ದಾವಣಗೆರೆ: ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆ ಸಾವು; ಪ್ರಕರಣ ದಾಖಲಾದ 24 ಗಂಟೆಗಳಲ್ಲಿ ಮಾಲೀಕನ ಬಂಧನ

ಆರಂಭದಲ್ಲಿ ಬೀದಿ ನಾಯಿಗಳ ದಾಳಿ ಎಂದು ತಪ್ಪಾಗಿ ಭಾವಿಸಲಾಗಿತ್ತು. ಪೊಲೀಸರ ಸಹಾಯದಿಂದ, ಸಂತ್ರಸ್ತೆಯನ್ನು ರಕ್ಷಿಸಿ ದಾವಣಗೆರೆಯ ಸಿಜಿ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಯಿತು.
Rottweiler dog owner Shailesh Kumar P
ನಾಯಿಗಳ ಮಾಲೀಕ ಶೈಲೇಶ್ ಕುಮಾರ್ ಬಿ
Updated on

ದಾವಣಗೆರೆ: ಡಿಸೆಂಬರ್ 5ರ ಮುಂಜಾನೆ ದಾವಣಗೆರೆಯ ಹೊರವಲಯದಲ್ಲಿ ಎರಡು ರಾಟ್‌ವೀಲರ್ ನಾಯಿಗಳು ಕಚ್ಚಿ ಮಹಿಳೆಯೊಬ್ಬರು ಸಾವಿಗೀಡಾದ ಭೀಕರ ಘಟನೆ ನಡೆದಿದೆ. ಪ್ರಕರಣ ದಾಖಲಾದ 24 ಗಂಟೆಗಳ ಒಳಗೆ ನಾಯಿಗಳ ಮಾಲೀಕರನ್ನು ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಅನಿತಾ ಕೋಮ್ ಅವರು ಹೊನ್ನೂರು ಕಡೆಗೆ ರಾತ್ರಿ 12.30 ರಿಂದ 2.30ರ ನಡುವೆ ನಡೆದುಕೊಂಡು ಹೋಗುತ್ತಿದ್ದಾಗ, ದಾವಣಗೆರೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-48ರ ಬಳಿಯ ಅವರ ಮನೆಯ ಸಮೀಪದಲ್ಲಿಯೇ ನಾಯಿಗಳು ದಾಳಿ ನಡೆಸಿದ್ದವು. ಎರಡು ರಾಟ್‌ವೀಲರ್ ನಾಯಿಗಳ ಮಾರಣಾಂತಿಕ ದಾಳಿಯಿಂದ ಆಕೆಯ ಮುಖ, ಕೈಗಳು ಮತ್ತು ಕಾಲುಗಳಿಗೆ ತೀವ್ರ ಗಾಯಗಳಾಗಿದ್ದವು.

ಆರಂಭದಲ್ಲಿ ಬೀದಿ ನಾಯಿಗಳ ದಾಳಿ ಎಂದು ತಪ್ಪಾಗಿ ಭಾವಿಸಲಾಗಿತ್ತು. ಸ್ಥಳೀಯರಾದ ಹೊನ್ನೂರು ಕರಿಬಸಪ್ಪ ಮತ್ತು ಮಲ್ಲಿಕಾರ್ಜುನ ತಮ್ಮ ಹೊಲಗಳಿಗೆ ನೀರುಣಿಸಲು ತೆರಳುತ್ತಿದ್ದಾಗ ನಾಯಿಗಳನ್ನು ಗಮನಿಸಿ ಓಡಿಸಲು ಪ್ರಯತ್ನಿಸಿದ್ದಾರೆ. ನಾಯಿಗಳು ಹಿಂದೆ ಸರಿಯದಿದ್ದಾಗ, ಅವರು ತಕ್ಷಣವೇ ತುರ್ತು ಸೇವೆ 112ಕ್ಕೆ ಕರೆ ಮಾಡಿದ್ದಾರೆ.

