
ಬೆಂಗಳೂರು: ಭಾರತದ ಜವಳಿ ಮತ್ತು ಸಿದ್ಧ ಉಡುಪು ರಾಜಧಾನಿಯಾಗುವ ಪ್ರಯತ್ನದ ಭಾಗವಾಗಿ ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ 2025-30 ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ.
ಇನ್ವೆಸ್ಟ್ ಕರ್ನಾಟಕ 2025 ಜಿಐಎಂನಲ್ಲಿ ಮಾತನಾಡಿದ ಜವಳಿ ಆಯುಕ್ತೆ ಕೆ. ಜ್ಯೋತಿ ಅವರು, ಹೂಡಿಕೆದಾರರಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ತಾಂತ್ರಿಕ ಜವಳಿಗಳಿಗೆ ಅವಕಾಶ ನೀಡುವ ಭರವಸೆಯೊಂದಿಗೆ ಸರ್ಕಾರವು ಒಂದೆರಡು ತಿಂಗಳುಗಳಲ್ಲಿ ನೀತಿಯನ್ನು ಜಾರಿಗೆ ತರಲಿದೆ ಎಂದು ಸುಳಿವು ನೀಡಿದರು. ತಾಂತ್ರಿಕ ಜವಳಿಗಳಿಗೆ ಎರಡು ಘಟಕಗಳು ಬರಲಿವೆ ಎಂದು ಅವರು ಹೇಳಿದರು.
ತಾಲ್ಲೂಕು ಮಟ್ಟ ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಒಂದೆರಡು ಸುತ್ತಿನ ಮಾತುಕತೆ ನಡೆಸಲಾಗಿದ್ದು, ನೂತನ ನೀತಿಯು ಕರಡು ಹಂತದಲ್ಲಿದೆ. ಮುಂದಿನ ಹಣಕಾಸು ವರ್ಷಕ್ಕೂ ಮುಂಚಿತವಾಗಿ ನೂತನ ನೀತಿಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಪ್ರಧಾನಿ ಮಿತ್ರ ಪಾರ್ಕ್ನ ವಹಿವಾಟು ಸಲಹೆಗಾರ ಸಂಜಯ್ ಅರೋರಾ ಅವರು ಮಾತನಾಡಿ, ನಮ್ಮ ದೇಶವು ಚೀನಾ ಮಾದರಿಯನ್ನು ಗಮನಿಸುತ್ತಿದೆ. ಅಲ್ಲಿನ 'ಸಾಕ್ಸ್ ಸಿಟಿ' ಡಾಟಾಂಗ್ ನಗರವು ವಾರ್ಷಿಕವಾಗಿ 1.35 ಶತಕೋಟಿ ಜೋಡಿ ಸಾಕ್ಸ್ಗಳನ್ನು ಉತ್ಪಾದಿಸುತ್ತದೆ. ಇದು 1.6 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಇಲ್ಲಿ ಕೆಲಸ ಮಾಡುವ ಶೇ.80 ಮಂದಿ ವಲಸಿಗರಾಗಿದ್ದಾರೆ. ಆದರೆ, ನಾವು ನಮ್ಮದೇ ರೀತಿಯಲ್ಲಿ ಪ್ರಯತ್ನಗಳನ್ನು ನಡೆಸುತ್ತಿದ್ದು, ಕಟ್-ಅಂಡ್-ಪೇಸ್ಟ್ ಮಾಡುವುದಿಲ್ಲ. ಭಾರತದಲ್ಲಿ ಫ್ಯಾಷನ್ ಉದ್ಯಮವು ಪ್ರಬುದ್ಧವಾಗಿದೆ, ಜನರು ಹಬ್ಬಗಳ ಸಮಯದಲ್ಲಿ ಮಾತ್ರವಲ್ಲದೆ ಕಾಲಕ್ಕನುಸಾರ ಖರೀದಿಯಲ್ಲಿ ತೊಡಗುತ್ತಿದ್ದಾರೆ. ಬೆಳಿಗ್ಗೆ ಎಚ್ಚರಗೊಳ್ಳುವುದರಿಂದ ಹಿಡಿದು ಮಲಗುವವರೆಗೆ ಜನರು ತಮ್ಮ ಉಡುಪನ್ನು 3-5 ಬಾರಿ ಬದಲಾಯಿಸುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಇದನ್ನು ಜವಳಿ ಉದ್ಯಮವು ಬಳಕೆ ಮಾಡಿಕೊಳ್ಳಲಿದೆ ಎಂದು ಹೇಳಿದರು.
