
ಬೆಂಗಳೂರು: ಸಿವಿಲ್ ಗುತ್ತಿಗೆದಾರನನ್ನು ಹನಿಟ್ರ್ಯಾಪ್ ಮಾಡಿ ನಗದು ಹಾಗೂ ಚಿನ್ನಾಭರಣ ಸುಲಿಗೆ ಮಾಡಿದ್ದ ಮಹಿಳೆ ಸೇರಿ ಇಬ್ಬರು ಆರೋಪಿ ಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ನಯನಾ ಮತ್ತು ಆಕೆಯ ಸಹಚರರಾದ ಮೋಹನ್ ಬಂಧಿತ ಆರೋಪಿಗಳು. ಈ ಹಿಂದೆ ಈಕೆಯ ಸಹಚರರಾದ ಜಯರಾಜ್, ಸಂತೋಷ್ ಮತ್ತು ಅಜಯ್'ರನ್ನು ಬಂಧಿಸಲಾಗಿತ್ತು.
ದೂರುದಾರ ರಂಗನಾಥ ಸಿವಿಲ್ ಗುತ್ತಿಗೆದಾರರಾಗಿದ್ದು, 6 ತಿಂಗಳ ಹಿಂದೆ ಶಿವು ಎಂಬ ಸ್ನೇಹಿತನ ಮೂಲಕ ನಯನಾಳ ಪರಿಚಯವಾಗಿದೆ. ಈ ನಡುವೆ ರಂಗನಾಥ ಕಾರ್ಯ ನಿಮಿತ್ತ ಡಿ.9ರಂದು ಮಾಗಡಿ ರಸ್ತೆಯ ತುಂಗಾನಗರದ ಮಾರ್ಗವಾಗಿ ನೆಲಗದರನಹಳ್ಳಿ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದರು. ತುಂಗಾನಗರ ಕ್ರಾಸ್ನಲ್ಲಿ ಎದುರಾದ ನಯನಾ, ರಂಗನಾಥ ಅವರನ್ನು ಮಾತನಾಡಿಸಿದ್ದಳು. ಆಗ ಕೂಡಲೇ ಇಲ್ಲೇ ಹತ್ತಿರದಲ್ಲೇ ನಮ್ಮ ಮನೆ ಇದೆ. ಟೀ ಕುಡಿದು ಹೋಗಿ ಎಂದು ಕರೆದಿದ್ದಾಳೆ. ಅದಕ್ಕೆ ಒಪ್ಪಿದ ರಂಗನಾಥ ಆಕೆಯ ಮನೆಗೆ ಹೋಗಿದ್ದಾರೆ. ಇಬ್ಬರು ಕುಳಿತು ಮಾತನಾಡುವಾಗ ಏಕಾಏಕಿ ಆರೋಪಿಗಳಾದ ಸಂತೋಷ್, ಅಜಯ್, ಜಯರಾಜ್ ಮನೆಗೆ ನುಗ್ಗಿದ್ದಾರೆ. ನಾವು ಕ್ರೈಂ ಪೊಲೀಸರು ಎಂದು ಪರಿಚಯಿಸಿಕೊಂಡಿದ್ದರು. ನೀವು ಮನೆಯಲ್ಲಿ ವ್ಯಭಿಚಾರ ಮಾಡುತ್ತಿದ್ದೀರಿ. ಹೊರಗಡೆ ಜೀಪಿನಲ್ಲಿ ಮೇಡಂ ಇದ್ದಾರೆ ಎಂದು ರಂಗನಾಥ್ ಮೇಲೆ ಹಲ್ಲೆ ಮಾಡಿ, ಬಳಿಕ ರಂಗನಾಥ್ನ ಬಟ್ಟೆ ಬಿಚ್ಚಿಸಿ ಮೊಬೈಲ್ನಲ್ಲಿ ಫೋಟೋ ತೆಗೆದು ವಿಡಿಯೋ ಸೆರೆ ಹಿಡಿದಿದ್ದಾರೆ. 2 ಲಕ್ಷ ರೂ. ಕೊಟ್ಟರೆ ಇಲ್ಲೇ ಬಿಟ್ಟು ಹೋಗುತ್ತೇವೆ. ಇಲ್ಲವಾದರೆ, ನಿಮ್ಮಿಬರ ನಡುವೆ ಅಕ್ರಮ ಸಂಬಂಧ ಇದೆ ಎಂದು ನಿನ್ನ ಹೆಂಡತಿಗೆ ತಿಳಿಸುತ್ತೇವೆ ಎಂದು ಬೆದರಿಸಿದ್ದಾಳೆ. ಅದರಿಂದ ಹೆದರಿದ ರಂಗನಾಥ್ರಿಂದ 26 ಸಾವಿರ ರೂ., 5 ಲಕ್ಷ ಮೌಲ್ಯದ ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿದ್ದರು.
ಕೆಲ ಹೊತ್ತಿನ ಬಳಿಕ ರಂಗನಾಥ್ ಮೊಬೈಲ್'ಗೆ ನಯನಾ ಕರೆ ಮಾಡಿದ್ದಾಳೆ. ಈ ವೇಶೆ ಘಟನೆ ಸಂಬಂಧ ಪೊಲೀಸರಿಗೆ ದೂರು ಕೊಡೋಣ ಎಂದು ಹೇಳಿದ್ದಾರೆ. ಈ ವೇಳೆ ನಯನಾ ಪೊಲೀಸರಿಗೆ ದೂರು ನೀಡಿದರೆ ನನ್ನ ಮಗುವನ್ನು ನಿನ್ನ ಮನೆಗೆ ಕರೆತಂದು ನನಗೂ ನಿನಗೂ ಸಂಬಂಧವಿದೆ ಎಂದು ಹೇಳುವುದಾಗಿ ಹೇಳಿದ್ದಾಳೆ. ಬಳಿಕ ಆರೋಪಿಗಳ ಬಗ್ಗೆ ತಿಳಿದ ರಂಗನಾಥ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದು. ತನಿಖೆ ನಡೆಸುತ್ತಿದ್ದಾರೆ.
Advertisement