
ಬೆಳಗಾವಿ: ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ಪ್ರೇಮಿಗಳಿಬ್ಬರು ಆಟೋದಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಪ್ರೇಮಿಗಳನ್ನು ರಾಘವೇಂದ್ರ ಜಾಧವ್(28) ಮತ್ತು ರಂಜೀತಾ ಚೋಬರಿ(26) ಎಂದು ಗುರುತಿಸಲಾಗಿದ್ದು, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ನಿವಾಸಿಗಳಾದ ಇವರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಮುನವಳ್ಳಿ ಪಟ್ಟಣದ ರಾಘವೇಂದ್ರ, ರಂಜೀತಾ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ಮದುವೆ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದ್ದರು. ಆದರೆ, ಮನೆಯಲ್ಲಿ ರಂಜೀತಾ 15 ದಿನಗಳ ಹಿಂದೆ ಅಷ್ಟೇ ಬೇರೊಬ್ಬ ಹುಡುಗನ ಜೊತೆ ಮದುವೆ ನಿಶ್ಚಿತಾರ್ಥ ಮಾಡಿ ಮುಗಿಸಿದ್ದಾರೆ. ರಂಜೀತ, ಈ ವಿಚಾರವನ್ನು ಆಟೋ ಓಡಿಸಿಕೊಂಡಿದ್ದ ಪ್ರಿಯಕರ ರಾಘವೇಂದ್ರಗೆ ತಿಳಿಸಿದ್ದಾರೆ.
ಇದರಿಂದ ಮನನೊಂದು ಇಬ್ಬರು ಒಟ್ಟಿಗೆ ಸಾಯಲು ತೀರ್ಮಾನಿಸಿ, ಸೋಮವಾರ ರಾತ್ರಿ ಇಬ್ಬರೂ ಆಟೋದಲ್ಲಿ ಚಿಕ್ಕನಂದಿ ಗ್ರಾಮದ ಹೊರ ವಲಯದ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಬಳಿಕ ಪ್ರಿಯಕರ ಓಡಿಸುತ್ತಿದ್ದ ಆಟೋದಲ್ಲೇ ಇಬ್ಬರು ನೇಣುಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.
ಆಟೋದ ಹಿಂದಿನ ಸೀಟಿನ ಮೇಲಿನ ಕಬ್ಬಿಣದ ರಾಡ್ ಗೆ ಅಗ್ಗ ಕಟ್ಟಿ ನೇಣಿಗೆ ಶರಣಾಗಿದ್ದಾರೆ. ಇಬ್ಬರ ದೇಹಗಳೂ ಕಾಲು ಮುದುಡಿಕೊಂಡು ಕೆಳಗೆ ಇಳಿಬಿಟ್ಟಂಥ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
Advertisement