ನೂತನ ನೀತಿಯಿಂದ 2030 ರ ವೇಳೆಗೆ ಭಾರತ 100 ಶತಕೋಟಿ ಡಾಲರ್ ಹೂಡಿಕೆಗಳನ್ನು ಆಕರ್ಷಿಸಬಹುದು, ಅದರಲ್ಲಿ ಕರ್ನಾಟಕವೂ ಒಂದು ಪಾಲನ್ನು ಪಡೆಯುತ್ತದೆ. 2024 ರ ಹೊತ್ತಿಗೆ ದೇಶೀಯವಾಗಿ 184 ಶತಕೋಟಿ ಡಾಲರ್ ವಹಿವಾಟು ಹೊಂದಿರುವ ಭಾರತವು 2030 ರ ವೇಳೆಗೆ 350 ಶತಕೋಟಿ ಡಾಲರ್ ಅನ್ನು ತಲುಪುತ್ತದೆ. ರಫ್ತು 37 ಶತಕೋಟಿ ಡಾಲರ್ ನಿಂದ 100 ಶತಕೋಟಿ ಡಾಲರ್ ಗೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಕಲಬುರಗಿಯಲ್ಲಿ ಪಿಎಂ ಮಿತ್ರ ಜವಳಿ ಪಾರ್ಕ್ ಅನ್ನು ಸ್ಥಾಪಿಸುವ ವೇಳೆ ಕುಶಲಕರ್ಮಿಗಳಿಗೆ ಮೀಸಲಾದ ವಲಯವನ್ನು ಒದಗಿಸುವ ಮೂಲಕ ಸಾಂಪ್ರದಾಯಿಕ ಕೈಮಗ್ಗ ನೇಕಾರರ ಹಿತಾಸಕ್ತಿಗಳನ್ನು ಕೂಡ ರಕ್ಷಿಸಲಾಗುವುದು ಎಂದು ಹೇಳಿದರು.
ಈ ನಡುವೆ ಬಿಗ್ ಬ್ಯಾಗ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಕರ್ನಾಟಕದ ಜವಳಿ ವಲಯದೊಂದಿಗೆ ಸುಮಾರು 150 ಕೋಟಿ ರೂ. ಹೂಡಿಕೆಗಳ ಒಪ್ಪಂದಕ್ಕೆ ಸಹಿ ಹಾಕಿದೆ.
ಮಂಗಳೂರು ಮೂಲದ ರೇಖಾ ಆರ್. ಕಾಮತ್ ಅದರ ಮಾಲೀಕರಾಗಿದ್ದು, ತಾಂತ್ರಿಕ ಜವಳಿ ತಯಾರಿಕೆಗಾಗಿ ಒಂದು ಘಟಕವನ್ನು ಸ್ಥಾಪಿಸಲು 100 ಕೋಟಿ ರೂ.ಗಳನ್ನು ನೀಡಿದ್ದಾರೆ.
ಇದಲ್ಲದೆ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ತುಮಖಾನೆ ಸಂಜೀವ ಶೆಟ್ಟಿ ಎಕ್ಸ್ಪೋರ್ಟ್ಸ್ನ ಸುಧಾಕರ್ ಎಸ್ ಶೆಟ್ಟಿ ಅವರು, 14.5 ಕೋಟಿ ರೂ.ಗಳ ಉಡುಪುಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ದಾವಣಗೆರೆಯ ಜೈನ್ ಪಾಲಿವೆಂಚರ್ಸ್ನ ಕೋಮಲ್ ಜೈನ್ ಅವರು ಪಾಲಿ-ವೋವೆನ್ ಸಾಕ್ಸ್ ಮುದ್ರಣ ಘಟಕವನ್ನು ಸ್ಥಾಪಿಸಲು 10 ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದರು ಮತ್ತು ಯಾದಗಿರಿ ಜಿಲ್ಲೆಯ ವಡಗೆರೆ ತಾಲ್ಲೂಕಿನ ಬಸವೇಶ್ವರ ಜವಳಿ ಉದ್ಯಮದ ಡಾ. ಶರಣ ಭೂಪಾಲ್ ರೆಡ್ಡಿ ಅವರು 6 ಕೋಟಿ ರೂ.ಗಳ ರೇಪಿಯರ್ ನೇಯ್ಗೆ ಘಟಕಗಳನ್ನು ಸ್ಥಾಪಿಸಲು ಒಪ್ಪಂದಕ್ಕೆ ಸಹಿ ಹಾಕಿದರು.
ದಾವಣಗೆರೆಯ ಯುವ ಉದ್ಯಮಿಗಳಾದ ಪುಷ್ಪಾ ಡಿ ಕೆ ಮತ್ತು ನೂತನ್ ಕೆ ಶಿವಾನಂದ ಮತ್ತು ಯಾದಗಿರಿಯ ಶಂಕರ್ ಗೌಡ ಅವರು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
Advertisement