KAS Prelims: ಮರು ಪರೀಕ್ಷೆಯಲ್ಲೂ ಯಡವಟ್ಟು; ಕನ್ನಡ ಮಾಧ್ಯಮದ ಪರೀಕ್ಷಾರ್ಥಿಗಳಿಗೆ ಅನ್ಯಾಯ- ಬಿಜೆಪಿ ಟೀಕೆ

ಪೂರ್ವಬಾವಿ ಪರೀಕ್ಷೆಯಲ್ಲಿನ ಮರು ಪರೀಕ್ಷೆಯ 2 ಪತ್ರಿಕೆಗಳಲ್ಲಿ 79 ದೋಷಗಳಿದ್ದರೂ ಕೆಪಿಎಸ್ ಸಿ ಕೇವಲ 5 ಪ್ರಶ್ನೆಗಳಿಗೆ ಮಾತ್ರ ಕೃಪಾಂಕ ನೀಡುವ ಮೂಲಕ ಕನ್ನಡ ಮಾಧ್ಯಮದ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಿದೆ.
BY. Vijayendra and Ashok Casual Images
ಬಿ.ವೈ.ವಿಜಯೇಂದ್ರ, ಆರ್.ಅಶೋಕ್ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: KAS Prelims ಮರು ಪರೀಕ್ಷೆಯಲ್ಲೂ ಪದೇ ಪದೇ ಯಡವಟ್ಟು ಮಾಡುವ ಮೂಲಕ ಕನ್ನಡ ಮಾಧ್ಯಮದ ಪರೀಕ್ಷಾರ್ಥಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿ. ವೈ. ವಿಜಯೇಂದ್ರ, ಕೆಪಿಎಸ್‌ಸಿ ನಡೆಸುತ್ತಿರುವ ಪ್ರತಿಯೊಂದು ಪರೀಕ್ಷೆಗಳಲ್ಲಿಯೂ ಗೊಂದಲಗಳು, ಲೋಪಗಳು, ಭಾಷಾಂತರ ದೋಷಗಳು ಬಯಲಾಗುತ್ತಲೇ ಇವೆ. ಈ ಹಿಂದಿನ ಪರೀಕ್ಷೆಯಲ್ಲೂ ಕನ್ನಡ ಭಾಷಾ ಪರೀಕ್ಷಾರ್ಥಿಗಳ ಪ್ರಶ್ನೆ ಪತ್ರಿಕೆಗಳನ್ನು ಸಮರ್ಪಕವಾಗಿ ಭಾಷಾಂತರಿಸದೇ ಯಡವಟ್ಟು ಮಾಡಿ ಲಕ್ಷಾಂತರ ಪರೀಕ್ಷಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಕರ್ನಾಟಕದ ಮಾತೃಭಾಷೆಯಲ್ಲಿಯೇ ಸೂಕ್ತ ಪ್ರಶ್ನೆಗಳನ್ನು ನೀಡುವಲ್ಲಿ ಸಂಪೂರ್ಣ ವಿಫಲವಾಗಿ ಪದೇ ಪದೇ ಕೆಎಎಸ್ ಪರೀಕ್ಷಾರ್ಥಿಗಳನ್ನು ಗೊಂದಲಕ್ಕೆ ದೂಡುತ್ತಿರುವ ಬೇಜವಾಬ್ದಾರಿತನ ಪದೇ ಪದೇ ಮರುಕಳಿಸುತ್ತಿರುವುದು ಕೆಪಿಎಸ್‌ಸಿ ವೈಫಲ್ಯ ಹಾಗೂ ರಾಜ್ಯ ಸರ್ಕಾರದ ಅಸಮರ್ಥ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆರೋಪಿಸಿದ್ದಾರೆ.

