
ಬೆಂಗಳೂರು: ಗೃಹ ಪ್ರವೇಶಕ್ಕಾಗಿ ಕುಟುಂಬವೊಂದು ಅಧಿಕಾರಿಗಳಿಂದ ಅನುಮತಿ ಪಡೆಯದೆ ಮಲ್ಲೇಶ್ವರಂ 4ನೇ ಮುಖ್ಯರಸ್ತೆ, 13ನೇ ಕ್ರಾಸ್ ರಸ್ತೆಯನ್ನು ತಡೆಹಿಡಿದಿದ್ದು, ಇದರ ಪರಿಣಾಮ ಸುತ್ತಮುತ್ತಲಿನ ರಸ್ತೆಗಳಲ್ಲಿ ಶನಿವಾರ ಸಂಚಾರ ದಟ್ಟಣೆ ಎದುರಾಗಿತ್ತು.
ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಎದುರಿನ ರಸ್ತೆಯಲ್ಲಿ ಅತಿಥಿಗಳಿಗೆ ಊಟ ಬಡಿಸಲು ಪೆಂಡಾಲ್ ಹಾಕಲಾಗಿತ್ತು. ಕುಟುಂಬವು ಸಾರ್ವಜನಿಕ ರಸ್ತೆಯ 50 ಮೀಟರ್ಗಿಂತಲೂ ಹೆಚ್ಚು ಸ್ಥಳವನ್ನು ಬಳಸಿಕೊಂಡಿತ್ತು.
ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ನಿಂತಿದ್ದರಿಂದ ಆ ಪ್ರದೇಶದಲ್ಲಿ ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ಅನಧಿಕೃತವಾಗಿ ರಸ್ತೆ ಮುಚ್ಚಿದ್ದಕ್ಕೆ ಇತರ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಸಮಾರಂಭದ ಆಯೋಜಕರು ಅನುಮತಿ ಪಡೆದಿದ್ದಾರೆಯೇ ಎಂದು ಪ್ರಶ್ನಿಸಿದರು. ಈ ವೇಳೆ ಸ್ಥಳದಲ್ಲಿ ಕೆಲ ಕಾಲ ಅಹಿತಕರ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳೀಯ ನಿವಾಸಿ ರಾಜೀವಿ ಎಂಬುವವರು ಮಾತನಾಡಿ, ಕಾರ್ಯಕ್ರಮಕ್ಕಾಗಿ ನೀವು ಸಾರ್ವಜನಿಕ ರಸ್ತೆಯನ್ನೇಕೆ ಬಳಸುತ್ತಿದ್ದೀರಿ ಎಂದು ನಾವು ಕುಟುಂಬವನ್ನು ಪ್ರಶ್ನಿಸಿದೆವು. ಅವರು ಆರಂಭದಲ್ಲಿ ಪೊಲೀಸರಿಂದ ಅನುಮತಿ ಪಡೆದಿದ್ದೇವೆ ಎಂದು ಹೇಳಿದರು. ನಾವು ಪರಿಶೀಲಿಸಿದಾಗ ಪೊಲೀಸರು ಅಂತಹ ಯಾವುದೇ ಅನುಮತಿ ನೀಡಲ್ಲ ಎಂದು ಹೇಳಿದರು. ನಂತರ, ಸ್ಥಳೀಯ ಶಾಸಕರಾದ ಅವರು ಅನುಮತಿ ನೀಡಿದ್ದಾರೆಂದು ಹೇಳಿದರು. ಆದರೆ, ಶಾಸಕರು ಅನುಮತಿ ನೀಡಿಲ್ಲ ಎಂದು ಹೇಳಿದ್ದರು. ನಂತರ 112 ಗೆ ಕರೆ ಮಾಡಿದಾಗ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಪೆಂಡಾಲ್'ನ್ನು ತೆಗೆದುಹಾಕಿದರು ಎಂದು ಹೇಳಿದ್ದಾರೆ.
ಅವರು ನಿಯಮಗಳನ್ನು ಉಲ್ಲಂಘಿಸಿದ್ದಲ್ಲದೆ, ಪ್ರಶ್ನಿಸಿದ ನಿವಾಸಿಗಳಿಗೂ ಬೆದರಿಕೆ ಹಾಕಿದ್ದಾರನೆಂದು ಎಂದು ಮತ್ತೊಬ್ಬ ನಿವಾಸಿ ತಿಳಿಸಿದ್ದಾರೆ.
Advertisement