
ಬೆಂಗಳೂರು: ಪರಿಶಿಷ್ಟ ಜಾತಿ ಸಮುದಾಯವನ್ನು ಎಡಗೈ, ಬಲ ಮತ್ತು ಇತರೆ ಎಂಬ ಮೂರು ಗುಂಪುಗಳಾಗಿ ಮರುವರ್ಗೀಕರಣ ಮಾಡಲಾಗಿದ್ದು, ಈ ಪ್ರವರ್ಗಗಳ ಸಂಖ್ಯೆ ಮರು ಮಾರ್ಪಡಣೆ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಕಾವೇರಿ ನಿವಾಸದಲ್ಲಿ ಅಲೆಮಾರಿ ಜನಾಂಗದ ಮುಖಂಡರು, ಹೋರಾಟಗಾರರು ಮತ್ತು ಚಿಂತಕರುಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸುದೀರ್ಘ ಸಭೆ ನಡೆಸಿದರು. ಈ ವೇಳೆ ಅವರ ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ ಮುಖ್ಯಮಂತ್ರಿಗಳು ಪ್ರವರ್ಗಗಳ ಸಂಖ್ಯೆ ಮರು ಮಾರ್ಪಡಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದು, ಆರ್ಥಿಕ ನೆರವು ಸೇರಿದಂತೆ ಸರ್ಕಾರದಿಂದ ಎಲ್ಲಾ ರೀತಿಯ ಸಹಾಯದ ಭರವಸೆ ನೀಡಿದರು. ಅಲ್ಲದೆ, ದೂರುಗಳನ್ನು ಪರಿಹರಿಸಲು ಭವಿಷ್ಯದಲ್ಲಿ ಸ್ಥಾಪಿಸಲು ಪ್ರಸ್ತಾಪಿಸಲಾದ ಪ್ರತ್ಯೇಕ ಪರಿಶಿಷ್ಟ ಜಾತಿಗಳ ಆಯೋಗವನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ನ್ಯಾಯಮೂರ್ತಿ ನಾಗಮೋಹನ್ದಾಸ್ ಆಯೋಗದ ವರದಿಯಂತೆ ಎಸ್ ಸಿ ಸಮುದಾಯವನ್ನು ಐದು ಗುಂಪುಗಳಾಗಿ ವರ್ಗೀಕರಣ ಮಾಡಿತ್ತು. ಗುಂಪು 1 ಅತೀ ಹಿಂದುಳಿದ ಜಾತಿಗಳು ಶೇ.1, ಗುಂಪು 2 ಎಡಗೈ ಜಾತಿಗಳು ಶೇ 6, ಗುಂಪು 3 ಬಲಗೈ ಜಾತಿಗಳು ಶೇ.5, ಗುಂಪು 4 ಬಂಜಾರ, ಬೋವಿ, ಕೊರಚ, ಕೊರಮ (ಅಸ್ಪೃಶ್ಯರಲ್ಲದ ಜಾತಿಗಳು) ಶೇ.4, ಗುಂಪು 5 ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿ ಶೇ.1 ಎಂದು ವರ್ಗೀಕರಣ ಮಾಡಿತ್ತು.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಎಡ, ಬಲ ಹಾಗೂ ಇತರೆ ಎಂದು ಮೂರು ವಿಂಗಡನೆ ಮಾಡಿ ಮರುವರ್ಗೀಕರಿಸಿ ಒಳಮೀಸಲಾತಿ ಮರುಹಂಚಿಕೆಗೆ ತೀರ್ಮಾನಿಸಲಾಗಿದೆ. ಇದು ಸಮುದಾಯಗಳ ವಿರೋಧಕ್ಕೆ ಕಾರಣವಾಗಿದೆ.
ಶೇ.1 ಮೀಸಲಾತಿ ಶಿಫಾರಸಿನೊಂದಿಗೆ A ಗುಂಪಿನಲ್ಲಿದ್ದ 'ಅತ್ಯಂತ ಹಿಂದುಳಿದ' 59 ಸಮುದಾಯಗಳನ್ನು ಶೇ.5 ಮೀಸಲಾತಿ ಹೊಂದಿರುವ ಭೋವಿ, ಲಂಬಾಣಿ, ಕೊರಚ ಮತ್ತು ಕೊರಮ ಸಮುದಾಯಗಳಿರುವ ಗ್ರೂಪ್ ಸಿ'ಗೆ ಸೇರ್ಪಡೆಗೊಳಿಸಲಾಗಿದೆ.
ಆ ಹಿನ್ನೆಲೆಯಲ್ಲಿ ಡಾ. ಬಾಲಗುರುಮೂರ್ತಿ ನೇತೃತ್ವದ ನಿಯೋಗವು ಪ್ರವರ್ಗವನ್ನು ಮರು ಮಾರ್ಪಡಿಸಲು ಮತ್ತು ಶೇ.1 ಮೀಸಲಾತಿಯೊಂದಿಗೆ A ಗುಂಪಿಗೆ ವರ್ಗಾಯಿಸುವಂತೆ ಮನವಿ ಮಾಡಿತು. ಈ ವೇಳೆ ಈಗ ಅದು ಅಸಾಧ್ಯ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆಂದು ಮೂಲಗಳು ತಿಳಿಸಿವೆ.
'ದಕ್ಕಲಿಗ' ಸಮುದಾಯದ ಶಾಂತರಾಜು ಮತ್ತು 'ಶಿಳ್ಳೆಕ್ಯಾತ' ಸಮುದಾಯಗಳ ಮಂಜುನಾಥ್ ಅವರು ನಿಯೋಗದ ಭಾಗವಾಗಿದ್ದರು.
ಮಾಜಿ ಸಚಿವ ಎಚ್. ಆಂಜನೇಯ ಮತ್ತು ಅವರ ಸೋದರ ಮಾವ ಕೆ. ಎಸ್. ಬಸವಂತಪ್ಪ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಎಂಎಲ್ಸಿ ನಜೀರ್ ಅಹ್ಮದ್ ಸೇರಿದಂತೆ ಎಸ್ಸಿ ಎಡ ಸಮುದಾಯದ ಮುಖಂಡರು ಸಮುದಾಯಗಳ ಬೆಂಬಲಿಗರಾಗಿ ಹಾಜರಿದ್ದರು
Advertisement