

ಬೆಂಗಳೂರು: ನಗರದ ಯಲಹಂಕದ ಕೋಗಿಲು ಬಡಾವಣೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ವಿಚಾರ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪಾಕಿಸ್ತಾನದ ಆಕ್ಷೇಪವನ್ನು ಬಿಜೆಪಿ ಪ್ರಶ್ನಿಸುವುದರೊಂದಿಗೆ ಕಾಂಗ್ರೆಸ್ ಸರ್ಕಾರ ಒಡೆದು ಆಳುವ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದು, ಆಡಳಿತ ಕುಂಠಿತಗೊಂಡಿದೆ ಎಂದು ಆರೋಪಿಸಿದೆ.
ಪಾಕಿಸ್ತಾನದ ಕ್ಯಾತೆ ಏನು?: ಅಕ್ರಮವಾಗಿ ನಿರ್ಮಿಸಲಾಗಿದ್ದ ಮುಸ್ಲಿಮರ 200 ಮನೆಗಳನ್ನು ಕರ್ನಾಟಕ ಸರ್ಕಾರ ನೆಲಸಮ ಮಾಡಿದ್ದಕ್ಕೆ ಹೇಳಿಕೆ ನೀಡಿರುವ ಪಾಕ್ ವಿದೇಶಾಂಗ ಇಲಾಖೆ, ಭಾರತದಲ್ಲಿ ಅಲ್ಪಸಂಖ್ಯಾತರ ಮೇಲಿನ ಕಿರುಕುಳ ತೀವ್ರ ಕಳವಳದ ವಿಷಯವಾಗಿದೆ. ಅಲ್ಲಿ ಕ್ರಿಸ್ ಮಸ್ ಆಚರಣೆ ವೇಳೆ ದಾಳಿಗಳು ಆಗಿವೆ. ಸರ್ಕಾರಿ ಪ್ರಾಯೋಜಕತ್ವದಿಂದ ಮುಸ್ಲಿಮರ ಮನೆಗಳನ್ನು ಧ್ವಂಸಗೊಳಿಸಲಾಗಿದೆ ಹಾಗೂ ಮುಸ್ಲಿಮರ ಗುಂಪು ಹತ್ಯೆ ನಡೆದಿವೆ ಎಂದು ಆರೋಪಿಸಿದೆ.
ಕೆರಳಿದ ಬಿಜೆಪಿ ನಾಯಕರು: ಬೆಂಗಳೂರು ಘಟನೆಯನ್ನು ಪಾಕಿಸ್ತಾನ ನೇರವಾಗಿ ಪ್ರಸ್ತಾಪಿಸದೇ ಇದ್ದರೂ ರಾಷ್ಟ್ರಮಟ್ಟದಲ್ಲಿ ಕೋಗಿಲು ಬಡಾವಣೆಯ ಅನಧಿಕೃತ ಮನೆಗಳ ತೆರವು ಕಾರ್ಯಾಚರಣೆ ಕುರಿತು ಭಾರಿ ಚರ್ಚೆಯಾಗುತ್ತಿದೆ. ಹೀಗಾಗಿ ಇದೇ ಘಟನೆಯನ್ನು ಪಾಕಿಸ್ತಾನ ಪ್ರಸ್ತಾಪಿಸಿದೆ ಎಂದು ಹೇಳಲಾಗುತ್ತಿದೆ. ಇದು ಬಿಜೆಪಿ ನಾಯಕರನ್ನು ಕೆರಳಿಸಿದ್ದು, ಭಾರತದೊಳಗೆ ಕಾನೂನುಬದ್ಧ ಆಡಳಿತಾತ್ಮಕ ಕ್ರಮವನ್ನು ಪಾಕಿಸ್ತಾನ ಪ್ರಶ್ನಿಸುವುದರೊಂದಿಗೆ ಈ ವಿವಾದವನ್ನು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಗೆ ರಾಜಕೀಯ ಮತ್ತು ಕೋಮು ವಿಷಯವನ್ನಾಗಿ ರೂಪಿಸಲಾಗಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ಆರೋಪಿಸಿದ್ದಾರೆ.
ಅರ್ಹರಿಗೆ ಪರ್ಯಾಯ ಮನೆ: ಈ ಮಧ್ಯೆ ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡ ಅರ್ಹರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮನೆ ಕಳೆದುಕೊಂಡವರಿಗೆ ತಲಾ ರೂ.11 ಲಕ್ಷ ಅಂದಾಜು ವೆಚ್ಚದಲ್ಲಿ ಹೊಸ ಮನೆಗಳನ್ನು ನಿರ್ಮಿಸಲಾಗುವುದು, ಸುಮಾರು 100 ಕೋಟಿ ವೆಚ್ಚದಲ್ಲಿ ಪುನರ್ ವ್ಯವಸ್ಥೆ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ ಎಂದು ವರದಿಯಾಗಿದೆ.
