
ಬೆಂಗಳೂರು: ಭಾರತ ಹೂಡಿಕೆದಾರರಿಗೆ ಕೆಂಪು ರತ್ನಗಂಬಳಿ ಹಾಸಿದೆಯೇ ಹೊರತು ಕೆಂಪು ಪಟ್ಟಿ ಇಲ್ಲ. ದೇಶದಲ್ಲಿ ಸುಸ್ಥಿರ ಆರ್ಥಿಕ ಅಭಿವೃದ್ಧಿಗೆ ಸರ್ವರ ಒಮ್ಮತವಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಹೇಳಿದ್ದಾರೆ.
ಅರಮನೆ ಆವರಣದಲ್ಲಿ ಆಯೋಜಿಸಿರುವ 'ಇನ್ವೆಸ್ಟ್ ಕರ್ನಾಟಕ-2025' ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ರಾಜನಾಥ್ ಸಿಂಗ್, ಭಾರತವು ಸ್ಥಿರ ಮತ್ತು ಸುಸ್ಥಿರ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸುವ ಮೂಲಕ ನಿರ್ಣಾಯಕ ಅನಿಶ್ಚಿತತೆಯ ನೀತಿಯ ಸಮಸ್ಯೆಯನ್ನು ಪರಿಹರಿಸಿದೆ ಎಂದರು.
ಇಂದು ಸುಸ್ಥಿರ ಆರ್ಥಿಕ ಅಭಿವೃದ್ಧಿಯು ಖಾಸಗಿ ವಲಯ ನಾಯಕತ್ವದೊಂದಿಗೆ ನಡೆಯಬೇಕು ಎಂಬುದನ್ನು ಕೇಂದ್ರ, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಸೇರಿದಂತೆ ಭಾರತದಲ್ಲಿನ ಎಲ್ಲಾ ಆಡಳಿತ ಮಟ್ಟದಲ್ಲಿ ಒಪ್ಪಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುಸ್ಥಿರ ಆರ್ಥಿಕ ಅಭಿವೃದ್ಧಿಯ ಈ ಹಂಚಿಕೆಯ ಬದ್ಧತೆಯು ಸ್ಥಿರ ಮತ್ತು ಪೂರಕ ಉದ್ಯಮ ನೀತಿ ಒದಗಿಸಲಿದ್ದು, ಹೂಡಿಕೆದಾರರು ವಿಶ್ವಾಸದಿಂದ ಹೂಡಿಕೆ ಮಾಡಬಹುದು. ಈ ಹಿಂದೆ ಹೂಡಿಕೆದಾರರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದರು. ಕೆಂಪು ಪಟ್ಟಿ ಅತಿದೊಡ್ಡ ಅಡಚಣೆಯಾಗಿತ್ತು. ಆದರೆ ಇದೀಗ ಕಾಲ ಬದಲಾಗಿದೆ ಎಂದರು.
ಇನ್ನು ಮುಂದೆ ಭಾರತವು ಹೂಡಿಕೆದಾರರಿಗೆ ಕೆಂಪು ಪಟ್ಟಿ ನೀಡಲ್ಲ. ಬದಲಿಗೆ ಕೆಂಪು ರತ್ನಗಂಬಳಿ ಹಾಸುತ್ತೇವೆ. ಹೂಡಿಕೆಯನ್ನು ಉತ್ತೇಜಿಸುವಲ್ಲಿ ಈ ರೀತಿಯ ಒಮ್ಮತವು ಹೂಡಿಕೆದಾರರಿಗೆ ಅನಿಶ್ಚಿತತೆಯನ್ನು ಕಡಿಮೆ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆಗೆ ಪೂರಕ ಪರಿಸರ ಇದೆ ಎಂದು ವಿಶ್ವದ ವಿವಿಧ ಭಾಗಗಳಿಂದ ಆಗಮಿಸಿದ್ದ ಉದ್ಯಮಿಗಳಿಗೆ ಹೇಳಿದರು.
ಕರ್ನಾಟಕದ ಬಗ್ಗೆ ಮಾತನಾಡಿದ ರಾಜನಾಥ್ ಸಿಂಗ್, ಹೂಡಿಕೆಯ ಅವಶ್ಯಕತೆಗಳು ಏನೇ ಇರಲಿ, ಕರ್ನಾಟಕವು ಬೆಳವಣಿಗೆ ಮತ್ತು ಯಶಸ್ಸಿಗೆ ಉತ್ತಮ ಅಡಿಪಾಯವನ್ನು ಒದಗಿಸುತ್ತದೆ. ಕರ್ನಾಟಕವು ಮುಂದಿನ ಪೀಳಿಗೆಯ ಮೂಲಸೌಕರ್ಯ ಸೌಲಭ್ಯಗಳನ್ನು ನೀಡುತ್ತಿದೆ. ನುರಿತ ಮಾನವ ಸಂಪನ್ಮೂಲಗಳ ಅಗತ್ಯವಿದ್ದರೆ, ಕರ್ನಾಟಕವು ತನ್ನ ಅತ್ಯಂತ ಪ್ರತಿಭಾವಂತ ಮಾನವ ಸಂಪನ್ಮೂಲವನ್ನು ಒದಗಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಡಿ ಕೆ ಶಿವಕುಮಾರ್, ಕರ್ನಾಟಕ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಮತ್ತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಹೀಂದ್ರಾ ಮತ್ತು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ, ಜೆಎಸ್ಡಬ್ಲ್ಯೂ ಗ್ರೂಪ್ ಅಧ್ಯಕ್ಷ ಸಜ್ಜನ್ ಜಿಂದಾಲ್, ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ಕಿರ್ಲೋಸ್ಕರ್ ಸಿಸ್ಟಮ್ಸ್ ಅಧ್ಯಕ್ಷೆ ಗೀತಾಂಜಲಿ ಕಿರ್ಲೋಸ್ಕರ್ ಮತ್ತು ಹೀರೋ ಫ್ಯೂಚರ್ ಎನರ್ಜಿಯ ಅಧ್ಯಕ್ಷ ರಾಹುಲ್ ಮುಂಜಾಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Advertisement