
ಶಿವಮೊಗ್ಗ: ಬೀದಿ ನಾಯಿಯನ್ನು ಬರ್ಬರವಾಗಿ ಕೊಂದು, ಆಟೋ ಹಿಂದೆ ಕಟ್ಟಿಕೊಂಡು ಎಳೆದೊಯ್ದ ಆಟೋ ಚಾಲಕನನ್ನು ಶಿವಮೊಗ್ಗ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಹೊಸನಗರ ತಾಲೂಕಿನ ರಿಪ್ಪನ್ಪೇಟೆಯ ಕೆಂಚನಾಳ ಗ್ರಾಮದಲ್ಲಿ ಜ.16ರಂದು ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆಂಚನಾಲ ಗ್ರಾಮದ ರೈಲ್ವೆ ನಿಲ್ದಾಣದ ಬಳಿಯಲ್ಲಿ ತನ್ನ ಪಾಡಿಗೆ ತಾನು ಮಲಗಿದ್ದ ನಾಯಿಯ ಮೇಲೆ ಆರೋಪಿ ವಾಜೀದ್ ಎಂಬಾದ ದೊಡ್ಡ ಗಾತ್ರದ ಕಲ್ಲನ್ನು ಎತ್ತಿ ಹಾಕಿದ್ದಾನೆ. ಈ ವೇಳೆ ನಾಯಿ ಕಿರುಚಲು ಆರಂಭಿಸಿದೆ. ಇಷ್ಟಕ್ಕೇ ಸುಮ್ಮನಾಗದ ಆರೋಪಿ ಮತ್ತೊಮ್ಮೆ ಅದೇ ಕಲ್ಲನ್ನು ಮತ್ತೆ ತಲೆ ಮೇಲೆ ಹಾಕಿದ್ದಾನೆ. ಇದರಿಂದ ಅರ್ಧ ಜೀವವಾದ ನಾಯಿ ಅಲ್ಲೇ ನರಳಾಡುತ್ತಿರುತ್ತದೆ. ಅಲ್ಲಿಂದ ಸ್ವಲ್ಪ ದೂರಕ್ಕೆ ಹೋದ ಆರೋಪಿ ಮತ್ತೊಮ್ಮೆ ಹಿಂದಿರುಗಿ ಬಂದು ಅದೇ ಕಲ್ಲನ್ನು ಮತ್ತೆ ನಾಯಿಯ ತಲೆ ಮೇಲೆ ಹಾಕಿದ್ದಾನೆ. ಇದರಿಂದ ನಾಯಿ ಸ್ಥಳದಲ್ಲಿಯೇ ಪ್ರಾಣಬಿಟ್ಟಿದೆ. ಕೊನೆಗೆ ಆ ನಾಯಿಯನ್ನು ತನ್ನ ಆಟೋ ಹಿಂಬದಿಗೆ ಕಟ್ಟಿ ರಸ್ತೆಯಲ್ಲಿ ಅತೀ ಅಮಾನುಷವಾಗಿ ಎಳೆದೊಯ್ದಿದ್ದಾನೆ.
ಘಟನೆ ವೇಳೆ ಅಲ್ಲಿದ್ದ ಸ್ಥಳೀಯ ಯುವಕನೊಬ್ಬ ತನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ. ಘಟನೆ ಕುರಿತು ರಿಪ್ಪನಪೇಟೆಯ ವ್ಯಕ್ತಿಯೊಬ್ಬರ ಗಮನಕ್ಕೆ ತಂದಿದ್ದಾನೆ. ನಂತರ ಅವರು ಈ ವಿಡಿಯೋ ಹಾಗೂ ಮಾಹಿತಿಯನ್ನು ಪ್ರಾಣಿ ದಯಾ ಸಂಘದ ರಾಷ್ಟ್ರೀಯ ಕಾರ್ಯಕರ್ತೆ ಮನೇಕಾ ಗಾಂಧಿ ಹಾಗೂ ಪ್ರಾಣಿ ದಯಾ ಸಂಘದವರ ಮೇಲ್ ಐಡಿಗೆ ಯುವಕನ ಮೊಬೈಲ್ನಿಂದಲೇ ಸಂದೇಶ ಕಳುಹಿಸಿದ್ದಾರೆ.
ಸಂದೇಶ ಕಳುಹಿಸಿ ಕೇವಲ 45 ನಿಮಿಷಗಳಲ್ಲೇ ಸ್ಪಂದಿಸಿದ ಮಾಜಿ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರು ಯುವಕನಿಗೆ ಕೂಡಲೇ ಸ್ಥಳೀಯ ಠಾಣೆಗೆ ತೆರಳಿ ದೂರು ಸಲ್ಲಿಸುವಂತೆ ಸೂಚಿಸಿ. ಈ ಬಗ್ಗೆ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಹಾಗೂ ರಿಪ್ಪನ್ಪೇಟೆ ಪಿಎಸ್ಐ ಪ್ರವೀಣ್ ಅವರಿಗೆ ಮಾಹಿತಿ ನೀಡಿದ್ದಾರೆ.
ಮನೇಕಾ ಗಾಂಧಿ ಅವರ ಕರೆ ಬರುತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಪ್ರಾಣಿ ದಯಾ ಸಂಘದವರು ಈ ಬಗ್ಗೆ ಪಶು ವೈದ್ಯಾಧಿಕಾರಿ ಕಡೆಯಿಂದ ಪಟ್ಟಣದ ಠಾಣೆಗೆ ದೂರು ದಾಖಲಿಸಿದ್ದಾರೆ. ದೂರು ಸಲ್ಲಿಕೆಯಾದ ಕೇವಲ 15 ನಿಮಿಷಗಳಲ್ಲಿ ಆರೋಪಿ ಆಟೋ ಚಾಲಕ ವಾಜೀದ್ನನ್ನು ಪಿಎಸ್ಐ ಪ್ರವೀಣ್ ನೇತೃತ್ವದ ಸಿಬ್ಬಂದಿಗಳು ಬಂಧಿಸಿದ್ದಾರೆ.
ಮನೆಯಲ್ಲಿ ತಾನು ಸಾಕಿದ್ದ ಕೋಳಿಗಳನ್ನು ನಾಯಿ ತಿನ್ನುತ್ತಿದ್ದರಿಂದ ಕುಪಿತಗೊಂಡು ಆರೋಪಿ ಹೀಗೆ ಮಾಡಿದ್ದಾನೆಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಘಟನೆ ಸಂಬಂಧ ಆರೋಪಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Advertisement