂದಿದೆ. ಅಂತಹ ಸಭೆಗಳಿಗೆ ಅನುಮತಿ ಅಗತ್ಯ ಎತ್ತಿ ತೋರಿಸಿದ ಪರಮೇಶ್ವರ ಅವರು, ಈ ಮಸೂದೆ ಕಾರ್ಯಕ್ರಮ ಆಯೋಜಕರನ್ನು ಹೊಣೆಗಾರರನ್ನಾಗಿ ಮಾಡಲು ಅವಕಾಶ ನೀಡುತ್ತದೆ ಎಂದು ಹೇಳಿದರು.

7,000 ಕ್ಕಿಂತ ಕಡಿಮೆ ಜನರು ಸೇರುವ ಯಾವುದೇ ಕಾರ್ಯಕ್ರಮಕ್ಕೆ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯುವ ಅಗತ್ಯವಿರುತ್ತದೆ. ಆದರೆ 7,000 ಕ್ಕಿಂತ ಹೆಚ್ಚು ಮತ್ತು 50,000 ಕ್ಕಿಂತ ಕಡಿಮೆ ಜನರು ಸೇರುವ ನಿರೀಕ್ಷೆಯಿರುವ ಕಾರ್ಯಕ್ರಮಗಳಿಗೆ ಎಎಸ್ಪಿ ಅಥವಾ ಎಸಿಪಿ(ಬೆಂಗಳೂರಿನಲ್ಲಿ) ಅನುಮತಿ ಅಗತ್ಯವಿರುತ್ತದೆ ಎಂದರು.

Home Minister
ಜನಸಂದಣಿ ನಿಯಂತ್ರಣ ಮಸೂದೆ ವಿಧಾನಸಭೆಯಲ್ಲಿ ಮಂಡನೆ: ಅನುಮತಿ ರಹಿತ ಕಾರ್ಯಕ್ರಮ ಆಯೋಜಿಸಿದರೆ 1 ಕೋಟಿ ರೂ ದಂಡ..!

50,000 ಕ್ಕಿಂತ ಹೆಚ್ಚು ಜನರು ಸೇರುವ ನಿರೀಕ್ಷೆಯಿರುವ ಕಾರ್ಯಕ್ರಮಗಳಿಗೆ ಎಸ್ಪಿ ಅಥವಾ ಆಯುಕ್ತರಿಂದ ಅನುಮತಿ ಅಗತ್ಯವಿರುತ್ತದೆ.

ಮಸೂದೆಯ ಪ್ರಕಾರ, ಆಯೋಜಕರು ಉದ್ದೇಶಿತ ಕಾರ್ಯಕ್ರಮಕ್ಕೆ 10 ದಿನಗಳ ಮೊದಲು ಅನುಮತಿಗಾಗಿ ಅರ್ಜಿ ಸಲ್ಲಿಸಬೇಕು ಮತ್ತು ಆಯೋಜಕರು 1 ಕೋಟಿ ರೂ.ಗಳ ಪರಿಹಾರ ಬಾಂಡ್ ಸಲ್ಲಿಸಬೇಕು. 50,000 ಕ್ಕಿಂತ ಹೆಚ್ಚು ಜನರು ಸೇರುವ ಕಾರ್ಯಕ್ರಮಗಳಿಗೆ ಪರಿಹಾರ ಬಾಂಡ್ ಅನ್ವಯಿಸುತ್ತದೆ. ಆದರೆ ಖಾಸಗಿ ಜಾಗದಲ್ಲಿ ನಡೆಸುವ ಮದುವೆಗಳಂತಹ ಕೌಟುಂಬಿಕ ಕಾರ್ಯಕ್ರಮಗಳಿಗೆ ಮಸೂದೆಯ ನಿಬಂಧನೆಗಳ ಅಡಿಯಲ್ಲಿ ವಿನಾಯಿತಿ ಇದೆ.

ಅನುಮತಿಯಿಲ್ಲದೆ ಕಾರ್ಯಕ್ರಮಗಳನ್ನು ಆಯೋಜಿಸುವವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು 1 ಕೋಟಿ ರೂ. ದಂಡ ವಿಧಿಸಲಾಗುತ್ತದೆ. ಯಾವುದೇ ಕಾರ್ಯಕ್ರಮದಲ್ಲಿ ಗಾಯಗಳಾದರೆ ಆಯೋಜಕರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ಸಾವುನೋವುಗಳು ಸಂಭವಿಸಿದರೆ 10 ವರ್ಷ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ಗೃಹ ಸಚಿವರು ಹೇಳಿದರು.

"ಇದು ಮರಣೋತ್ತರ ಮಸೂದೆ, ನಾನು ಇದನ್ನು SOP ಮಸೂದೆ ಎಂದು ಕರೆಯುತ್ತೇನೆ." ಕ್ರೀಡಾಂಗಣದ ಬಳಿ ಕಾಲ್ತುಳಿತಕ್ಕೆ ಕಾರಣರಾದವರನ್ನು ಶಿಕ್ಷಿಸುವ ಗುರಿಯನ್ನು ಈ ಮಸೂದೆ ಹೊಂದಿದೆಯೇ ಎಂದು ಪ್ರಶ್ನಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಮಸೂದೆಯು ಪೊಲೀಸರಿಗೆ ಆಯುಧವಾಗಬಾರದು ಎಂದು ಹೇಳಿದರು.

Home Minister
ಜನಸಂದಣಿ ನಿಯಂತ್ರಣ ಮಸೂದೆ ವಿಧಾನಸಭೆಯಲ್ಲಿ ಮಂಡನೆ: ಅನುಮತಿ ರಹಿತ ಕಾರ್ಯಕ್ರಮ ಆಯೋಜಿಸಿದರೆ 1 ಕೋಟಿ ರೂ ದಂಡ..!

