ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಾನೂನು ಉಲ್ಲಂಘನೆಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ!

ಗರಿಷ್ಠ ಶಿಕ್ಷೆಯ ಪ್ರಮಾಣವನ್ನು ಮೂರು ವರ್ಷದಿಂದ 10 ವರ್ಷಕ್ಕೆ ಹೆಚ್ಚಿಸಲಾಗಿದೆ. ಶಿಕ್ಷೆಯ ಅವಧಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ನೇತೃತ್ವದ ತಜ್ಞರ ಸಮಿತಿ ನಿರ್ಧರಿಸಿದ್ದು, ಮಂಗಳವಾರ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅನುಮೋದನೆ ನೀಡುವ ನಿರೀಕ್ಷೆಯಿದೆ
Casual Images
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕ ಮೈಕ್ರೋ ಫೈನಾನ್ಸ್ (ದಬ್ಬಾಳಿಕೆ ತಡೆ) ಸುಗ್ರೀವಾಜ್ಞೆ 2025 ರ ಪರಿಷ್ಕೃತ ಕರಡನ್ನು ಸೋಮವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಅನುಮೋದನೆಗೆ ಕಳುಹಿಸಲಾಗಿದ್ದು, ಕಾನೂನು ಉಲ್ಲಂಘನೆಗಾಗಿ ದೀರ್ಘಾವಧಿ ಶಿಕ್ಷೆಯನ್ನು ಒಳಗೊಂಡಿದೆ.

ಗರಿಷ್ಠ ಶಿಕ್ಷೆಯ ಪ್ರಮಾಣವನ್ನು ಮೂರು ವರ್ಷದಿಂದ 10 ವರ್ಷಕ್ಕೆ ಹೆಚ್ಚಿಸಲಾಗಿದೆ. ಶಿಕ್ಷೆಯ ಅವಧಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ನೇತೃತ್ವದ ತಜ್ಞರ ಸಮಿತಿ ನಿರ್ಧರಿಸಿದ್ದು, ಮಂಗಳವಾರ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅನುಮೋದನೆ ನೀಡುವ ನಿರೀಕ್ಷೆಯಿದೆ ಎಂದು ಅಧಿಕೃತ ಮೂಲಗಳು ಟಿಎನ್‌ಐಇಗೆ ತಿಳಿಸಿವೆ.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಬಲವಂತದ ವಸೂಲಾತಿ ವಿಧಾನಗಳಿಂದ ಆರ್ಥಿಕವಾಗಿ ದುರ್ಬಲವಾಗಿರುವ ಗುಂಪುಗಳು ಮತ್ತು ವಿಶೇಷವಾಗಿ ರೈತರು, ಮಹಿಳೆಯರು ಮತ್ತು ಮಹಿಳಾ ಸ್ವಸಹಾಯ ಗುಂಪುಗಳನ್ನು ರಕ್ಷಿಸಲು ಮತ್ತು ಪರಿಹಾರ ನೀಡಲು ಸಿದ್ದರಾಮಯ್ಯ ಸಂಪುಟ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಿದೆ.

ಕಠಿಣ ಕಾನೂನಿನ ಪ್ರಮುಖ ಅಂಶಗಳು ಇಂತಿವೆ: ಸುಗ್ರೀವಾಜ್ಞೆಯ ಸೆಕ್ಷನ್ 8 ಅನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ. ಆರು ತಿಂಗಳಿಗಿಂತ ಕಡಿಮೆಯಿಲ್ಲದ ಮತ್ತು 10 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ರೂ 5 ಲಕ್ಷದವರೆಗೆ ವಿಸ್ತರಿಸಬಹುದಾದ ದಂಡದೊಂದಿಗೆ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಶಿಕ್ಷೆಗೆ ಗುರಿಪಡಿಸುತ್ತಾರೆ. ಈ ಸುಗ್ರೀವಾಜ್ಞೆಯ ಅಡಿಯಲ್ಲಿನ ಅಪರಾಧಗಳು ಜಾಮೀನು ರಹಿತವಾಗಿರುತ್ತವೆ.

  • ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲಗಾರರಿಂದ ಹಣ ವಸೂಲಿ ಮಾಡಲು ಯಾವುದೇ ಬಲವಂತದ ಕ್ರಮವನ್ನು ಸ್ವತಃ ಅಥವಾ ಏಜೆಂಟ್‌ಗಳ ಮೂಲಕ ಬಳಸುವಂತಿಲ್ಲ. ಯಾವುದೇ ರೀತಿಯ ಬಲವಂತದ ವಸೂಲಾತಿಯು ಸುಗ್ರೀವಾಜ್ಞೆಯ ನಿಬಂಧನೆಗಳ ಅಡಿಯಲ್ಲಿ ಶಿಕ್ಷೆಗೆ ಕಾರಣವಾಗುತ್ತದೆ. ನೋಂದಣಿ ಪ್ರಾಧಿಕಾರವು ಅಂತಹ ಕಂಪನಿಗಳ ನೋಂದಣಿಯನ್ನು ಅಮಾನತುಗೊಳಿಸಬಹುದು ಅಥವಾ ರದ್ದುಗೊಳಿಸಬಹುದು.

