
ತುಮಕೂರು: ದೇಶದಲ್ಲಿ ಇನ್ನೂ ಶೇ 60ರಷ್ಟು ಜನರಿಗೆ ಉಚಿತವಾಗಿ ಪಡಿತರ ನೀಡಲಾಗುತ್ತಿದ್ದು, ಉಚಿತವಾಗಿ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ. ಉಚಿತವಾಗಿ ಸೌಲಭ್ಯ ಕೊಡುವುದನ್ನು ಟೀಕಿಸುತ್ತಿಲ್ಲ. ಇಷ್ಟು ವರ್ಷಗಳ ಸುಧೀರ್ಘ ಅವಧಿಯಲ್ಲಿ ಏನು ಸಾಧನೆ ಮಾಡಿದ್ದೇವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಇನ್ಫೊಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ಶನಿವಾರ ಹೇಳಿದರು.
ತುಮಕೂರು ವಿಶ್ವವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಪ್ರೇರಣಾ ಉಪನ್ಯಾಸ ಮಾಲಿಕೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಹುತೇಕ ಎಲ್ಲಾ ಸೂಚ್ಯಂಕಗಳಲ್ಲಿ ದೇಶದ ಸಾಧನೆಯು ಕಳಪೆಯಾಗಿಯೇ ಉಳಿದಿದೆ. ಕಳೆದ 77 ವರ್ಷಗಳಿಂದ ಹಲವು ಸರ್ಕಾರಗಳು ಬಡತನ ನಿರ್ಮೂಲನೆಗೆ ಸಾಕಷ್ಟು ಪ್ರಯತ್ನ ನಡೆಸಿವೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ನಾನೂ ಸೇರಿದಂತೆ ನಮ್ಮ ಹಿರಿಯರು ಇದಕ್ಕೆ ಕಾರಣರಾಗಿದ್ದೇವೆ. ಸರ್ಕಾರ ದೇಶದ ಶೇ.60ರಷ್ಟು ಜನರಿಗೆ ಉಚಿತ ಪಡಿತರ ನೀಡುತ್ತಿದೆ. ಇದು ಯುರೋಪಿನ ಸಂಪೂರ್ಣ ಜನಸಂಖ್ಯೆಗೆ ಸಮಾನವಾಗಿದೆ. ಜರ್ಮನಿ ಮತ್ತು ಜಪಾನ್ ವಿಶ್ವಯುದ್ಧದಲ್ಲಿ ಸೋತರೂ ಧೃತಿಗೆಡದೆ ತಮ್ಮ ದೇಶಗಳನ್ನು ಕಠಿಣ ಪರಿಶ್ರಮದಿಂದ ಮರುನಿರ್ಮಾಣ ಮಾಡಿದರು. ಅಂತಹ ಛಲ ನಿಮ್ಮಲ್ಲೂ ಒಡಮೂಡಬೇಕಿದೆ. ಉಚಿತ ಸೌಲಭ್ಯ ಕೊಡುವುದನ್ನು ಟೀಕಿಸುತ್ತಿಲ್ಲ. ಇಷ್ಟು ವರ್ಷಗಳ ಸುಧೀರ್ಘ ಅವಧಿಯಲ್ಲಿ ಏನು ಸಾಧನೆ ಮಾಡಿದ್ದೇವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ವ್ಯಕ್ತಿ ಎತ್ತರಕ್ಕೆ ಏರಬೇಕೆಂದರೆ ಕಷ್ಟಪಟ್ಟು ಕೆಲಸ ಮಾಡುವುದೊಂದೇ ದಾರಿ. ಯಾವ ಕ್ಷೇತ್ರದಲ್ಲಿ ನಿಮಗೆ ಅಭಿರುಚಿ, ಸಾಮರ್ಥ್ಯ ಇದೆಯೋ ಅದನ್ನು ಕಂಡುಕೊಂಡು, ಅದರಲ್ಲಿ ಸಮರ್ಪಣಾ ಭಾವದಿಂದ ದುಡಿಯಿರಿ. ಯಾವ ದೇಶದಲ್ಲಿಯೂ ಸರ್ಕಾರವೇ ಎಲ್ಲರಿಗೂ ಉದ್ಯೋಗ ಕೊಡುತ್ತಿಲ್ಲ. ನಾಯಕತ್ವ ಗುಣವುಳ್ಳವನನ್ನು ಸಮಾಜ ಗೌರವಿಸುತ್ತದೆ. ಉತ್ತಮ ಮೌಲ್ಯಗಳು, ಪ್ರಾಮಾಣಿಕತೆಯುಳ್ಳ ಶಿಕ್ಷಣವು ನಿಮ್ಮನ್ನು ಉತ್ತಮ ನಾಯಕನನ್ನಾಗಿಸುತ್ತದೆ. ಆ ನಾಯಕತ್ವವು ಉದ್ಯೋಗವನ್ನು ಕಲ್ಪಿಸುತ್ತದೆ. ಆಹಾರ, ವಸತಿ, ಶಿಕ್ಷಣ ಇವುಗಳ ಅಭಿವೃದ್ಧಿಯಾಗದ ಹೊರತು ದೇಶವು ಅಭಿವೃದ್ಧಿಯಾಗದು ಎಂದು ತಿಳಿಸಿದರು.
ನಾವು ವರ್ತಮಾನದ ತಂತ್ರಜ್ಞಾನವನ್ನು ಅರಿಯುವ ಪ್ರಯತ್ನ ಮಾಡಬೇಕು. ಸಮಯದ ಸದುಪಯೋಗ, ನಾಳೆಗೆ ನಮ್ಮನ್ನು ಉತ್ತಮ ಪಡಿಸಿಕೊಳ್ಳುವತ್ತ ಗಮನವಹಿಸಬೇಕು. ಸರ್ಕಾರದ ಕೆಲಸ ಉದ್ಯೋಗವನ್ನು ಸೃಷ್ಟಿ ಮಾಡುವುದರ ಜತೆಗೆ ಉತ್ತಮ ಉದ್ಯೋಗದ ವಾತಾವರಣವನ್ನು ನಿರ್ಮಿಸುವುದು ಸಹ ಆಗಿರುತ್ತದೆ. ಹೂಡಿಕೆದಾರರನ್ನು ಆಕರ್ಷಿಸಿ ಉದ್ಯೋಗ ಸೃಷ್ಟಿಗೆ ಸಹಕಾರವನ್ನು ನೀಡಬೇಕು. ರಾಜ್ಯದ ತೆರಿಗೆಯನ್ನು ಸಮತೋಲನದಲ್ಲಿ ಇರಿಸಿ ಮೂಲಭೂತ ಸೌಕರ್ಯಗಳನ್ನು ನೀಡುವುದು ಸರ್ಕಾರದ ಕಾರ್ಯ ಆಗಬೇಕು ಎಂದು ವಿಶ್ಲೇಷಿಸಿದರು.
Advertisement