
ಬೆಂಗಳೂರು: ಹೊಸಕೆರೆಹಳ್ಳಿ ಜಂಕ್ಷನ್ ಮೇಲ್ಸೇತುವೆ ಕಾಮಗಾರಯನ್ನು ಮೂರು ತಿಂಗಳುಗಳಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಶನಿವಾರ ಸೂಚನೆ ನೀಡಿದೆ.
ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಶನಿವಾರ ಪರಿಶೀಲನೆ ನಡೆಸಿದರು.
ಹೊರ ವರ್ತುಲ ರಸ್ತೆಯ ಪಿಇಎಸ್ ಕಾಲೇಜು ಬಳಿಯ ಹೊಸಕೆರೆಹಳ್ಳಿ ಜಂಕ್ಷನ್ನಲ್ಲಿ ಕೈಗೆತ್ತಿಕೊಂಡಿರುವ ಮೇಲ್ಸೇತುವೆ ಕಾಮಗಾರಿ ಶೇ.75ರಷ್ಟು ಪೂರ್ಣಗೊಂಡಿದ್ದು, ಇನ್ನು ಒಂದು ಭಾಗದಲ್ಲಿ ಡೌನ್ ರ್ಯಾಂಪ್ ಕಾಮಗಾರಿ ಪ್ರಗತಿಯಲಿದೆ. ಸರ್ವೀಸ್ ರಸ್ತೆಯ ಅಗಲೀಕರಣ ಮಾಡುವ ವಿಚಾರವಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ ಸಂಚಾರ ಪೊಲೀಸ್ ವಿಭಾಗದ ಜೊತೆ ಮಾತನಾಡಿ, ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಾಯಂಡಹಳ್ಳಿ ಜಂಕ್ಷನ್ ಬಳಿಯ ಸರ್ವೀಸ್ ರಸ್ತೆಯ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಅನುಪಯುಕ್ತ ವಸ್ತುಗಳಿರುವುದನ್ನು ಕಂಡು, ಅದನ್ನು ಕೂಡಲೇ ತೆರವು ಮಾಡಲು ಸೂಚಿಸಿದರು. ಮೇಲ್ಸೇತುವೆಯ ಕೆಳಭಾಗದಲ್ಲಿ ಪಾರ್ಕಿಂಗ್ ಮಾಡಲು ಅನುಮತಿಸಬಾರದು. ಈ ಪಾರ್ಕಿಂಗ್ ನಿಂದ ವಾಹನಗಳ ಸಂಚಾರದ ಮೇಲೆ ಪರಿಣಾಮ ಬೀರುತ್ತದೆ. ಕೂಡಲೇ ಅನಧಿಕೃತವಾಗಿ ಪಾರ್ಕಿಂಗ್ ಅನ್ನು ತೆರವುಗೊಳಿಸಿ ಎಂದು ಸೂಚಿಸಿದರು.
ಇದೇ ವೇಳೆ ವೃಷಭಾವತಿ ವ್ಯಾಲಿ ಮೇಲ್ಭಾಗದಲ್ಲಿ ಹೆಚ್ಚುವರಿಯಾಗಿ ಬ್ರಿಡ್ಜ್ ವೆಂಟ್ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಕಾಮಗಾರಿಯನ್ನು ಆರಂಭಿಸಲು ಸೂಚಿಸಿದರು.
ಬಳಿಕ ಆಯುಕ್ತರು ವಿಶ್ವಬ್ಯಾಂಕ್ನ ನಿಧಿಯಿಂದ ವೃಷಭಾವತಿ ನದಿಗೆ ಅಡ್ಡಲಾಗಿ ಹೆಚ್ಚುವರಿ ವೆಂಟೆಡ್ ಸೇತುವೆ ನಿರ್ಮಿಸುವ ಯೋಜನೆಯನ್ನು ಪರಿಶೀಲಿಸಿದರು.
ಹಣ ಬಿಡುಗಡೆಯಾದ ನಂತರ ಯೋಜನೆಗೆ ಟೆಂಡರ್ಗಳನ್ನು ಆಹ್ವಾನಿಸಿ ಮತ್ತು ಕೆಲಸವನ್ನು ವಿಳಂಬವಿಲ್ಲದೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ರಾಜಕಾಲುವೆ ಹಾಗೂ ಸೈಡ್ ಡ್ರೆನ್ಗಳಲ್ಲಿ ಹೂಳು ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹೋಗುವ ವ್ಯವಸ್ಥೆ ಮಾಡಲು ನಿರ್ದೇಶನ ನೀಡಿದರು.
ನಾಯಂಡಹಳ್ಳಿ ಜಂಕ್ಷನ್ ಬಳಿ ರಾಜಕಾಲುವೆ ಪಕ್ಕದಲ್ಲಿರುವ ಖಾಲಿ ಜಾಗವು ಪಾಲಿಕೆಯದ್ದಾಗಿದ್ದರೆ ಅದನ್ನು ಸ್ವಚ್ಛಗೊಳಿಸಿ ಸುಂದರೀರಣ ಮಾಡಲು ಸೂಚಿಸಿದರು.
ವೃಷಭಾವತಿ ವ್ಯಾಲಿಯಲ್ಲಿ ದೊಡ್ಡದಾದ ಸೀವೇಜ್ ಪೈಪ್ ಲೈನ್ ಆದು ಹೋಗುತ್ತಿದ್ದು, ಪೈಪ್ ಲೈನ್ ನಿಂದ ಸೋರಿಕೆ ಆಗುತ್ತಿರುವುದನ್ನು ಗಮನಿಸಿ ಕೂಡಲೆ ಜಲಮಂಡಳಿ ಅಧಿಕಾರಿಗಳ ಜೊತೆ ಮಾತನಾಡಿ ಸೀವೇಜ್ ರಾಜಕಾಲುವೆಗೆ ಹೋಗದಂತೆ ಸೋರಿಕೆಯನ್ನು ತಡೆಯಲು ಅಧಿಕಾರಿಗಳಿಗೆ ಸೂಚಿಸಿದರು.
ಮೈಸೂರು ರಸ್ತೆ ಗೋಪಾಲನ್ ಆರ್ಚ್ ಬಳಿ ಮೇಲ್ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಸದ್ಯ 33 ಆಸ್ತಿಗಳ ಭೂಸ್ವಾಧೀನ ಪ್ರಕ್ರಿಯಿಂದಾಗಿ ಕಾಮಗಾರಿ ಸ್ಥಗಿತವಾಗಿರುತ್ತದೆ. ಈ ಸಂಬಂಧ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಇತ್ಯರ್ಥಮಾಡಿಕೊಂಡು ಕಾಮಗಾರಿಯನ್ನು ಪುನರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೈಸೂರು ರಸ್ತೆ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ಬಳಿ ಇರುವ ಬಿಹೆಚ್ಇಎಲ್ ಜಂಕ್ಷನ್ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡು, ಸ್ಥಳ ಪರಿಶೀಲನೆ ನಡೆಸಿ ಶೀಘ್ರಗತಿಯಲ್ಲಿ ಬಾಕಿಯಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದರು.
Advertisement