ಪೊಲೀಸರ ಸಹಾಯದಿಂದ, ಸಂತ್ರಸ್ತೆಯನ್ನು ರಕ್ಷಿಸಿ ದಾವಣಗೆರೆಯ ಸಿಜಿ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಯಿತು. ಆದರೆ, ಮಾರ್ಗಮಧ್ಯೆಯೇ ಬೆಳಿಗ್ಗೆ 9 ಗಂಟೆ ಸುಮಾರಿಗೆ ಆಕೆ ಸಾವಿಗೀಡಾದರು.

ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ಮೇಲ್ವಿಚಾರಣೆಯಲ್ಲಿ, ಹಿರಿಯ ಅಧಿಕಾರಿಗಳು ಮತ್ತು ದಾವಣಗೆರೆ ಗ್ರಾಮೀಣ ಪೊಲೀಸ್ ಇನ್ಸ್‌ಪೆಕ್ಟರ್ ಅಣ್ಣಯ್ಯ ಕೆಟಿ ನೇತೃತ್ವದ ತಂಡವು ನಾಯಿಗಳ ಮಾಲೀಕರನ್ನು ಪತ್ತೆಹಚ್ಚಲು ತೀವ್ರ ಶೋಧ ನಡೆಸಿತು. ಬಹು ಮೂಲಗಳಿಂದ ಗುಪ್ತಚರ ಮಾಹಿತಿ ಸಂಗ್ರಹಿಸಿದ ನಂತರ, ಪೊಲೀಸರು ದೇವರಾಜ್ ಅರಸ್ ಲೇಔಟ್ ನಿವಾಸಿ 27 ವರ್ಷದ ಶೈಲೇಶ್ ಕುಮಾರ್ ಪಿ. ಅವರನ್ನು ಬಂಧಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಶೈಲೇಶ್ ಮೂರು ರಾಟ್‌ವೀಲರ್ ನಾಯಿಗಳನ್ನು (ಬ್ರಾಡೊ, ಪಪ್ಪಿ ಮತ್ತು ಹೀರೋ) ಹೊಂದಿದ್ದಾಗಿ ಒಪ್ಪಿಕೊಂಡರು ಮತ್ತು ಅವುಗಳಲ್ಲಿ ಎರಡಾದ ಪಪ್ಪಿ ಮತ್ತು ಹೀರೋ ಇತ್ತೀಚೆಗೆ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದವು. ಇದೇ ಕಾರಣಕ್ಕೆ ಡಿಸೆಂಬರ್ 4 ರಂದು ರಾತ್ರಿ 10.30ರ ಸುಮಾರಿಗೆ ಹೊನ್ನೂರು ಬಳಿ ತಾನು ಮತ್ತು ತನ್ನ ಮಾವ ಎರಡು ನಾಯಿಗಳನ್ನು ಬಿಟ್ಟು ಹೋಗಿದ್ದೆವು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಸಂಭಾವ್ಯ ಅಪಾಯದ ಬಗ್ಗೆ ತಿಳಿದಿದ್ದರೂ, ಅವುಗಳನ್ನು ಗಮನಿಸದೆ ಬಿಟ್ಟಿದ್ದೇ, ಅನಿತಾ ಅವರ ಮೇಲೆ ಮಾರಕ ದಾಳಿಗೆ ಕಾರಣವಾಯಿತು. ಹೀಗಾಗಿ, ದಾವಣಗೆರೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 291, 105 ಮತ್ತು 106(1) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶೈಲೇಶ್‌ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಪ್ರಕರಣವನ್ನು ಭೇದಿಸಿ 24 ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸಿದ್ದಕ್ಕಾಗಿ ಇನ್ಸ್‌ಪೆಕ್ಟರ್ ಅಣ್ಣಯ್ಯ ಕೆ.ಟಿ. ಮತ್ತು ತಂಡದ ಸದಸ್ಯರಾದ ರಮೇಶ್ ಮತ್ತು ನಾಗಭೂಷಣ್ ಅವರನ್ನು ಎಸ್‌ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com