  • ಒತ್ತಡ ಹೇರುವುದು, ತಡೆಯುವುದು ಅಥವಾ ಹಿಂಸೆಯನ್ನು ಬಳಸುವುದು, ಅಥವಾ ಸಾಲಗಾರ ಅಥವಾ ಅವನ/ಅವಳ ಕುಟುಂಬ ಸದಸ್ಯರನ್ನು ಅವಮಾನಿಸುವುದು ಅಥವಾ ಬೆದರಿಸುವುದು, ಸಾಲಗಾರರ ಯಾವುದೇ ಆಸ್ತಿಯನ್ನು ವಶ್ಕೆ ಪಡೆಯುವುದು ಅಥವಾ ಅದನ್ನು ಬಳಸದಂತೆ ತಡೆಯುವುದು; ಸಾಲಗಾರನು ವಾಸಿಸುವ ಅಥವಾ ಕೆಲಸ ಮಾಡುವ ಅಥವಾ ವ್ಯವಹಾರವನ್ನು ನಡೆಸುವ ಯಾವುದೇ ಮನೆಗೆ ಆಗಾಗ್ಗೆ ಭೇಟಿ ನೀಡುವುದು ಅಥವಾ ಖಾಸಗಿ ವ್ಯಕ್ತಿಗಳಿಂದ ಬೆದರಿಕೆ ಹಾಕಿಸುವುದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ.

  • ಇದಲ್ಲದೆ, ಯಾವುದೇ ಸರ್ಕಾರಿ ಕಾರ್ಯಕ್ರಮದಡಿ ಸಾಲಗಾರನಿಗೆ ಪ್ರಯೋಜನ ಪಡೆಯಲು ಅರ್ಹತೆ ನೀಡುವ ಯಾವುದೇ ದಾಖಲೆಯನ್ನು ಸಾಲಗಾರರಿಂದ ಬಲವಂತವಾಗಿ ತೆಗೆದುಕೊಳ್ಳಲು ಪ್ರಯತ್ನಿಸುವುದು ಸಹ ಅಪರಾಧವಾಗಿದೆ. ಮೈಕ್ರೋ ಫೈನಾನ್ಸ್ ಸಂಸ್ಥೆ (MFI), ಹಣ ಸಾಲ ನೀಡುವ ಸಂಸ್ಥೆ ಅಥವಾ ಸಂಸ್ಥೆಯಿಂದ ಈ ಸುಗ್ರೀವಾಜ್ಞೆಯ ನಿಬಂಧನೆಯ ಉಲ್ಲಂಘನೆಯ ಬಗ್ಗೆ ನ್ಯಾಯವ್ಯಾಪ್ತಿಯ ಪೊಲೀಸ್ ಠಾಣೆ ಮತ್ತು ಪೊಲೀಸ್ ಅಧಿಕಾರಿಯ ಮುಂದೆ ದೂರು ಸಲ್ಲಿಸಬಹುದು.

Casual Images
ಆತ್ಮಹತ್ಯೆ ಮಾಡಿಕೊಳ್ಳಬೇಡಿ, ದೂರು ದಾಖಲಿಸಿ; ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಕ್ರಮ: ಸಿಎಂ ಸಿದ್ದರಾಮಯ್ಯ
  • ಯಾವುದೇ ಪೊಲೀಸ್ ಅಧಿಕಾರಿಯು ಪ್ರಕರಣವನ್ನು ದಾಖಲಿಸಲು ನಿರಾಕರಿಸಬಾರದು; ಡಿವೈಎಸ್ಪಿ ದರ್ಜೆಗಿಂತ ಕಡಿಮೆಯಿಲ್ಲದ ಪೊಲೀಸ್ ಅಧಿಕಾರಿಯು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಲು ಅಧಿಕಾರವನ್ನು ಹೊಂದಿರುತ್ತಾರೆ. ಸರ್ಕಾರವು ಅಧಿಸೂಚನೆಯ ಮೂಲಕ ವಿವಾದವನ್ನು ಇತ್ಯರ್ಥಪಡಿಸಲು ಸಾಲಗಾರ ಅಥವಾ ಸಾಲ ನೀಡುವವರ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವ ಒಂಬುಡ್ಸುಮನ್ ನೇಮಕ ಮಾಡುತ್ತದೆ.

  • ಯಾವುದೇ ಪರವಾನಗಿಯಿಲ್ಲದ ಮತ್ತು ನೋಂದಾಯಿಸದ MFI ಗಳಿಗೆ ಸಾಲಗಾರನು ಪಾವತಿಸಬೇಕಾದ ಮೊತ್ತವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗುತ್ತದೆ. ಯಾವುದೇ ಸಿವಿಲ್ ನ್ಯಾಯಾಲಯವು ಬಡ್ಡಿಯನ್ನು ಒಳಗೊಂಡಂತೆ ಸಾಲದ ಮೊತ್ತದ ವಸೂಲಾತಿಗಾಗಿ ಸಾಲಗಾರನ ವಿರುದ್ಧ ಯಾವುದೇ ಮೊಕದ್ದಮೆ ಅಥವಾ ವಿಚಾರಣೆಯನ್ನು ನಡೆಸುವುದಿಲ್ಲ. ತ್ರೈಮಾಸಿಕ ಮತ್ತು ವಾರ್ಷಿಕ ಹೇಳಿಕೆಗಳನ್ನು ಸಲ್ಲಿಸಲು ವಿಫಲವಾದ MFI ಗಳು ಅಥವಾ ಹಣ ಸಾಲ ನೀಡುವ ಏಜೆನ್ಸಿಗಳಿಗೆ ಆರು ತಿಂಗಳ ಅವಧಿಯವರೆಗೆ ಜೈಲು ಶಿಕ್ಷೆ ಅಥವಾ 10,000 ರೂ.ವರೆಗೆ ವಿಸ್ತರಿಸಬಹುದಾದ ದಂಡ ಅಥವಾ ಎರಡನ್ನೂ ವಿಧಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com