
ಬೆಂಗಳೂರು: 2014 ರಲ್ಲಿ ಅಧಿಸೂಚನೆ ಹೊರಡಿಸಲಾದ ರಕ್ಷಣಾ ಮತ್ತು ಏರೋಸ್ಪೇಸ್ ಪಾರ್ಕ್ಗಾಗಿ 2018-19 ರಲ್ಲಿ ಭೂಸ್ವಾಧೀನ ಮಾಡಿಕೊಂಡಾಗ ನಾನು ಎರಡು ಎಕರೆ ಜಾಗ ಕಳೆದುಕೊಂಡೆ. ಈಗ, ನನ್ನ ಬಳಿ ಉಳಿದಿರುವ 1.5 ಎಕರೆಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಪೋಲನಹಳ್ಳಿಯ ಸಂಕಷ್ಟದಲ್ಲಿರುವ ರೈತ ಜಗದೀಶ್ ಹೇಳುತ್ತಾರೆ.
ರಕ್ಷಣಾ ಮತ್ತು ಏರೋಪ್ಸೇಸ್ ಪಾರ್ಕ್ ಯೋಜನೆಗೆ 1,777 ಎಕರೆಗಳನ್ನು ಸ್ವಾಧೀನಪಡಿಸಿಕೊಂಡಿದ್ದಕ್ಕಾಗಿ ಕೆಐಎಡಿಬಿಯಿಂದ ನೊಟೀಸ್ ಪಡೆದಿರುವ 13 ಹಳ್ಳಿಗಳ ನೂರಾರು ರೈತರು ಇಂದು ದುಃಖದಲ್ಲಿ ಕೈತೊಳೆಯುವ ಪರಿಸ್ಥಿತಿ ಉಂಟಾಗಿದೆ.
ನಾವು ಸಾಯಬೇಕಾದರೆ ಸಾಯುತ್ತೇವೆ, ಆದರೆ ನಾವು ನಮ್ಮ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂಬ ಭಾವನೆ ಈ ಪ್ರದೇಶದಲ್ಲಿ ಪ್ರತಿಧ್ವನಿಸುತ್ತಿದೆ. ಹಿಂದಿನ ಯೋಜನೆಗಳಿಗೆ ತಮ್ಮ ಭೂಮಿಯನ್ನು ಬಿಟ್ಟುಕೊಟ್ಟ ನಂತರ ಅವರು ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಜೊತೆ ಮಾತನಾಡುತ್ತಾ ರೈತರು ಅಳಲು ತೋಡಿಕೊಂಡರು.
ಸರ್ಕಾರವು ಎಕರೆಗೆ 1.1 ಕೋಟಿ ರೂಪಾಯಿ ನೀಡುವುದಾಗಿ ಭರವಸೆ ನೀಡಿತ್ತು. ನನಗೆ ಕೇವಲ 80 ಲಕ್ಷ ರೂಪಾಯಿ ಸಿಕ್ಕಿತು, ಅದೂ ಎರಡು ವರ್ಷ ತಡವಾಗಿ, 2020 ರಲ್ಲಿ. ದಾಖಲೆಗಳ ಸಮಸ್ಯೆಗಳನ್ನು ಉಲ್ಲೇಖಿಸಿದರು ಆದರೆ ವಾಸ್ತವದಲ್ಲಿ ಇದು ಪರಿಹಾರವನ್ನು ವಿಳಂಬಗೊಳಿಸಲು ಒಂದು ಕಾರಣವಾಗಿದೆ. ಪರಿಹಾರವನ್ನು ಪಡೆದ ನಂತರ ನಮ್ಮ ಪರಿಹಾರದಿಂದ ಕಮಿಷನ್ ಪಡೆಯುವ ಏಜೆಂಟರಿಗೆ ಲಂಚ ನೀಡುವಂತೆ ನಮ್ಮನ್ನು ಒತ್ತಾಯಿಸಲಾಯಿತು ಎನ್ನುತ್ತಾರೆ ಜಗದೀಶ್ ಎಂಬ ರೈತ.
