
ಬೆಂಗಳೂರು: ರಾಜ್ಯದಲ್ಲಿ ಕಳೆದ ಐದೂವರೆ ವರ್ಷಗಳಲ್ಲಿ 82 ಹುಲಿಗಳು ಮೃತಪಟ್ಟಿರುವುದಕ್ಕೆ ಆಘಾತ ವ್ಯಕ್ತಪಡಿಸಿರುವ ಸಚಿವ ಈಶ್ವರ್ ಖಂಡ್ರೆ ಅವರು, ಈ ಎಲ್ಲಾ ಹುಲಿಗಳ ಸಾವಿನ ಬಗ್ಗೆ ವರದಿ ಸಲ್ಲಿಸುವಂತೆ ಅರಣ್ಯಾಧಿಕಾರಿಗಳಿಗೆ ಮಂಗಳವಾರ ಸೂಚನೆ ನೀಡಿದ್ದಾರೆ.
ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಈ ಸಂಬಂಧ ಸೂಚನೆ ನೀಡಿರುವ ಸಚಿವರು, ಸಾವನ್ನಪ್ಪಿರುವ 82 ಹುಲಿಗಳ ಪೈಕಿ ಎಷ್ಟು ಹುಲಿಗಳು ಸಹಜವಾಗಿ ಸಾವನ್ನಪ್ಪಿವೆ? ಎಷ್ಟು ಹುಲಿಗಳು ಅಸಹಜವಾಗಿ ಮೃತಪಟ್ಟಿವೆ? ಅಸಹಜವಾಗಿ ಮೃತಪಟ್ಟ ಹುಲಿಗಳ ಸಾವಿಗೆ ಕಾರಣವೇನು? ಎಂಬ ಬಗ್ಗೆ ತನಿಖೆ ನಡೆದು ವರದಿ ಬಂದಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಮೃತಪಟ್ಟ ಯಾವುದಾದರೂ ಹುಲಿಗಳ ಅಂಗಾಂಗ ಅಂದರೆ ಉಗುರು, ಹಲ್ಲು ಇತ್ಯಾದಿ ತೆಗೆಯಲಾಗಿತ್ತೆ? ಹುಲಿಗಳ ಹತ್ಯೆ ಆಗಿದ್ದಲ್ಲಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಕ್ರಮ ಆಗಿದೆಯೇ? ಎಷ್ಟು ಹುಲಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ? ಎಂಬ ವಿವರವನ್ನೂ ಕೇಳಿದ್ದಾರೆ.
ಈವರೆಗೆ ಹುಲಿ ಹತ್ಯೆ ಪ್ರಕರಣಗಳಲ್ಲಿ ಎಷ್ಟು ಜನರಿಗೆ ಶಿಕ್ಷೆ ಆಗಿದೆ? ಎಷ್ಟು ಪ್ರಕರಣಗಳು ತನಿಖಾ ಹಂತದಲ್ಲಿದೆ. ಯಾವ ಕಾರಣಕ್ಕೆ ತನಿಖೆ ವಿಳಂಬವಾಗಿದೆ ಎಂಬ ಸಂಪೂರ್ಣ ವಿವರವನ್ನು 10 ದಿನಗಳ ಒಳಗಾಗಿ ಸಲ್ಲಿಸಲು ಸೂಚಿಸಿದ್ದಾರೆ.
ಸಚಿವರ ಸೂಚನೆ ಕುರಿತು ಪ್ರತಿಕ್ರಿಯೆ ನೀಡಿರುವ ಅರಣ್ಯಾಧಿಕಾರಿಗಳು, ಇದು ಸಚಿವರ ನಿಯಮಿತ ವಿಚಾರಣೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹುಲಿ ವಿಷಪ್ರಾಶನ ಪ್ರಕರಣವು ಸುಮಾರು ಮೂರು ವರ್ಷಗಳ ಹಿಂದೆ ನಾಗರಹೊಳೆ ಹುಲಿ ಮೀಸಲು ಪ್ರದೇಶದಲ್ಲಿ ವರದಿಯಾಗಿತ್ತು, ನಂತರ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ಅಭಯಾರಣ್ಯದಲ್ಲಿ ವರದಿಯಾಗಿತ್ತು. ಈ ಮಾಹಿತಿಗಳನ್ನು ಒಟ್ಟುಗೂಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು, ಜೊತೆಗೆ ಎಲ್ಲವನ್ನೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದೊಂದಿಗೆ (ಎನ್ಟಿಸಿಎ) ಹಂಚಿಕೊಳ್ಳಲಾಗುವುದು ಎಂದು ಹೇಳಿದರು.
ಎನ್ಟಿಸಿಎ ದತ್ತಾಂಶದ ಪ್ರಕಾರ, 2012-24ರ ಅವಧಿಯಲ್ಲಿ, ರಾಜ್ಯದಲ್ಲಿ 179 ಹುಲಿಗಳ ಸಾವುಗಳನ್ನು ವರದಿಯಾಗಿದ್ದು, ಈ ಪೈಕಿ 68 ಸಾವು 2021-25 ಜುಲೈನಲ್ಲಿ ವರದಿಯಾಗಿದೆ. 2012-24ರ ಅವಧಿಯಲ್ಲಿ, ನಾಗರಹೊಳೆ ಹುಲಿ ಮೀಸಲು ಪ್ರದೇಶದಲ್ಲಿ 68 ಹುಲಿಗಳ ಸಾವುಗಳ ವರದಿಯಾಗಿದೆ.
Advertisement