

ಬೆಂಗಳೂರು: ದೇವನಹಳ್ಳಿ ಬಳಿ ನಿರ್ಮಾಣವಾಗಿರುವ ಫಾಕ್ಸ್ಕಾನ್ ಕಂಪನಿಯಿಂದ 30 ಸಾವಿರ ಉದ್ಯೋಗ ಸೃಷ್ಟಿಯಾಗಿದ್ದು, ಇದರ ಬೆನ್ನಲ್ಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ.
ಕರ್ನಾಟಕದಲ್ಲಿ ಫಾಕ್ಸ್ಕಾನ್ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗಾಗಿ ಕ್ರೆಡಿಟ್ ಪಡೆಯುತ್ತಿರುವ ಕಾಂಗ್ರೆಸ್ ನಾಯಕರವಿರುದ್ಧ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಮತ್ತು ಲಹರ್ ಸಿಂಗ್ ಸಿರೋಯಾ ಅವರು ಕಿಡಿಕಾರಿದ್ದಾರೆ.
ನನ್ನ ಅಧಿಕಾರಾವಧಿಯಲ್ಲಿ ಮಾರ್ಚ್ 3, 2023 ರಂದು ಫಾಕ್ಸ್ಕಾನ್ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಫಾಕ್ಸ್ಕಾನ್ ಚೇರ್ಮನ್ ಯಂಗ್ ಲಿಯುವವರೊಂದಿಗೆ ವಿಸ್ತೃತ ಚರ್ಚೆಗಳ ನಂತರ ಸಹಿ ಹಾಕಲಾಗಿದೆ ಎಂದು ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರ 300 ಎಕರೆ ಭೂಮಿ ಹೂಡಿಕೆಗೆ ಮೀಸಲಿಟ್ಟಿದ್ದು, ಸುಮಾರು 1 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇತ್ತು ಎಂದು ತಿಳಿಸಿದ್ದಾರೆ. ಈ ಕುರಿತು ಯಂಗ್ ಲಿಯು ಜೊತೆಗಿನ ಭೇಟಿಯ ವಿಡಿಯೋವನ್ನು ಕೂಡ ಶೇರ್ ಮಾಡಿದ್ದಾರೆ.
ಇದೇ ವೇಳೆ ಮೇಕ್ ಇನ್ ಇಂಡಿಯಾ ನಿಜವಾಗಿಯೂ ಯಶಸ್ವಿಯಾದರೆ, ಬಿಜೆಪಿಯ “ಡಬಲ್-ಎಂಜಿನ್” ರಾಜ್ಯಗಳು ಕರ್ನಾಟಕವು ನೀಡಿದ ಸಾಧನೆಗಳಿಗೆ ಏಕೆ ಹೊಂದಿಕೆಯಾಗುವುದಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆಡಳಿತ ವಿಫಲವಾದಾಗ, ಇತರೆ ಕೆಲಸಗಳನ್ನು ತಾವೇ ಮಾಡಿದ್ದು ಎಂದು ಬಿಂಬಿಸುವ ಕೆಲಸ ಮಾಡಲಾಗುತ್ತದೆ ಎಂದು ಟೀಕಿಸಿದರು.