ರೈತ ನಾಯಕ ರಮೇಶ್ ಚೀಮಾಚನಹಳ್ಳಿ, ಈ ಹಿಂದೆ ಸ್ವಾಧೀನಪಡಿಸಿಕೊಂಡ 1,282 ಎಕರೆ ಭೂಮಿಯಲ್ಲಿ, ನಂತರ ಬ್ರಿಗೇಡ್ ಬಿಲ್ಡರ್ಸ್ (73 ಎಕರೆ), ಚಾಣಕ್ಯ ವಿಶ್ವವಿದ್ಯಾಲಯ (116 ಎಕರೆ), ಇಫ್ಕೊ ನ್ಯಾನೋ ಯೂರಿಯಾ (13 ಎಕರೆ) ಮತ್ತು ಎಕ್ಸೈಡ್ ಬ್ಯಾಟರಿ ಕಾರ್ಖಾನೆ (82 ಎಕರೆ) ನಂತಹ ಖಾಸಗಿ ಸಂಸ್ಥೆಗಳಿಗೆ ಭೂಮಿಯನ್ನು ಹಂಚಿಕೆ ಮಾಡಲಾಯಿತು ಎಂದು ಆರೋಪಿಸಿದರು, ಇದು ಸ್ವಾಧೀನದ ಹಿಂದಿನ ಮೂಲ ಉದ್ದೇಶದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತು.
ಮಟ್ಟಬರಲುವಿನಲ್ಲಿ, ಮತ್ತೊಬ್ಬ ಸಂತ್ರಸ್ತ ರೈತ ಮಹಿಳೆ ಪಾರ್ವತಮ್ಮ ಅವರು ಸಿಎಂ ಬಗ್ಗೆ ನಿರಾಶೆ ವ್ಯಕ್ತಪಡಿಸಿದರು ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದರೆ ಅಧಿಸೂಚನೆಗಳನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ಏನೂ ಮಾಡಿಲ್ಲ ಎಂದರು.
ರೈತರು ಈಗ ವಾಸ್ತವವನ್ನು ಅರ್ಥಮಾಡಿಕೊಂಡಿರುವುದರಿಂದ ಪ್ರತಿಭಟನೆಯ ತೀವ್ರತೆ ಹೆಚ್ಚಾಗಿದೆ. ಭೂಮಿ ಬಿಟ್ಟುಕೊಟ್ಟವರು ಕೆಲಸವಿಲ್ಲದೆ, ಜೀವನೋಪಾಯವಿಲ್ಲದೆ ಬಳಲುತ್ತಿದ್ದಾರೆ. ಇಲ್ಲಿನ ರೈತರಿಗೆ ಗೊತ್ತಿರುವುದು ಕೃಷಿ ಮಾತ್ರ, ಈಗ ಅವರು ಬೇರೆಯವರ ಭೂಮಿಯಲ್ಲಿ ಕಾರ್ಮಿಕರಾಗಿದ್ದಾರೆ ಎಂದು ದಲಿತ ನಾಯಕ ಮತ್ತು ಭೂಸ್ವಾಧೀನ ಪ್ರತಿರೋಧ ಸಮಿತಿಯ ಸಂಚಾಲಕ ಕರಳ್ಳಿ ಶ್ರೀನಿವಾಸ್ ಹೇಳುತ್ತಾರೆ.
ರೈತರು ಮತ್ತು ಕಾರ್ಯಕರ್ತರು ತಮ್ಮ ಪ್ರತಿಭಟನೆ ಎಷ್ಟೇ ಸಮಯ ತೆಗೆದುಕೊಂಡರೂ ಮುಂದುವರಿಯುತ್ತದೆ ಎಂದು ಘೋಷಿಸಿದ್ದಾರೆ. ಚನ್ನರಾಯಪಟ್ಟಣದ 13 ಹಳ್ಳಿಗಳ ಬಾಧಿತ ನಿವಾಸಿಗಳು ಇಂದು ದೇವನಹಳ್ಳಿ ಪ್ರತಿಭಟನಾ ಸ್ಥಳದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. "ನಮ್ಮ ಜೀವನ ಈ ಭೂಮಿಯಲ್ಲಿದೆ, ಈ ಮಣ್ಣಿನ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ" ಎಂಬ ಘೋಷಣೆಯೊಂದಿಗೆ, ಸರ್ಕಾರವು ತನ್ನ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಭೂಸ್ವಾಧೀನ ಯೋಜನೆಯನ್ನು ತಿರಸ್ಕರಿಸುವಂತೆ ಒತ್ತಾಯಿಸುತ್ತಿದ್ದಾರೆ.
Advertisement