ಸಿದ್ದರಾಮಯ್ಯ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಪ್ರವಾಹ, ಅತಿವೃಷ್ಟಿ, ಅನವೃಷ್ಟಿ ಪರಿಹಾರಕ್ಕಾಗಿ ರಾಜ್ಯದಾದ್ಯಂತ ಹಲವು ವರ್ಷಗಳಿಂದ ಜನ ಕಾಯುತ್ತಿರುವುದಾಗಿ ಎರಡೇ ದಿನಕ್ಕೆ ಕೋಗಿಲು ಸಂತ್ರಸ್ತರಿಗೆ ಪರಿಹಾರ ಘೋಷಿಸಿರುವುದು ಕಾಂಗ್ರೆಸ್ ಸರ್ಕಾರದ ಒಂದು ನಿರ್ದಿಷ್ಠ ಸಮುದಾಯದ ಓಲೈಕೆ ರಾಜಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದ ಬಾರ್ಕೋಲು ಯಾರ ಬಳಿ ಇದೆ? ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಕೋಗಿಲು ಬಡಾವಣೆಯ ಜನರಿಗೆ ಮನೆ ನೀಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಯಾರ ಸರ್ಕಾರ ನಡೆಯುತ್ತಿದೆ? ಯಾರಿಗಾಗಿ ಸರ್ಕಾರ ನಡೆಯುತ್ತಿದೆ? ಇದು ನಮ್ಮ ಪ್ರಶ್ನೆ. ರಾಜ್ಯ ಸರ್ಕಾರದ ಬಾರ್ಕೋಲು ಯಾರ ಬಳಿ ಇದೆ? ಕೆ.ಸಿ.ವೇಣುಗೋಪಾಲ್ ಅವರು ರಾಜ್ಯ ಸರ್ಕಾರದ ಅಧಿಕಾರದಲ್ಲಿ ಮೂಗು ತೂರಿಸುತ್ತಾರೆ. ಅವರದ್ದೇ ಸರ್ಕಾರದ ಸಿಎಂ ಪಿಣರಾಯಿ ವಿಜಯನ್ ಇಲ್ಲಿ ನಿರ್ದೇಶನ ಮಾಡುತ್ತಾರೆ. ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆಶಿಗೆ ಸರ್ಕಾರ ನಡೆಸಲು ಹಕ್ಕು ಇದೆಯೇ? ಕರ್ನಾಟಕದಲ್ಲಿ ಸರ್ಕಾರ ಏನು ಮಾಡುತ್ತಿದೆ? ಯುಡಿಎಫ್ ಹಾಗೂ ಎಲ್ಡಿಎಫ್ ನಮ್ಮ ರಾಜ್ಯದಲ್ಲಿ ಮೂಗು ತೂರಿಸುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜೀವ್ ಗಾಂಧಿ ಹೌಸಿಂಗ್ ಸೊಸೈಟಿ ಯಿಂದ ಮನೆ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ದೆಹಲಿಯಲ್ಲಿ ಇರೋ ಕೇರಳದ ಕೆ.ಸಿ.ವೇಣುಗೋಪಾಲ್ ಒತ್ತಡಕ್ಕೆ ಮಣಿದು ಕೆಲಸ ಸರ್ಕಾರ ಮಾಡ್ತಿದೆ. ಕನ್ನಡಿಗರಿಗೆ ಸಿಗಬೇಕಿದ್ದ ಮನೆಗಳು ಅಕ್ರಮ ವಲಸಿಗರ ಪಾಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನಕ್ಕೂ ನಮಗೂ ಏನೇನು ಸಂಬಂಧ ಇಲ್ಲ. ಇನ್ನೂ ಕೋಗಿಲು ಲೇಔಟ್ ಒತ್ತುವರಿ ತೆರವಿಗೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಪ್ರತಿಕ್ರಿಯಿಸಿದ್ದಾರೆ. ಅವರು ಯಾರು ಹೇಳುವುದಕ್ಕೆ ಎಂದು ಜಮೀರ್ ಪ್ರಶ್ನಿಸಿದ್ದಾರೆ. ಅವರಿಗೇನು ಹಕ್ಕಿದೆ. ಅವರಿಗೂ ಇದಕ್ಕೂ ಏನು ಸಂಬಂಧ ಎಂದು ಜಮೀರ್ ಅಹಮದ್ ಪ್ರಶ್ನಿಸಿದ್ದಾರೆ. ಪಾಕಿಸ್ತಾನಕ್ಕೂ ನಮಗೂ ಏನೇನು ಸಂಬಂಧ ಇಲ್ಲ. ಅವರು ಯಾರು? ನಮ್ಮ ದೇಶದಲ್ಲಿ ನಾವು ಇದ್ದೇವೆ. ಮುಸ್ಲಿಂರನ್ನು ನೋಡಿಕೊಳ್ಳಲು ನಾವು ಇದ್ದೇವೆ. ಮೊದಲು ಅವರ ದೇಶವನ್ನು ಅವರು ನೋಡಿಕೊಳ್ಳಲು ಹೇಳಿ. ಪಾಕಿಸ್ತಾನದಲ್ಲಿರುವ ಬಡತನವನ್ನು ನೋಡಿಕೊಳ್ಳಲು ಹೇಳಿ ಎಂದಿದ್ದಾರೆ.
Advertisement