

ಬೆಂಗಳೂರು: ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ನಾಲ್ಕನೇ ಮಹಡಿಯಿಂದ ಕಬ್ಬಿಣದ ಸರಳುಗಳ ಮೇಲೆ ವ್ಯಕ್ತಿಯೊಬ್ಬ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಪವನ್ ಪ್ರತಾಪ್ (ಹಸರು ಬದಲಿಸಲಾಗಿದೆ) ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ. ವ್ಯಕ್ತಿ ಮಹಡಿ ಮೇಲಿಂದ ನೇರವಾಗಿ ಕಬ್ಬಿಣದ ಸರಳುಗಳ ಮೇಲೆ ಬಿದ್ದಿದ್ದು, ಎದೆ ಹಾಗೂ ಹೊಟ್ಟೆಗೆ ಹಾಗೂ ಬಲ ತೊಡೆಗೆ ಕಬ್ಬಿಣದ ಸರಳುಗಳು ಚುಚ್ಚಿತ್ತು.
ಕೂಡಲೇ ಸ್ಥಳದಲ್ಲಿದ್ದವರು ರಕ್ಷಣೆಗೆ ಧಾವಿಸಿ, ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದು, ವ್ಯಕ್ತಿ ಪ್ರಜ್ಞೆಹೀನ ಸ್ಥಿತಿಯಲ್ಲಿದ್ದು, ಗಂಭೀರ ಸ್ಥಿತಿಗೆ ಜಾರಿದ್ದರು.
ಒಂದು ಸರಳು ವ್ಯಕ್ತಿಯ ಹೃದಯಕ್ಕೆ ಅರ್ಧ ಸೆಂ.ಮೀ. ದೂರದಲ್ಲಿ ಚುಚ್ಚಿತ್ತು. ಅದನ್ನು ಬಹಳ ಎಚ್ಚರಿಕೆಯಿಂದ ಹೊರತೆಗೆದೆವು. ಬಲ ಮೂತ್ರಪಿಂಡಕ್ಕೂ ಹಾನಿಯಾಗಿತ್ತು. ಇದಲ್ಲದೆ, ಅನೇಕ ಆಂತರಿಕ ಗಾಯಗಳಿಗೆ ಚಿಕಿತ್ಸೆ ನೀಡಲಾಯಿತು ಎಂದು ಕಾರ್ಡಿಯೋಥೊರಾಸಿಕ್ ಸರ್ಜನ್ ಡಾ. ಭಾರತಿ ಭಟ್ ಅವರು ಹೇಳಿದ್ದಾರೆ.
ಶಸ್ತ್ರಚಿಕಿತ್ಸೆಯ ನಂತರ, ಪವನ್ ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಯಿತು. ನಿಕಟ ಮೇಲ್ವಿಚಾರಣೆಗಾಗಿ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. ಅವರ ಸ್ಥಿತಿ ಕ್ರಮೇಣ ಸುಧಾರಿಸುತ್ತಿದ್ದಂತೆ ಮರುದಿನ ಅವರನ್ನು ವೆಂಟಿಲೇಟರ್ನಿಂದ ತೆಗೆದುಹಾಕಲಾಯಿತು. 11 ದಿನಗಳ ಕಾಲ ಆಸ್ಪತ್ರೆಯ ಉನ್ನತ ತಂಡದ ಮೇಲ್ವಿಚಾರಣೆಯಲ್ಲಿ ಆತ ಚೇತರಿಸಿಕೊಂಡಿದ್ದು, ಜೂನ್ 22 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ತಿಳಿಸಿದ್ದಾರೆ.
Advertisement