
ಬೆಂಗಳೂರು: ರಾಜ್ಯದಾದ್ಯಂತ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದೆ. ನಗರದ ಹಲವು ವಿಷ್ಣು, ವೆಂಕಟೇಶ್ವರ, ಗೊವಿಂದನ ದೇವಾಲಯಗಳಲ್ಲಿ ಮುಂಜಾನೆ 4 ಗಂಟೆಯಿಂದಲೇ ಸುಪ್ರಭಾತ ಸೇವೆ ವಿಶೇಷ ಪೂಜೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ದೇವಾಲಯಗಳಿಗೆ ಭಕ್ತರ ಸಾಗರ ಹರಿದು ಬರುತ್ತಿದೆ.
ಅರಸೀಕೆರೆ ಮಲೇಕಲ್ಲು ಅಮರಗಿರಿ ತಿರುಪತಿ ದೇವಾಲಯ, ಮಾಲೂರಿನ ಚಿಕ್ಕತಿರುಪತಿ, ಮೈಸೂರು, ಬೆಳಗಾವಿ ಹುಬ್ಬಳ್ಳಿ ಚಿಕ್ಕಮಗಳೂರು, ಹಾಸನ, ಶೀರಂಗಪಟ್ಟಣದ ರಂಗನಾಥ ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ದೇಗುಲದಲ್ಲಿ ಪಂಚಾಭಿಷೇಕ, ಪುಷ್ಪಭಿಷೇಕ ಸೇರಿದಂತೆ ವಿವಿಧ ಪೋಜೆ ನಡೆಯುತ್ತಿದ್ದು, ವಿಶೇಷ ಅಲಂಕಾರ ಮಾಡಿ ಭಕ್ತದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಇನ್ನು ಬೆಂಗಳೂರಿನ ಮಲ್ಲೇಶ್ವರಂ ಹಾಗು ಜೆಪಿ ನಗರದ ಟಿಟಿಡಿ ದೇವಸ್ಥಾನದಲ್ಲಂತೂ ಸಂಭ್ರಮ ಮುಗಿಲುಮುಟ್ಟಿದೆ. ವೈಕುಂಠ ಏಕಾದಶಿ ಪ್ರಯುಕ್ತವಾಗಿಯೇ ದೇವಸ್ಥಾನದ ಸುತ್ತಲೂ ಚಪ್ಪರ ಹಾಕಿ ಹೂವಿನಿಂದ ಅಲಂಕಾರ ಮಾಡಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಭಕ್ತರು ಆಗಮಿಸಿ ವೆಂಕಟೇಶ್ವರನ ದರ್ಶನ ಪಡೆಯುತ್ತಿದ್ದಾರೆ.
ದೇಗುಲಕ್ಕೆ ಬಂದ ಭಕ್ತರಿಗೆ ಪ್ರಸಾದ ವಿತರಣೆ ನಡೆಯುತ್ತಿದ್ದು, ಇಂದು ದೇವಸ್ಥಾನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇದ್ದು, ನೂಕು ನುಗ್ಗಲಾಗದಂತೆ ದೇವಸ್ಥಾನದ ಸುತ್ತಲೂ ಬ್ಯಾರೀಕೇಟ್ ಅಳವಡಿಸಲಾಗಿದೆ.
ಧನುರ್ಮಾಸ ಶುಕ್ಲ ಪಕ್ಷದಲ್ಲಿ ಬರುವ ವೈಕುಂಠ ಏಕಾದಶಿಯಂದು ದೇವತೆಗಳು ಭೂ ಲೋಕಕ್ಕೆ ಬಂದು ಜಗದೊಡೆಯ ಶ್ರೀವಿಷ್ಣು ದೇವರನ್ನು ಪೂಜಿಸುತ್ತಾರೆ ಎಂದು ಪುರಾಣಗಳು ಹೇಳುತ್ತವೆ. ಹೀಗಾಗಿಯೇ ಈ ದಿನದಂದು ದೇವಾಲಯದ ಉತ್ತರ ದ್ವಾರದ ಮೂಲಕ ವಿಷ್ಣುವಿನ ದರ್ಶನ ಮಾಡಿದರೆ ಸಕಲ ಪುಣ್ಯಗಳು ಪ್ರಾಪ್ತಿಯಾಗುತ್ತವೆ ಎಂಬುದು ನಂಬಿಕೆ ಇದೆ.
ವಾಹನ ಸಂಚಾರ ನಿರ್ಬಂಧ
ಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನ ಮತ್ತು ರಾಮಮೂರ್ತಿನಗರ ಮುಖ್ಯರಸ್ತೆಯಿಂದ ಕಲ್ಕೆರೆ ಕಡೆಗೆ ಹೋಗುವ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಪೂಜಾ ಮತ್ತು ರಥೋತ್ಸವ ಕಾರ್ಯಕ್ರಮ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
ಕೆ.ಆರ್.ಪುರ ಕಾ ಮತ್ತು ಸು ಪೊಲೀಸ್ ಠಾಣೆ ರಸ್ತೆ.
ರಾಮಮೂರ್ತಿನಗರ ಮುಖ್ಯರಸ್ತೆಯಿಂದ ಕಲ್ಕೆರೆ ಕಡೆಗೆ ಹೋಗುವ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ
ಕೆ.ಆರ್.ಪುರ ಗ್ರಾಮದ ಒಳಗೆ ಹೋಗುವ ವಾಹನ ಸವಾರರು ಜಿ.ಆರ್.ಟಿ. ಕ್ರಾಸ್ ಮತ್ತು ಸರ್ಕಾರಿ ಕಾಲೇಜ್ ರಸ್ತೆ ಮೂಲಕ ಸಂಚರಿಸಬಹುದಾಗಿದೆ.
ಕಲ್ಕೆರೆ ಕಡೆ ಹೋಗುವ ಮತ್ತು ಬರುವ ವಾಹನ ಸವಾರರು ರಾಮಮೂರ್ತಿನಗರ ಹಳೆ ಪೋಸ್ಟ್ ಆಫೀಸ್ ರಸ್ತೆ ಮೂಲಕ ಸಂಚರಿಸಬಹುದಾಗಿದೆ.
ಜೆ.ಪಿ ನಗರದ ಶ್ರೀ.ತಿರುಮಲಗಿರಿ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಸ್ಥಾನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ತೆರಳುತ್ತಿದ್ದಾರೆ. ಹೀಗಾಗಿ ಪಾದಚಾರಿಗಳ ಹಾಗೂ ವಾಹನ ಸವಾರರ ಸುಗಮ ಸಂಚಾರದ ಹಿತದೃಷ್ಟಿಯಿಂದ ಈ ರಸ್ತೆಗಳಲ್ಲಿ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ.
Advertisement