'ತಮಿಳಿನಿಂದ ಕನ್ನಡ ಹುಟ್ಟಿತು' ಹೇಳಿಕೆ ವಿವಾದ: ನಟ ಕಮಲ್ ಹಾಸನ್ ಕ್ಷಮೆಗೆ ಮುಖ್ಯ ಸಚೇತಕ ಎನ್. ರವಿಕುಮಾರ್ ಆಗ್ರಹ

ಕರ್ನಾಟಕ ಹೈಕೋರ್ಟ್ ನಿರ್ದೇಶನದ ಹೊರತಾಗಿಯೂ ಕ್ಷಮೆಯಾಚಿಸಲು ನಿರಾಕರಿಸುವ ಮೂಲಕ ಅವರು ದುರಹಂಕಾರ, ಅವಿಧೇಯತೆ ತೋರಿಸಿದ್ದಾರೆಂದು ಕಿಡಿಕಾರಿದ್ದಾರೆ.
Kamal Haasan
ನಟ ಕಮಲ್ ಹಾಸನ್
Updated on

ಬೆಂಗಳೂರು: ತಮಿಳಿನಿಂದ ಕನ್ನಡ ಹುಟ್ಟಿತು ಎಂದು ಹೇಳಿಕೆ ನೀಡಿದ್ದ ಕಮಲ್ ಹಾಸನ್ ಅವರು ವಿರುದ್ಧ ಆಕ್ರೋಶಗಳು ಹೆಚ್ಚಾಗುತ್ತಿದ್ದು, ಕ್ಷಮೆಯಾಚನೆಗೆ ಒತ್ತಾಯಗಳೂ ಹೆಚ್ಚಾಗುತ್ತಿವೆ.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಕಮಲ್ ಹಾಸನ್ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ಹೈಕೋರ್ಟ್ ನಿರ್ದೇಶನದ ಹೊರತಾಗಿಯೂ ಕ್ಷಮೆಯಾಚಿಸಲು ನಿರಾಕರಿಸುವ ಮೂಲಕ ಅವರು ದುರಹಂಕಾರ, ಅವಿಧೇಯತೆ ತೋರಿಸಿದ್ದಾರೆಂದು ಕಿಡಿಕಾರಿದ್ದಾರೆ.

ಹೈಕೋರ್ಟ್ ನಿರ್ದೇಶನವನ್ನು ಧಿಕ್ಕರಿಸುವುದು "ಸಂಪೂರ್ಣವಾಗಿ ಖಂಡನೀಯ". ಕಮಲ್ ಹಾಸನ್ ಒಬ್ಬ ಪ್ರತಿಭಾನ್ವಿತ ನಟನಾಗಿರಬಹುದು, ಆದರೆ, ಅವರು ಕೆಟ್ಟ ರಾಜಕಾರಣಿ ಎಂಬುದನ್ನು ಪದೇ ಪದೇ ಸಾಬೀತುಪಡಿಸಿದ್ದಾರೆ, ವಿವಾದದ ಮೇಲೆ ವಿವಾದಕ್ಕೆ ಆಹ್ವಾನ ನೀಡಿದ್ದಾರೆ. ಕನ್ನಡದ ಬಗ್ಗೆ ಮಾತನಾಡಲು ಕಮಲ್ ಹಾನ್ ಭಾಷಾ ತಜ್ಞ ಅಥವಾ ಇತಿಹಾಸಕಾರರಲ್ಲ, ಭಾಷೆಗಳ ಮೂಲ ಮತ್ತು ಇತಿಹಾಸದ ಬಗ್ಗೆ ಮತೀಯವಾದ ಹೇಳಿಕೆ ನೀಡಲು ಅವರು ಭಾಷಾ ತಜ್ಞರಲ್ಲ ಎಂದು ಹೇಳಿದ್ದಾರೆ.

Kamal Haasan
RCB ಗೆಲುವಿನ ಸಂಭ್ರಮಾಚರಣೆ ವೇಳೆ ಬೆಂಗಳೂರಿನಲ್ಲಿ ಕಾಲ್ತುಳಿತ: ತೀವ್ರ ದುಃಖವಾಗಿದೆ ಎಂದ ಕಮಲ್ ಹಾಸನ್; Sympathy ಟ್ರಿಕ್ ಎಂದ ಜನ

ಕಮಲ್ ಹಾಸನ್ ಅವರು ಇಂತಹ ವಿವಾದ ಸೃಷ್ಟಿಸುವ ಬದಲು ತಮಗೆ ತಿಳಿದಿರುವ ನಟನೆ ರಂಗದತ್ತ ಹೆಚ್ಚಿನ ಒಲವು ತೋರಿಸಲಿ. ಅವರಿಗೆ ಪರಿಣತಿ ಇಲ್ಲದ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಲಿ ಎಂದು ವ್ಯಂಗ್ಯವಾಡಿದರು.

ನಟ ಕನ್ನಡವನ್ನು ಅವಮಾನಿಸಿದ್ದಾರೆ. ಲಕ್ಷಾಂತರ ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಅವರು ಹೈಕೋರ್ಟ್‌ ಆದೇಶವನ್ನು ಪಾಲಿಸಬೇಕು. ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಚಿವ ರಹೀಮ್ ಖಾನ್ ಅವರು ಮಾತನಾಡಿ, ಕಮಲ್ ಹಾಸನ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಇದಕ್ಕೂ ಮೊದಲು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡಬಾರದು. ಕ್ಷಮೆಯಾಚಿಸದಿರುವುದು ಅವರ ದುರಹಂಕಾರವನ್ನು ತಿಳಿಸುತ್ತದೆ. ತಮ್ಮ ಅಪಕ್ವ ಮನೋಭಾವವನ್ನು ತೊರೆದು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com