

ಬೆಂಗಳೂರು: ಕೋಗಿಲು ಸಮೀಪ ಅಕ್ರಮ ಕಟ್ಟಡಗಳ ನೆಲಸಮ ವಿಚಾರದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅಲ್ಲಿನ ಸಂಸದ ಕೆ.ಸಿ.ವೇಣುಗೋಪಾಲ್ ಅವರು ಮಧ್ಯೆ ಪ್ರವೇಶಿಸಿರುವುದಕ್ಕೆ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.
ಈ ಕುರಿತು ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಬೆಂಗಳೂರಿನ ಕೋಗಿಲು ಬಡಾವಣೆಯ ಅಕ್ರಮ ನಿವಾಸಿಗಳ ತೆರವುಗೊಳಿಸಿರುವ ಕ್ರಮ ಕೈಗೊಂಡಿರುವ GBA ಕ್ರಮವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಮರ್ಥಿಸಿಕೊಂಡು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೇಳಿಕೆಯನ್ನು ರಾಜಕೀಯ ಗಿಮಿಕ್ ಎಂದು ಟೀಕಿಸಿದ್ದರು, ಇದರ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ರವರ ಹೇಳಿಕೆಗೆ ಮಣಿದಂತೆ ಪ್ರತಿಕ್ರಿಯಿಸಿರುವ ಡಿ.ಕೆ ಶಿವಕುಮಾರ್ ರವರ ಊಸರವಳ್ಳಿ ಬಣ್ಣದ ಮಾತುಗಳು ಕರ್ನಾಟಕದ ಸ್ವಾಭಿಮಾನದ ಘನತೆಯನ್ನು ಕುಗ್ಗಿಸಿದೆ ಎಂದು ಕಿಡಿದ್ದಾರೆ.
ಮುಂದೆ ಬರುವ ಕೇರಳ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇರಳ ಮೂಲದ ಕೆ.ಸಿ. ವೇಣುಗೋಪಾಲ್ ರವರು ಕರ್ನಾಟಕ ಸರ್ಕಾರದ ಮೇಲೆ ತಾವು ನಿಯಂತ್ರಣ ಸಾಧಿಸಿದ್ದೇವೆಂಬುದನ್ನು ಸಾಕ್ಷೀಕರಿಸುವ ನಿಟ್ಟಿನಲ್ಲಿ ಕೋಗಿಲು ಬಡಾವಣೆಯ ಪ್ರಕರಣವನ್ನು ಎ.ಐ.ಸಿ.ಸಿ ಗಂಭೀರವಾಗಿ ಪರಿಗಣಿಸಿದೆ.
ಕಾಂಗ್ರೆಸ್ ಸರ್ಕಾರ ಮಾನವೀಯ ದೃಷ್ಠಿಕೋನ ಹರಿಸಿಲ್ಲ, ಎಂದು ಅಸಮಾಧಾನಿಸಿ ಸಂತ್ರಸ್ತರಿಗೆ ಸೂಕ್ತ ಪುನರ್ವಸತಿ ಕಲ್ಪಿಸಿಕೊಡುವ ಭರವಸೆ ನೀಡುವ ಹೇಳಿಕೆ ಬಿಡುಗಡೆ ಮಾಡಿರುವುದನ್ನು ಗಮನಿಸಿದರೆ ಕೇರಳ ಚುನಾವಣಾ ರಾಜಕೀಯಕ್ಕೆ ಕರ್ನಾಟಕದ ಹಿತಾಸಕ್ತಿ ಬಲಿಕೊಡಲು ಕಾಂಗ್ರೆಸ್ ಹೈ ಕಮಾಂಡ್ ಸಿದ್ದವಾದಂತೆ ಕಾಣುತ್ತಿದೆ. ಈ ಹಿಂದೆ ಅಂದಿನ ವಯನಾಡ್ ಸಂಸದ ರಾಹುಲ್ ಗಾಂಧಿ ಅವರನ್ನು ಖುಷಿ ಪಡಿಸಲು ಕೇರಳದಲ್ಲಿ ಆನೆ ದಾಳಿಗೊಳಗಾದವರು ಹಾಗೂ ನೆರೆ ಹಾವಳಿಯಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಮನೆ ಕಟ್ಟಿಕೊಡುವ ಕಾರ್ಯದಲ್ಲಿ ವಿಶೇಷ ಆಸಕ್ತಿ ವಹಿಸಿದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರತೀ ಹಂತದಲ್ಲೂ ಕರ್ನಾಟಕದಲ್ಲಿ ಕೇರಳ ದರ್ಬಾರ್ ನಡೆಯಲು ಅವಕಾಶ ಮಾಡಿಕೊಡುತ್ತಿರುವುದು ಕನ್ನಡಿಗರ ಸ್ವಾಭಿಮಾನವನ್ನು ಅಡವಿಟ್ಟಂತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕನ್ನಡ ನಾಡು ಪುಣ್ಯಕೋಟಿಯ ಪುಣ್ಯಭೂಮಿ, ಮಾನವೀಯತೆ ತೋರಿಸುವುದರಲ್ಲಿ ನಾವು ಜಗತ್ತಿಗೆ ಮಾದರಿ, ಆದರೆ ವಲಸಿಗರ ಅಕ್ರಮ ಕಾನೂನು ಉಲ್ಲಂಘನೆಗಳನ್ನು ಸಹಿಸಿಕೊಳ್ಳಬೇಕೆಂದು ನಿರೀಕ್ಷಿಸುವುದು ಮಾನವೀಯತೆ ಎಂದು ಎನಿಸಿಕೊಳ್ಳದು, ಇಂತಹಾ ಚಟುವಟಿಕೆಗಳನ್ನು ಪುನರ್ವಸತಿ ಹೆಸರಿನಲ್ಲಿ ಉತ್ತೇಜಿಸಿದರೆ ಸರ್ಕಾರದ ಖಾಲಿ ಭೂಮಿ, ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಇನ್ನು ಮುಂದೆ ಯಾವುದೇ ರಕ್ಷಣೆ ಸಿಗಲಾರದು,ಕಾಂಗ್ರೆಸ್ ಸರ್ಕಾರ ಕಾಂಗ್ರೆಸ್ ಹೈ ಕಮಾಂಡ್ ನ ಒತ್ತಡಗಳಿಗೆ ಮಣಿದು ಕರ್ನಾಟಕದ ಹಿತಾಶಕ್ತಿಯನ್ನು ಬಲಿಕೊಟ್ಟರೆ ಅಲ್ಪಸಂಖ್ಯಾತರ ಹೆಸರಿನಲ್ಲಿ ಕೋಗಿಲು ಬಡಾವಣೆಯಲ್ಲಿ ರಾಜಕೀಯ ಓಲೈಕೆಯ ಚಟುವಟಿಕೆ ಮುಂದುವರೆದರೆ ಅದು ಕರ್ನಾಟಕದ ಸ್ವಾಭಿಮಾನ ಹಾಗೂ ಈ ನೆಲದ ಕಾನೂನನ್ನು ಬಲಿಕೊಟ್ಟಂತೆ ಆಗುತ್ತದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ವ್ಯತಿರಿಕ್ತವಾಗಿ ನಡೆದುಕೊಂಡರೆ ಕನ್ನಡಿಗರ ಪ್ರತಿಭಟನೆ ಎದುರಿಸಲು ಸಿದ್ದವಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಪ್ರತಿಕ್ರಿಯಿಸಿ, ವೇಣುಗೋಪಾಲ್ ಅವರನ್ನು ರಾಜ್ಯದ ಸೂಪರ್ ಸಿಎಂ ಎಂದು ಕರೆದಿದ್ದಾರೆ.
ಕರ್ನಾಟಕದ ಆಡಳಿತದಲ್ಲಿ ಮಧ್ಯಪ್ರವೇಶಿಸಲು ಕೆಸಿ.ವೇಣುಗೋಪಾಲ್ ಯಾರು, ರಾಜ್ಯವನ್ನು ಆಳುವುದು ಸಾಂವಿಧಾನಿಕವಾಗಿ ಚುನಾಯಿತರಾದ ಮುಖ್ಯಮಂತ್ರಿಗಳು ಹಾಗೂ ಅವರ ನೇತೃತ್ವದ ಸಚಿವ ಸಂಪುಟವೇ ಹೊರತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಲ್ಲ, ಸರ್ಕಾರದ ಕೈಗೊಂಡ ನಿರ್ಣಯದ ವಿರುದ್ಧ ವೇಣುಗೋಪಾಲ್ ಅವರು ಕಿಡಿಕಾರಿರುವುದು ಒಕ್ಕೂಟ ವ್ಯವಸ್ಥೆಗೆ ಮಾಡಿದ ಅವಮಾನ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಪಕ್ಷಗಳ ವಿರೋಧ ಕುರಿತು ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ಕಾಂಗ್ರೆಸ್ನಂತಹ ರಾಷ್ಟ್ರೀಯ ಪಕ್ಷದಲ್ಲಿ, ನಾಯಕರು ಸೂಕ್ಷ್ಮ ವಿಷಯಗಳ ಬಗ್ಗೆ ರಾಜ್ಯ ಘಟಕಗಳಿಗೆ ಮಾರ್ಗದರ್ಶನ ನೀಡುವ ಹಕ್ಕು ಮತ್ತು ಜವಾಬ್ದಾರಿಯನ್ನು ಹೊಂದಿದ್ದಾರೆ. ಅವರ ಹೈಕಮಾಂಡ್ ಅವರಿಗೆ ಸಲಹೆ ನೀಡುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
Advertisement