ಲಹರ್ ಸಿಂಗ್ ಸಿರೋಯಾ ಅವರೂ ಕೂಡ ರಾಜ್ಯ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೆಲ್ಲಾ ಹೂಡಿಕೆಗಳು ನೆರೆ ರಾಜ್ಯಗಳಿಗೆ ಹೋಗುತ್ತಿವೆ. ಒಂದು ಶೇತಪತ್ರ ಬಿಡುಗಡೆಯಾದರೆ, ಸಿದ್ದರಾಮಯ್ಯ ಅವರ ಮೊದಲ ಅಧಿಕಾರಾವಧಿ ಮತ್ತು ಈಗ ಎಷ್ಟು ಕಂಪನಿಗಳು ಕರ್ನಾಟಕದಿಂದ ಹೊರ ರಾಜ್ಯಗಳಿಗೆ ತೆರಳಿ, ಹೂಡಿಕೆ ಮಾಡಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ 'ಭಾರತದ ಆರ್ಥಿಕತೆ ಸತ್ತಿದೆ' ಎಂದು ಅಬ್ಬರಿಸುತ್ತಿದ್ದ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಇದೀಗ ಭಾರತದಲ್ಲಿನ ಹೂಡಿಕೆಗಳಿಗೆ ಕ್ರೆಡಿಟ್ ಪಡೆಯಲು ಹಪಹಪಿಸುತ್ತಿರುವುದು ಆಶ್ಚರ್ಯಕರವಾಗಿದೆ. ಕೇಂದ್ರ ಸರ್ಕಾರದ ಗಮನಕ್ಕೆ ಬರದೇ, ಅದರ ಸಹಕಾರವಿಲ್ಲದೇ ಯಾವುದೇ ಬಹುರಾಷ್ಟ್ರೀಯ ಕಂಪನಿ ಭಾರತದ ಯಾವುದಾದರೂ ರಾಜ್ಯದಲ್ಲಿ ಹೂಡಿಕೆ ಮಾಡುವುದು ಸಾಧ್ಯವೇ? ಆದರೆ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿಯವರಿಗೆ ಇಂತಹ ಸಾಮಾನ್ಯ ಜ್ಞಾನದ ಕೊರತೆ ನನಗೆ ತೀವು ಅಚ್ಚರಿ ಉಂಟುಮಾಡಿದೆ ಎಂದು ಟೀಕಿಸಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವನ್ನು 'ನಿರ್ಜೀವ ಆರ್ಥಿಕತೆ' ಎಂದು ಜರಿದಾಗ, ಅದಕ್ಕೆ ಮೊದಲು ಬೆಂಬಲ ವ್ಯಕ್ತಪಡಿಸಿದವರೇ ರಾಹುಲ್ ಗಾಂಧಿ. ನಂತರ ಕಾಂಗ್ರೆಸ್ ಪಕ್ಷದ ಅವರ ಆಪ್ತ ವಲಯವೂ ಅದನ್ನೇ ಪುನರುಚ್ಚರಿಸಿತು. ಅಷ್ಟೇ ಅಲ್ಲ, ವಿದೇಶ ಪ್ರವಾಸಗಳ ವೇಳೆ ರಾಹುಲ್ ಗಾಂಧಿಯವರು ಭಾರತ ಹಾಗೂ ಭಾರತದ ವ್ಯಾಪಾರ ವಾತಾವರಣದ ಬಗ್ಗೆ ನಿರಂತರವಾಗಿ ನಕಾರಾತ್ಮಕವಾಗಿ ಮಾತನಾಡಿದ್ದಾರೆ. ಆದರೆ ಅದೇ ಕಾಂಗ್ರೆಸ್ ಪಕ್ಷ ಇದೀಗ ಕರ್ನಾಟಕದಲ್ಲಿ ಫಾಕ್ಸ್ ಕಾನ್ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಗೆ ಕ್ರೆಡಿಟ್ ಪಡೆದುಕೊಳ್ಳಲು ಯತ್ನಿಸುತ್ತಿರುವುದು ವಿರೋಧಾಭಾಸವಾಗಿದೆ.
ಪ್ರಧಾನಿ ಮೋದಿ ಅವರ ನೇತೃತ್ವದ NDA ಸರ್ಕಾರ ಕಳೆದ 12 ವರ್ಷಗಳಲ್ಲಿ ವಿದೇಶಿ ಹೂಡಿಕೆಗಳಿಗೆ ಪೂರಕ ವಾತಾವರಣ, ಹಣಕಾಸು ಶಿಸ್ತು ಮತ್ತು ಆರ್ಥಿಕ ಸ್ಥಿರತೆ ಒದಗಿಸದೇ ಇದ್ದಿದ್ದರೆ, ಯಾವುದೇ ಬಹುರಾಷ್ಟ್ರೀಯ ಕಂಪನಿ ಭಾರತದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿರಲಿಲ್ಲ.ಹೂಡಿಕೆಗಳಿಗೆ ಸ್ಥಿರತೆ ಮತ್ತು ವಿಶ್ವಾಸ ನೀಡಿದ ಕೀರ್ತಿ ಪ್ರಧಾನಿ ಮೋದಿಯವರ ನೇತೃತ್ವದ NDA ಸರ್ಕಾರಕ್ಕೇ ಸಲ್ಲುತ್ತದೆ.