ಎಲ್ಲಾ ರಾಜಕೀಯ ಪಕ್ಷಗಳು ಕಾರ್ಯಕ್ರಮಗಳನ್ನು ನಡೆಸುತ್ತವೆ. ಏನಾದರೂ ತಪ್ಪಾದಲ್ಲಿ, ಆ ಪಕ್ಷದ ಗತಿಯೇನು? ಇದರ ಬಗ್ಗೆ ಯೋಚಿಸಬೇಕು ಎಂದು ಆರ್ ಅಶೋಕ್ ಹೇಳಿದರು.

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಈ ಮಸೂದೆಯು ಪ್ರತಿಭಟನೆಗಳನ್ನು ಕೊಲ್ಲುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಇದು ಬ್ರಿಟಿಷ್ ಯುಗದ ಕಾನೂನಿಗಿಂತ ಹೆಚ್ಚು ಕ್ರೂರವಾಗಿದೆ ಎಂದ ಯತ್ನಾಳ್, ಒಂದು ಸಮುದಾಯವು ದಿನಕ್ಕೆ ಐದು ಬಾರಿ ಕೂಗಲು ಯಾವುದೇ ಅನುಮತಿಯ ಅಗತ್ಯವಿಲ್ಲ. ಗಣೇಶ ಹಬ್ಬದ ಸಮಯದಲ್ಲಿ ಧ್ವನಿವರ್ಧಕ ಬಳಸುವ ವಿಷಯಕ್ಕೆ ಬಂದಾಗ ಸಮಸ್ಯೆ ಸೃಷ್ಟಿಯಾಗುತ್ತದೆ. ಈ ಮಸೂದೆಯು ಒಂದು ಧರ್ಮದ ಕಾರ್ಯಕ್ರಮಗಳನ್ನು ಗುರಿಯಾಗಿಸಿಕೊಂಡು ಪ್ರತಿಭಟನೆಗಳನ್ನು ಮೊಟಕುಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮಸೂದೆಯಲ್ಲಿನ ಕೆಲವು ಷರತ್ತುಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಸುನೀಲ್ ಕುಮಾರ್, ಸಮಸ್ಯೆಗಳ ಗಂಭೀರತೆಯನ್ನು ಆಧರಿಸಿ ರಾತ್ರಿಯಿಡೀ ಪ್ರತಿಭಟನೆಗಳನ್ನು ಯೋಜಿಸಲಾಗುತ್ತದೆ, ನಂತರ 10 ದಿನಗಳ ಮೊದಲು ಅನುಮತಿ ಸಾಧ್ಯವಿಲ್ಲ ಎಂದು ಗಮನಸೆಳೆದರು.

ದೇವಾಲಯ ಅಥವಾ ಧಾರ್ಮಿಕ ಜಾತ್ರೆಗಳು ಮತ್ತು ಉತ್ಸವಗಳ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಹೇಳಿದ ಅವರು, ಮಸೂದೆಯ ನಿಬಂಧನೆಗಳು ಅವುಗಳಿಗೂ ಅನ್ವಯವಾದರೆ ದೇವಾಲಯ 1 ಕೋಟಿ ರೂ.ಗಳ ಬಾಂಡ್ ಅನ್ನು ಹೇಗೆ ನೀಡುತ್ತದೆ?, ಸರ್ಕಾರಿ ಕಾರ್ಯಕ್ರಮದಲ್ಲಿ ಏನಾದರೂ ತಪ್ಪಾದಲ್ಲಿ ಯಾರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ? ಎಂದು ಪ್ರಶ್ನಿಸಿದರು.

ಇತರ ಹಲವಾರು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸಹ ಮಸೂದೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಶಾಸಕರು ಎತ್ತಿದ ಕಳವಳಗಳಿಗೆ ಉತ್ತರಿಸಿದ ಪರಮೇಶ್ವರ, 10 ದಿನಗಳ ಷರತ್ತನ್ನು ಐದಕ್ಕೆ ಇಳಿಸಲಾಗುವುದು ಎಂದು ಹೇಳಿದರು.

ಧಾರ್ಮಿಕ ಕಾರ್ಯಕ್ರಮಗಳು, ಸಾಮೂಹಿಕ ವಿವಾಹಗಳು ಮತ್ತು ಸರ್ಕಾರಿ ಕಾರ್ಯಕ್ರಮಗಳಿಗೆ ವಿನಾಯಿತಿ ನೀಡಲಾಗುವುದು ಎಂದು ಅವರು ಹೇಳಿದರು.

ಪರಮೇಶ್ವರ ಅವರ ಉತ್ತರದಿಂದ ತೃಪ್ತರಾಗದ ವಿರೋಧ ಪಕ್ಷದ ಸದಸ್ಯರು ಮಸೂದೆಯಲ್ಲಿ ಬಹಳಷ್ಟು ಸಮಸ್ಯೆಗಳಿವೆ ಮತ್ತು ಅದು ಕಾಯಿದೆಯಾಗುವ ಮೊದಲು ಸುದೀರ್ಘ ಚರ್ಚೆ ಅಗತ್ಯವಿದೆ. ಇದನ್ನು ಸದನ ಸಮಿತಿಗೆ ವಹಿಸುವಂತೆ ಆಗ್ರಹಿಸಿದರು. ಇದಕ್ಕೆ ಗೃಹ ಸಚಿವ ಪರಮೇಶ್ವರ್‌ ಅವರು ಸದನ ಸಮಿತಿ ಕಳುಹಿಸಲು ಒಪ್ಪಿಗೆ ಸೂಚಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com