
ಬೆಂಗಳೂರು: ಇದೇ ಮೊದಲ ಬಾರಿಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸುರಕ್ಷಿತವಾಗಿ ಹೊಸ ವರ್ಷಾಚರಣೆ ಮಾಡಿರುವುದಕ್ಕೆ ಗೃಹ ಸಚಿವ ಜಿ ಪರಮೇಶ್ವರ ಅವರು ಸಾರ್ವಜನಿಕರಿಗೆ ಮತ್ತು ಪೊಲೀಸ್ ಇಲಾಖೆಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಅಲ್ಲದೆ, ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡುವಂತೆ ವಿಪಕ್ಷ ನಾಯಕರಿಗೆ ಕರೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ರಾತ್ರಿ ಲಕ್ಷಾಂತರ ಯುವಕರು, ನಾಗರಿಕರು ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಂಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಮೊದಲ ಬಾರಿಗೆ ಹೊಸ ವರ್ಷದ ಆಚರಣೆಯು ಸುಗಮವಾಗಿ ನಡೆದಿದೆ ಎಂದರು.
'ಪೊಲೀಸ್ ಇಲಾಖೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿತು ಮತ್ತು ಯುವ ಪೀಳಿಗೆ ಕೂಡ ಶಾಂತಿಯುತವಾಗಿ ಹೊಸ ವರ್ಷಾಚರಣೆ ಮಾಡಿತು. ಇದಕ್ಕಾಗಿ ಅವರಿಗೆ ನನ್ನ ಅಭಿನಂದನೆಗಳು ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ವರ್ಷ ವಿರೋಧ ಪಕ್ಷದ ನಾಯಕರು ರಾಜ್ಯದ ಅಭಿವೃದ್ಧಿಗೆ ಸಹಕರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.
ನಾವು ಕರ್ನಾಟಕವನ್ನು ಎಲ್ಲ ಸಮುದಾಯಗಳ ಶಾಂತಿಯ ತೋಟವಾಗಿ ರೂಪಿಸಿದ್ದೇವೆ. ಅಭಿವೃದ್ಧಿಯ ದೃಷ್ಟಿಕೋನದಿಂದ ವಿರೋಧ ಪಕ್ಷಗಳು ನಮ್ಮನ್ನು ಬೆಂಬಲಿಸಿದರೆ, ಅದು ಪ್ರಯೋಜನಕಾರಿಯಾಗುತ್ತದೆ. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಟೀಕೆ ಮಾಡುವುದನ್ನು ಬಿಟ್ಟುಬಿಡಬೇಕು ಎಂದು ನಾನು ಸೂಚಿಸುತ್ತಿಲ್ಲ. ಆದರೆ, ಸರ್ಕಾರವನ್ನು ಜವಾಬ್ದಾರಿಯುತವಾಗಿ ರಚನಾತ್ಮಕವಾಗಿ ಎಚ್ಚರಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.
2025ನೇ ವರ್ಷವನ್ನು ದೇಶದಾದ್ಯಂತ ಜನರು ಅದ್ಧೂರಿ ಆಚರಣೆಗಳೊಂದಿಗೆ ಸ್ವಾಗತಿಸಿದ್ದಾರೆ. ವಿವಿಧ ನಗರಗಳಲ್ಲಿನ ಜನರು ಸಂತೋಷ ಮತ್ತು ಉತ್ಸಾಹದಿಂದ ಹೊಸ ವರ್ಷಾಚರಣೆ ಮಾಡಿದ್ದಾರೆ. ದೆಹಲಿಯಲ್ಲಿ, ಪ್ರಸಿದ್ಧ ಸ್ಥಳಗಳಾದ ಹೌಜ್ ಖಾಸ್, ಕನ್ನಾಟ್ ಪ್ಲೇಸ್ ಮತ್ತು ಲಜಪತ್ ನಗರವು ಹೊಸ ವರ್ಷವನ್ನು ಆಚರಿಸುವ ದೊಡ್ಡ ಜನಸಮೂಹದಿಂದ ತುಂಬಿತ್ತು. ಸುರಕ್ಷಿತ ಆಚರಣೆಯನ್ನು ಖಚಿತಪಡಿಸಿಕೊಳ್ಳಲು, ದೆಹಲಿ ಪೊಲೀಸರು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರು.
ಪಂಜಾಬ್ನ ಅಮೃತಸರದಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಜನರು ಗೋಲ್ಡನ್ ಟೆಂಪಲ್ನಲ್ಲಿ ಜಮಾಯಿಸಿದರು. ಅನೇಕ ನಗರಗಳಲ್ಲಿನ ಹೋಟೆಲ್ಗಳು ವಿಶೇಷ ಆಚರಣೆಗಳನ್ನು ಆಯೋಜಿಸಿವೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಅನೇಕ ನಗರಗಳಲ್ಲಿ ಪಟಾಕಿ ಸಿಡಿಸಿ ಜನರು ಸಂಭ್ರಮಿಸಿದರು. ಮುಂಬೈನಲ್ಲಿ ಜುಹು ಬೀಚ್, ಚೌಪಾಟಿ ಬೀಚ್ ಮತ್ತು ವರ್ಸೋವಾ ಬೀಚ್ಗಳಲ್ಲಿ ಜನರು ಜಮಾಯಿಸಿದ್ದರು.
Advertisement