ಅದೇ ರೀತಿ, ಕರ್ನಾಟಕವನ್ನು ತಂತ್ರಜ್ಞಾನ ಕ್ಷೇತ್ರದ ಕೇಂದ್ರವನ್ನಾಗಿ ರೂಪಿಸಿದ ಕೀರ್ತಿ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸೇರಿದ್ದಲ್ಲ. 1980ರಿಂದ ರಾಜ್ಯದಲ್ಲಿ ಆಡಳಿತ ನಡೆಸಿದ ವಿವಿಧ ಸರ್ಕಾರಗಳು ಜಾರಿಗೆ ತಂದ ತಂತ್ರಜ್ಞಾನವರ ನೀತಿಗಳ ಫಲವಾಗಿ ಇಂದು ಕರ್ನಾಟಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ.
ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ, ಕಾಂಗ್ರೆಸ್ ಅಧಿಕಾರದಲ್ಲಿದ್ದ ಬಹುತೇಕ ಅವಧಿಗಳಲ್ಲಿ ಕರ್ನಾಟಕಕ್ಕೆ ಬರಬೇಕಾಗಿದ್ದ ಅನೇಕ ಹೂಡಿಕೆಗಳು ನೆರೆ ರಾಜ್ಯಗಳ ಪಾಲಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಹೂಡಿಕೆಗಳ ಕುರಿತು ಶ್ವೇತಪತ್ರ ಹೊರಡಿಸಿದರೆ, ಅವರ ಮೊದಲ ಅವಧಿ ಹಾಗೂ ಪ್ರಸ್ತುತ ಅವಧಿಯಲ್ಲಿ ಎಷ್ಟು ಕಂಪನಿಗಳು ಕರ್ನಾಟಕದ ಹೊರಗೆ ಹೂಡಿಕೆ ಮಾಡಲು ಆಸಕ್ತಿ ತೋರಿಸಿದ್ದವು ಎಂಬುದು ಜನತೆಗೆ ಸ್ಪಷ್ಟವಾಗುತ್ತದೆ.
ಜಾತಿ ವಿಭಜನೆ, ಅಹಿಂದ ಅಜೆಂಡಾ ಉತ್ತೇಜನ ಮತ್ತು ನಗರ ನಕ್ಸಲರ ಪ್ರೋತ್ಸಾಹವನ್ನ ಪುಮುಖವಾಗಿಸಿಕೊಂಡಿರುವ, ಶ್ರೀ ಸಿದ್ದರಾಮಯ್ಯನವರ ಸರ್ಕಾರಕ್ಕೆ ಬೇರೆ ಯಾವುದೇ ದೀರ್ಘಕಾಲೀನ ಅಭಿವೃದ್ಧಿ ದೃಷ್ಟಿಕೋನವಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಫಾಕ್ಸ್ ಕಾನ್ ಹೂಡಿಕೆ ಕುರಿತಾಗಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ- “ನಾವು ಪ್ರಧಾನ ಮಂತ್ರಿಯವರ ದೃಷ್ಟಿಕೋನವನ್ನು ಕಾರ್ಯಗತಗೊಳಿಸಿ ಭಾರತವನ್ನು ಉತ್ಪಾದಕ ಆರ್ಥಿಕತೆಯಾಗಿ ಪರಿವರ್ತಿಸುತ್ತಿದ್ದೇವೆ” ಎಂಬ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆಂದು ತಿಳಿಸಿದ್ದಾರೆ.
Advertisement