ಇದೀಗ ಪೂರ್ವಬಾವಿ ಪರೀಕ್ಷೆಯಲ್ಲಿನ ಮರು ಪರೀಕ್ಷೆಯ 2 ಪತ್ರಿಕೆಗಳಲ್ಲಿ 79 ದೋಷಗಳಿದ್ದರೂ ಕೆಪಿಎಸ್ ಸಿ ಕೇವಲ 5 ಪ್ರಶ್ನೆಗಳಿಗೆ ಮಾತ್ರ ಕೃಪಾಂಕ ನೀಡುವ ಮೂಲಕ ಕನ್ನಡ ಮಾಧ್ಯಮದ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಿದೆ. ಕೆಪಿಎಸ್ ಸಿಯ ನಿರಂತರ ಯಡವಟ್ಟುಗಳನ್ನು ಸಹಿಸದೇ ಈ ಭ್ರಷ್ಟ ಹಾಗೂ ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರದ ಮೇಲೆ ಕಿಂಚಿತ್ತೂ ನಂಬಿಕೆಯಿಲ್ಲದೆ ಪರೀಕ್ಷಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿರುವುದು ಈ ಸರ್ಕಾರದ ಅಸಡ್ಡೆತನವನ್ನು ಸಾಕ್ಷೀಕರಿಸುತ್ತಿದೆ ಎಂದು ಟೀಕಿಸಿದ್ದಾರೆ.

ಇನ್ನಾದರೂ ಕಠಿಣ ಪರಿಶ್ರಮದಿಂದ ಉದ್ಯೋಗವನ್ನು ಅರಸಿ ಪರೀಕ್ಷೆಗಳನ್ನು ಬರೆಯುವ ಸಾವಿರಾರು ಉದ್ಯೋಗಾಕಾಂಕ್ಷಿಗಳ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ವಹಿಸಲಿ. ಅಲ್ಲದೇ ಕೆಪಿಎಸ್ಸಿ ಎಡವಟ್ಟುಗಳಿಗೆ ಸಂಪೂರ್ಣ ಕಡಿವಾಣ ಹಾಕಿ ನೇಮಕಾತಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.

BY. Vijayendra and Ashok Casual Images
KAS ಗೆಜೆಟೆಡ್ ಪ್ರೊಬೇಷನರ್‌ ಮರುಪರೀಕ್ಷೆಗೆ 4 ತಿಂಗಳು ಕಾಲಾವಕಾಶ ನೀಡಿ; ಸರ್ಕಾರಕ್ಕೆ KPSC ಆಕಾಂಕ್ಷಿಗಳ ಎಚ್ಚರಿಕೆ!

ಮತ್ತೊಂದೆಡೆ ಇದೇ ವಿಚಾರ ಕುರಿತು ಆರ್. ಅಶೋಕ್ ಕೂಡಾ ಫೋಸ್ಟ್ ಮಾಡಿದ್ದು, ಕೆಪಿಎಸ್ ಸಿ ಮರು ಪರೀಕ್ಷೆಯಲ್ಲಿ ಕನ್ನಡ ವ್ಯಾಕರಣ ದೋಷ, ತಪ್ಪು ಪದಗಳ ಪ್ರಯೋಗ, ಅಪಾರ್ಥ ಸೇರಿದಂತೆ ಇಂಗ್ಲೀಷ್ ನಿಂದ ಕನ್ನಡಕ್ಕೆ ಅನುವಾದ ಮಾಡುವಲ್ಲಿ 79 ದೋಷಗಳು ಕಂಡುಬಂದಿವೆ ಎಂದು ವಿಷಯ ತಜ್ಞರು, ಸಾಹಿತಿಗಳು, ಕನ್ನಡಪರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಕೆಪಿಎಸ್ ಸಿ ಕಾರ್ಯದರ್ಶಿಗಳಿಗೆ, ಅಧ್ಯಕ್ಷರಿಗೆ ಪತ್ರ ಬರೆದಿದ್ದರೂ ಪರಿಗಣಿಸದ ಸರ್ಕಾರ, ಕೇವಲ 39 ತಪ್ಪುಗಳಿಗೆ ಕೃಪಾಂಕ ನೀಡುವ ಮೂಲಕ ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಅವರೇ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳು, ಹಳ್ಳಿಗಾಡಿನ ವಿದ್ಯಾರ್ಥಿಗಳು ಅಂದರೆ ತಮ್ಮ ಸರ್ಕಾರಕ್ಕೆ ಯಾಕಿಷ್ಟು ತಾತ್ಸಾರ? ಬಡವರ ಮಕ್ಕಳು ಕೆ.ಎ.ಎಸ್ ಅಧಿಕಾರಿ, ಗೆಜೆಟೆಡ್ ಅಧಿಕಾರಿ ಆಗಬೇಕು ಎಂದು ಕನಸು ಕಾಣುವುದೇ ತಪ್ಪಾ? ತಪ್ಪಾ ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com