

ವಿಜಯಪುರ: ವಿಜಯಪುರದಲ್ಲಿ ಹಬ್ಬದ ಆಚರಣೆಯ ನಂತರ ಕೆಲಸಕ್ಕೆ ತಡವಾಗಿ ಬಂದಿದ್ದ ಮೂವರು ಕಾರ್ಮಿಕರನ್ನು ಮಾಲೀಕನು ಅಮಾನುಷವಾಗಿ ಥಳಿಸಿರುವ ಆಘಾತಕಾರಿ ಘಟನೆ ಸೋಮವಾರ ನಡೆದಿದೆ. ಗಾಂಧಿನಗರದ ಸ್ಟಾರ್ ಚೌಕ್ ಬಳಿ ಇಟ್ಟಿಗೆ ಕಾರ್ಖಾನೆಯಲ್ಲಿ ಮೂವರು ಕಾರ್ಮಿಕರಿಗೆ ರಾಡ್ನಿಂದ ಹಲ್ಲೆ ನಡೆಸಿರುವ ವೀಡಿಯೊ ವೈರಲ್ ಆಗಿದ್ದು, ವ್ಯಾಪಕ ಕಳವಳವನ್ನು ಉಂಟುಮಾಡಿದೆ.
ಸಂತ್ರಸ್ತರು ಬಾಗಲಕೋಟೆ ಜಿಲ್ಲೆಯ ಚಕ್ಕಲಿಕಿ ಗ್ರಾಮದ ಸದಾಶಿವ ಮಾದರ್, ಎಸ್. ಬಬಲಾದಿ ಮತ್ತು ಉಮೇಶ್ ಎಂದು ಗುರುತಿಸಲಾಗಿದೆ. ಇಟ್ಟಿಗೆ ಕಾರ್ಖಾನೆಯ ಮಾಲೀಕ ಖೇಮು ರಾಥೋಡ್, ಕ್ಷುಲ್ಲಕ ಕಾರಣಕ್ಕಾಗಿ ಕಾರ್ಮಿಕರನ್ನು ಅಮಾನವೀಯವಾಗಿ ಶಿಕ್ಷಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಲಕ್ಷ್ಮಣ್ ಬಿ. ನಿಂಬರಗಿ ತಿಳಿಸಿದ್ದಾರೆ.
ಆರೋಪಿ ಮಾಲೀಕ ಖೇಮು ರಾಥೋಡ್ ಅವರ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡಲು ಒಪ್ಪಿಕೊಂಡ ನಂತರ ಕಾರ್ಮಿಕರು ಅವರಿಂದ ಮುಂಗಡ ಹಣ ಪಡೆದಿದ್ದರು ಎಂದು ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ. ಸಂಕ್ರಾಂತಿ ಹಬ್ಬವನ್ನು ಆಚರಿಸಲು ಅವರು ತಮ್ಮ ಊರಿಗೆ ಹೋಗಿದ್ದರು. ಆದರೆ ನಾಲ್ಕು ದಿನ ತಡವಾಗಿ ಹಿಂತಿರುಗಿದರು.
ಈ ವಿಳಂಬದಿಂದಾಗಿ ಖೇಮು ರಾಥೋಡ್ ಕೋಪಗೊಂಡಿದ್ದು ಮೊದಲು ಅವರನ್ನು ನಿಂದಿಸಿ, ತಡವಾಗಿ ಬಂದಿದ್ದನ್ನು ಪ್ರಶ್ನಿಸಿದನು. ಈ ವೇಳೆ ಕಾರ್ಮಿಕರು ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರೂ, ಅಷ್ಟಕ್ಕೆ ಸುಮ್ಮನಾಗದ ಖೇಮು ರಾಥೋಡ್ ಜೊತೆಗಾರರು ಮೂವರು ಕಾರ್ಮಿಕರನ್ನು ಹಗ್ಗಗಳಿಂದ ಕಟ್ಟಿ ನಂತರ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ.
ವೀಡಿಯೊದಲ್ಲಿ ಮೂವರು ಕಾರ್ಮಿಕರ ಕೈ ಮತ್ತು ಕಾಲುಗಳನ್ನು ಕಟ್ಟಿ, ಕಾಲುಗಳನ್ನು ಚಾಚಿ ಕುಳಿತುಕೊಳ್ಳುವಂತೆ ಮಾಡಲಾಗಿದೆ. ನಂತರ ಒಬ್ಬೊಬ್ಬರ ಪಾದಗಳಿಗೂ ಪೈಪ್ನಿಂದ ಮನಸೋ ಇಚ್ಛೆ ಹೊಡೆದಿದ್ದಾರೆ. ಈ ವೇಳೆ ನೋವು ಸಹಿಕೊಳ್ಳಲಾಗದೇ ಕಾರ್ಮಿಕರು ಕಿರುಚುತ್ತಾ ಅಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ವಿಷಯದ ಬಗ್ಗೆ ತನಿಖೆ ಆರಂಭಿಸಿದ್ದಾರೆ.
Advertisement