
ಬೆಂಗಳೂರು: ಸರ್ಕಾರಿ ಅಂಕಿ ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಪ್ರತಿ ವರ್ಷ 2,000ಕ್ಕೂ ಹೆಚ್ಚು ಮಕ್ಕಳು ಕಾಣೆಯಾಗುತ್ತಿರುವ ಬಗ್ಗೆ ವರದಿಯಾಗಿರುವುದಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸೋಮವಾರ ಕಳವಳ ವ್ಯಕ್ತಪಡಿಸಿದ್ದಾರೆ.
ರಾಜಭವನದಲ್ಲಿ ಭಾರತೀಯ ನರ್ಸ್ಗಳು ಮತ್ತು ಅಲೈಡ್ ಸಂಘ ಆಯೋಜಿಸಿದ್ದ `ಮಾನವ ಕಳ್ಳಸಾಗಣೆ ವಿರೋಧಿ- ಪೋಷಕರಿಗೆ ಅರಿವು ಮೂಡಿಸುವ 'ಗೃಹ ಶುದ್ಧಿ ಅಭಿಯಾನ'ಕ್ಕೆ ಚಾಲನೆ ನೀಡಿ ಮಾತನಾಡಿದ ರಾಜ್ಯಪಾಲರು, ಕಾಣೆಯಾದ ಅಂತಹ ಮಕ್ಕಳಲ್ಲಿ ಸುಮಾರು ಶೇ. 10 ರಷ್ಟು ಮಕ್ಕಳು ಎಂದಿಗೂ ಪತ್ತೆಯಾಗುವುದಿಲ್ಲ. ಅಂದರೆ, ಪ್ರತಿ ವರ್ಷ 200ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಮಕ್ಕಳನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಿವೆ ಎಂದು ಹೇಳಿದರು.
ಹೆಚ್ಚಿನ ಮಕ್ಕಳು ತಮ್ಮ ದೈನಂದಿನ ಚಟುವಟಿಕೆಗಳ ಸಮಯದಲ್ಲಿ ಕಾಣೆಯಾಗುತ್ತಿದ್ದಾರೆ ಎಂದು ವರದಿಯಲ್ಲಿ ಬಹಿರಂಗಪಡಿಸಲಾಗಿದೆ. ಕೆಲವು ಮಕ್ಕಳು ಶಾಲೆಗೆ ಅಥವಾ ಟ್ಯೂಷನ್ಗೆ ಹೋಗುವಾಗ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದರೆ, ಕೆಲವರು ಆಟವಾಡುವಾಗ ಅಥವಾ ಮಾರುಕಟ್ಟೆಗೆ ಹೋಗುವಾಗ ಕಾಣೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಸುಮಾರು ಶೇ. 40 ರಷ್ಟು ಜನರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಅಪಹರಣದ ಘಟನೆಗಳು ಹೆಚ್ಚಾಗಿವೆ. ಕರ್ನಾಟಕದಂತಹ ಅಭಿವೃದ್ಧಿ ಹೊಂದಿದ ಮತ್ತು ಪ್ರಗತಿಪರ ರಾಜ್ಯದಲ್ಲೂ ಮಕ್ಕಳ ಅಪಹರಣ ಘಟನೆಗಳು ಒಂದು ಸವಾಲಾಗಿ ಪರಿಣಮಿಸಿವೆ. ಕಾನೂನುಬದ್ಧ ಅಪರಾಧವಾಗಿರುವುದರ ಜೊತೆಗೆ, ಇದು ಗಂಭೀರ ಸಾಮಾಜಿಕ, ಮಾನಸಿಕ ಮತ್ತು ನೈತಿಕ ಬಿಕ್ಕಟ್ಟಾಗಿದೆ ಎಂದು ಹೇಳಿದರು.
ಅಪಹರಿಸಲ್ಪಟ್ಟ ಮಕ್ಕಳಲ್ಲಿ ಹೆಚ್ಚಿನವರು ಬಾಲಕಿಯರಾಗಿದ್ದು, ಅವರನ್ನು ಮಾನವ ಕಳ್ಳಸಾಗಣೆ, ಲೈಂಗಿಕ ಶೋಷಣೆ, ಬಾಲ ಕಾರ್ಮಿಕ ಪದ್ಧತಿ, ಅಂಗಾಂಗ ವ್ಯಾಪಾರ ಮತ್ತು ಬಲವಂತದ ಭಿಕ್ಷಾಟನೆಯಲ್ಲಿ ತೊಡಗಿರುವ ಗ್ಯಾಂಗ್ಗಳು ಅಪಹರಿಸುವ ಶಂಕೆ ವ್ಯಕ್ತವಾಗಿದ್ದು, ಕಾಣೆಯಾದ ಮಕ್ಕಳನ್ನು ಹುಡುಕಲು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ವಿಶೇಷ ಕಾರ್ಯಪಡೆಯನ್ನು ರಚಿಸಿವೆ. ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಈ ಪ್ರಕರಣಗಳ ತನಿಖೆ ನಡೆಸುತ್ತಿವೆ ಮತ್ತು ಅನುಮಾನಾಸ್ಪದ ಜಾಲಗಳ ಮೇಲೆ ನಿಗಾ ಇಡಲಾಗುತ್ತಿದೆ ಎಂದು ಹೇಳಿದರು.
ಇದನ್ನು ತಡೆಗಟ್ಟಲು ಪೋಷಕರು, ಶಾಲೆಗಳು, ಕಾಲೇಜುಗಳು, ನಾಗರಿಕರು, ಸಮಾಜ, ಸರ್ಕಾರೇತರ ಸಂಸ್ಥೆಗಳು, ಪೊಲೀಸರು, ಮಾನವ ಕಳ್ಳಸಾಗಣೆ ವಿರೋಧಿ ಘಟಕಗಳು ಮತ್ತು ಸ್ಥಳೀಯ ಸಂಸ್ಥೆಗಳು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು.
ಪೋಷಕರು ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸುವುದು, ಶಾಲಾ ಮಕ್ಕಳನ್ನು ರಕ್ಷಿಸುವುದು ಮತ್ತು ಅಪಹರಣ ಮತ್ತು ಶೋಷಣೆಯ ವಿರುದ್ಧ ಸಾಮೂಹಿಕ ಜಾಗರೂಕತೆಯನ್ನು ನಿರ್ಮಿಸುವ ಗುರಿ ಹೊಂದಿದೆ ಎಂದು ರಾಜ್ಯಪಾಲರು ತಿಳಿಸಿದರು.
Advertisement