
ಬೆಂಗಳೂರು: ಶರಣಾಗತರಾಗಿರುವ 6 ಜನರೇ ಕೊನೆಯ ನಕ್ಸಲರು ಎಂದು ತಿಳಿದುಬಂದಿದ್ದು, ಹೊರಗಡೆಯಿಂದ ಬಂದರೆ ನಿಗಾವಹಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಶುಕ್ರವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕ್ಸಲರಿಗೆ ಪರಿಹಾರ ಮತ್ತು ಪುನರ್ ವಸತಿ ಕಲ್ಪಿಸುವ ವಿಚಾರದಲ್ಲಿ ತೋರಿದ ಮುತುವರ್ಜಿಯನ್ನು ಶಸ್ತ್ರಾಸ್ತ್ರಗಳನ್ನು ಹುಡುಕುವುದರಲ್ಲಿ ಸರ್ಕಾರ ತೋರುತ್ತಿಲ್ಲ ಎಂಬ ಬಿಜೆಪಿ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದರು.
ನಕ್ಸಲರು ಅಡಗಿಸಿಟ್ಟಿರುವ ಶಸ್ತ್ರಾಸ್ತ್ರಗಳ ಪತ್ತೆಗೆ ನಾವು ಕೆಲಸ ಮಾಡುತ್ತೇವೆ. ಕಾಡಲ್ಲಿ ಎಲ್ಲಿ ಇಟ್ಟಿದ್ದಾರೆ ಎಂಬುದನ್ನು ನೆರವು ಪಡೆದು ಹುಡುಕುತ್ತಾರೆ. ಇದಕ್ಕೆಲ್ಲ ಪ್ರಕ್ರಿಯೆ ಇದೆ, ಅದರ ಅನುಸಾರ ಪೊಲೀಸರು ಕೆಲಸ ಮಾಡುತ್ತಾರೆ. ಇದೆಲ್ಲ ಬಿಜೆಪಿಯವರಿಗೆ ಗೊತ್ತಿಲ್ಲವೇ? ಅವರು ಕೂಡ ಸರ್ಕಾರ ನಡೆಸಿದ್ದಾರೆ. ಆಗಲೂ ಇದೇ ಪೊಲೀಸ್ ಇಲಾಖೆ ಇತ್ತಲ್ಲವೇ? ಎಂದು ತಿರುಗೇಟು ನೀಡಿದರು.
ನಕ್ಸಲ್ ರವೀಂದ್ರ ಎಂಬಾತ ನಾಪತ್ತೆ ಕುರಿತು ಪ್ರತಿಕ್ರಿಯಿಸಿ, ಶರಣಾಗತರಾಗಿರುವ ಗುಂಪಿನವರು ಆತನನ್ನು ಹೊರ ಹಾಕಿದ್ದರು ಎನ್ನುವ ಮಾಹಿತಿ ಇದೆ. ಯಾವ ಕಾರಣಕ್ಕೆ ಹೊರಹಾಕಿದ್ದರು ಎಂಬುದು ಗೊತ್ತಿಲ್ಲ. ತನಿಖೆ ಮುಂದುವರೆದಿದೆ. ನಕ್ಸಲ್ ಚಟುವಟಿಕೆ ಬಗ್ಗೆ ನಮಗೆ ಈವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಶರಣಾಗತರಾಗಿರುವ ಆರು ಜನರೇ ಕೊನೆ ಎಂಬುದಾಗಿದೆ. ಹೊರಗಡೆಯಿಂದ ಬಂದರೆ ನಿಗಾವಹಿಸಲಿದ್ದರೆ ಎಂದು ಹೇಳಿದರು.
ಪೊಲೀಸ್ ಎನ್ ಕೌಂಟರ್ ನಲ್ಲಿ ಬಲಿಯಾದ ವಿಕ್ರಮ್ ಗೌಡ ಕುಟುಂಬ ಪರಿಹಾರ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಕುರಿತು ಪರಿಶೀಲನೆ ನಡೆಸಲವಾಗುವುದು ಎಂದರು. ಇದೇ ವೇಳೆ ನಕ್ಸಲರು ಶರಣಾಗತರಾಗಿರುವ ಪ್ರಕರಣ ಮತ್ತು ವಿಕ್ರಮ್ ಗೌಡ ಪ್ರಕರಣ ಬೇರೆ ಎಂದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ವಿಚಾರವಾಗಿ ಮಾತನಾಡಿ, ಸಭೆಯಲ್ಲಿ ಏನು ಚರ್ಚೆ ಆಗಲಿದೆ. ಅಜೆಂಡಾ ಏನು ಎಂಬುದು ಗೊತ್ತಿಲ್ಲ. ನಾನು ಕೂಡ ನಿಮ್ಮ ಹಾಗೆ ಊಹೆ ಮಾಡುತ್ತಿದ್ದೇನೆ. ಶಾಸಕಾಂಗ ಪಕ್ಷದಿಂದ ನಮಗೆ ಇನ್ನು ಯಾವುದೇ ಮಾಹಿತಿ ಬಂದಿಲ್ಲ. ಅನೇಕ ಶಾಸಕರು ಕ್ಷೇತ್ರದಲ್ಲಿನ ಕೆಲಸಗಳ ಬಗ್ಗೆ ಚರ್ಚೆ ಮಾಡಬಹುದು ಅಂದುಕೊಂಡಿದ್ದೇನೆ ಎಂದರು.
ಬಜೆಟ್ ಅಧಿವೇಶನ ಹತ್ತಿರ ಬರುತ್ತಿದ್ದು, ಹೀಗಾಗಿ ಅವರವರ ಕ್ಷೇತ್ರದ ಕೆಲಸ, ಅನುದಾನ ಕೊಡಬೇಕು ಎಂಬುದರ ಕುರಿತು ಚರ್ಚೆಯಾಗಲಿದೆ. ಮುಖ್ಯಮಂತ್ರಿಗಳು ಬಜೆಟ್ ಮಾಡುವ ವೇಳೆ ಎಲ್ಲಾ ಪರಿಗಣಿಸಿ ಮಾಡುತ್ತಾರೆ. ಜಾತಿ ಗಣತಿ ಬಗ್ಗೆಯೂ ಚರ್ಚೆ ಮಾಡಬಹುದು. ಎಲ್ಲ ಶಾಸಕರ ಗಮನಕ್ಕೆ ತರಬಹುದು ಎಂದು ತಿಳಿಸಿದರು.
Advertisement