
ಬೆಂಗಳೂರು: ಗಣೇಶ ಚತುರ್ಥಿ ಸೇರಿದಂತೆ ಇತರೆ ಹಬ್ಬಗಳ ಸಂದರ್ಭದಲ್ಲಿ ಬಳಕೆ ಮಾಡುವ ಧ್ವನಿವರ್ಧಕಗಳ ಮೇಲೆ ನಿರ್ಬಂಧ ಹೇರಲಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಹಾಗೂ ವಿಪಕ್ಷಗಳ ನಡುವೆ ವಾಕ್ಸಮರ ನಡೆದಿದೆ.
ವಿಧಾನಸಭೆಯಲ್ಲಿ ಬುಧವಾರ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಬಿಜೆಪಿಯ ವೇದವ್ಯಾಸ ಕಾಮತ್ ಅವರು, ಹಬ್ಬಗಳ ಆಚರಣೆಯ ವೇಳೆ ನಿರ್ಬಂಧಗಳನ್ನು ವಿಧಿಸುವ ಮೂಲಕ ಪೊಲೀಸರು ಜನರಿಗೆ ಕಿರುಕುಳ ನೀಡುತ್ತಾರೆಂದು ಆರೋಪಿಸಿದರು.
ದಕ್ಷಿಣ ಕನ್ನಡದಲ್ಲಿ ಜಿಲ್ಲೆಯಲ್ಲಿ ಹಲವಾರು ಧಾರ್ಮಿಕ ಆಚರಣೆಗಳಿವೆ. ನೇಮ, ಕೋಲ, ಯಕ್ಷೋತ್ಸವ, ಬ್ರಹ್ಮಕಲಶೋತ್ಸವ, ರಥೋತ್ಸವ, ಕೃಷ್ಣಾಜನ್ಮಾಷ್ಟಮಿ, ಗಣೇಶೋತ್ಸವ, ನವರಾತ್ರಿ, ಹುಲಿವೇಷ ಎಲ್ಲವೂ ನಡೆಯುತ್ತಿರುತ್ತವೆ. ಇತ್ತೀಚೆಗೆ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತಿದ್ದವು. ಅಲ್ಲಿದ್ದ ಧ್ವನಿವರ್ಧಕಗಳ ಬಳಕೆಗೆ ನಿರ್ಬಂಧ ವಿಧಿಸಿ, ಮೊಸರು ಕುಡಿಕೆ ಒಡೆಯುವುದಕ್ಕೂ ಪೊಲೀಸರು ಅಡ್ಡಿಪಡಿಸಿದ್ದಾರೆ. ಕೇಳಿದರೆ ನ್ಯಾಯಾಲಯದ ಆದೇಶ ಇದೆ ಎನ್ನುತ್ತಾರೆ. ಧ್ವನಿವರ್ಧಕಗಳನ್ನು ವಶಪಡಿಸಿಕೊಂಡು, ಅವುಗಳನ್ನು ಒದಗಿಸಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆಂದು ಹೇಳಿದರು.
ನಮ್ಮ ಸರಕಾರ ಇದ್ದಾಗಲೂ ನ್ಯಾಯಾಲಯದ ಆದೇಶಗಳಿದ್ದವು. ಆದರೆ, ನಾವು ಜನರಿಗೆ ತೊಂದರೆ ಮಾಡಿರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಹಿಂದೂ ಕಾರ್ಯಕ್ರಮಗಳಿಗೆ ತೊಂದರೆ ಆಗುತ್ತಿದೆ. ಮುಂದೆ ಗಣೇಶೋತ್ಸವ, ನವರಾತ್ರಿ ಉತ್ಸವಗಳು ಬರಲಿವೆ. ಕಾನೂನು ಏನೇ ಇರಬಹುದು, ಧಾರ್ಮಿಕ ನಂಬಿಕೆಯ ನಮ್ಮ ಕಾರ್ಯಕ್ರಮಗಳಿಗೆ ತೊಂದರೆ ಮಾಡಬಾರದು. ಈ ಸಮಸ್ಯೆಗೆ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಹೊಣೆ ಆಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ದನಿಗೂಡಿಸಿದರು. ಪೊಲೀಸರು ಗಣೇಶ ಮೂರ್ತಿಯನ್ನೂ ಬಂಧನಕ್ಕೊಳಪಡಿಸಿದ್ದಾರೆ. ಈ ಮೂರ್ತಿಯನ್ನು ಮಂಡ್ಯದಲ್ಲಿರುವ ತಮ್ಮ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆಂದು ಟೀಕಿಸಿದರು.
ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಅವರು ಮಾತನಾಡಿ, ಸರ್ಕಾರಿ ಶಾಲೆಗಳ ಆವರಣದಲ್ಲಿ ಶೈಕ್ಷಣಿಕೇತರ ಚಟುವಟಿಕೆಗಳನ್ನು ನಿಷೇಧಿಸಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ ಎಂದು ಹೇಳಿದರು.
ಹಳ್ಳಿಗಳಲ್ಲಿ, ಹಬ್ಬದ ಸಮಯದಲ್ಲಿ ಸಾಮಾನ್ಯವಾಗಿ ಸರ್ಕಾರಿ ಶಾಲೆಗಳ ಆವರಣದಲ್ಲಿ ಗಣೇಶನ ಮೂರ್ತಿಗಳನ್ನು ಇಡಲಾಗುತ್ತದೆ. ಈಗ, ಇದು ಶೈಕ್ಷಣಿಕೇತರ ಚಟುವಟಿಕೆ ಎಂದು ಹೇಳಿ ಬ್ಲಾಕ್ ಶಿಕ್ಷಣ ಅಧಿಕಾರಿಗಳು ಸರ್ಕಾರಿ ಶಾಲೆಗಳ ಆವರಣದಲ್ಲಿ ಗಣೇಶನ ಮೂರ್ತಿಗಳನ್ನು ಇಡಲು ಅನುಮತಿ ನಿರಾಕರಿಸುತ್ತಿದ್ದಾರೆ, ಇದನ್ನು ನಿಲ್ಲಿಸಬೇಕು ಎಂದು ತಿಳಿಸಿದರು.
Advertisement