
ಬೆಂಗಳೂರು: ರಾಜಕೀಯ ಇತಿಹಾಸದಲ್ಲೇ ಭಾರತಕ್ಕಿದು ಪರಿವರ್ತನೆ ಯುಗವಾಗಿದ್ದು, ಶೀಘ್ರದಲ್ಲೇ ಭಾರತ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಅವರು ಮಂಗಳವಾರ ಹೇಳಿದರು.
ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಳೆದ 11 ವರ್ಷಗಳ ಪ್ರಧಾನಿ ಮೋದಿ ಆಡಳಿತದಲ್ಲಿ ಬಡತನವನ್ನು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿಸಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣ ಬಡತನ ನಿರ್ಮೂಲನೆಗೆ ಕೇಂದ್ರ ಸರ್ಕಾರ ಪಣ ತೊಟ್ಟಿದೆ ಎಂದು ಹೇಳಿದರು.
ವಿಕಾಸವೇ ನಮ್ಮ ಮಂತ್ರ, ಶಾಂತಿ- ಸುವ್ಯವಸ್ಥೆಯೇ ನಮ್ಮ ಧೈಯ. ಈ ನಿಟ್ಟಿ ನಲ್ಲಿಯಶಸ್ವಿಯಾಗಿ ಮುನ್ನಡೆಯುತ್ತಿರುವ ಭಾರತ ಸದ್ಯ ವಿಶ್ವದ 4ನೇ ಅತೀದೊಡ್ಡ ಆರ್ಥಿಕ ದೇಶವಾಗಿದ್ದು, ಇಷ್ಟರಲ್ಲೇ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ಅವರ ಸಮರ್ಥ ಆಡಳಿತದಲ್ಲಿ ಭಾರತ ಬಡತನ ರೇಖೆ ಅಳಿಸಿ ಹಾಕುವತ್ತ ಮಹತ್ವದ ಹೆಜ್ಜೆಯಿರಿಸಿದೆ. 2011-12ರಲ್ಲಿ ಶೇ.27.1 ರಷ್ಟಿದ್ದ ಬಡತನ ಪ್ರಮಾಣ ಇದೀಗ ಅತ್ಯಂತ ಕನಿಷ್ಠಮಟ್ಟಕ್ಕೆ ಅಂದರೆ ಶೇ.5.3ಕ್ಕೆ ಇಳಿದಿದೆ. 26 ಕೋಟಿಗೂ ಹೆಚ್ಚು ಜನ ಬಡತನದಿಂದ ಹೊರಬಂದಿ ದ್ದಾರೆ. ಆರ್ಥಿಕವಾಗಿಯೂ ಅತಿ ವೇಗ ವಾಗಿ ಬೆಳೆಯುತ್ತಿದೆ. ಇದನ್ನು ಖುದ್ದು ವಿಶ್ವ ಬ್ಯಾಂಕ್ ವರದಿಯೇ ಹೇಳಿದೆ. ಮೋದಿ ಸಾಧನೆ ಶೂನ್ಯ ಎನ್ನುವವರಿಗೆ ವಿಶ್ವಬ್ಯಾಂಕ್ ಉತ್ತರ ಕೊಟ್ಟಿದೆ ಎಂದು ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು.
ಪ್ರಧಾನಿ ಮೋದಿ ಅವರ ಸಮರ್ಥ ಆಡಳಿತ, ಅಭಿವೃದ್ಧಿ ಸಾಧನೆಗೆ ವಿಶ್ವಬ್ಯಾಂಕ್ ಮೆಚ್ಚುಗೆ ವ್ಯಕ್ತಪಡಿಸಿದ್ದರಿಂದ ಬಹುಶಃ ವಿರೋಧ ಪಕ್ಷದವರು ಆರೋಪ ಮಾಡಲಾರರು ಎಂದು ಭಾವಿಸಿದ್ದೇನೆ. ಇನ್ನಾದರೂ ಪ್ರಧಾನಿ ಬಗ್ಗೆ ವೃಥಾ ಆರೋಪ ನಿಲ್ಲಿಸಲಿ. ಯಾರ ಅವಧಿಯಲ್ಲಿ ಏನೇನು ಸಾಧನೆಯಾಗಿದೆ ಎಂಬುದನ್ನು ಅರಿತುಕೊಳ್ಳಲಿ. ಮೋದಿ ಅವರನ್ನು ಮತ್ತು ಮೋದಿ ಸರ್ಕಾರವನ್ನು ಜನರೇ ಹೀರೋ ಮಾಡದ್ದಾರೆಂದು ಪ್ರತಿಪಾದಿಸಿದರು.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯದಲ್ಲೂ ಮುಂದಿದೆ. ತಾವೇ ಸಾಮಾಜಿಕ ಹರಿಕಾರರು ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದವರು ಸಂಪುಟದಲ್ಲಿ ಶೇ.20ರಷ್ಟು ಸ್ಥಾನಮಾನ ಸಹ ಹಿಂದುಳಿದವರಿಗೆ ಕೊಟ್ಟ ಉದಾಹರಣೆಯಿಲ್ಲ. ಆದರೆ, ಮೋದಿ ಸರ್ಕಾರ ಮಂತ್ರಿ ಮಂಡಳದಲ್ಲಿ ಶೇ.60ರಷ್ಟು ಎಸ್ ಸಿ-ಎಸ್ಟಿಯವರಿಗೆ ಅವಕಾಶ ನೀಡಿ ಸಾಮಾಜಿಕ ನ್ಯಾಯವನ್ನು ಮೆರೆದಿದೆ ಎಂದು ಜೋಶಿ ಹೇಳಿದರು.
ಭಾರತ ಹತ್ತು ವರ್ಷದ ಹಿಂದೆ ಆಮದು ಮೇಲೆ ಅವಲಂಬಿತವಾಗಿತ್ತು. ಆದರೆ ಇಂದು ರಫ್ತು ವಲಯದಲ್ಲಿ ವಿಶ್ವಪ್ರಸಿದ್ಧವಾ ಗಿದೆ. ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಅಳವಡಿಸಿಕೊಂಡ ಪ್ರತಿ ಫಲವಾಗಿ 5000 ವಸ್ತು-ಉತ್ಪನ್ನಗಳನ್ನು ರಿಸರ್ವ್ ಮಾಡಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 25 ಸಾವಿರ ಕೋಟಿ ರು. ಮೌಲ್ಯದ ರಕ್ಷಣಾ ಪರಿಕರಗಳನ್ನು ರಫ್ತು ಮಾಡುತ್ತಿದೆ ಎಂದು ವಿವರಿಸಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅವರು, "ಆಪರೇಷನ್ ಸಿಂಧೂರ್" ಬಗ್ಗೆ ಕಾಂಗ್ರೆಸ್ ನಾಯಕರು ಪಾಕಿಸ್ತಾನದಂತೆ ಮಾತನಾಡುತ್ತಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳನ್ನು ಪ್ರಶ್ನಿಸುತ್ತಿದ್ದಾರೆ. ಆದರೆ, ಕದನ ವಿರಾಮಕ್ಕೆ ಸಂಬಂಧಿಸಿದಂತೆ ಭಾರತೀಯ ವಿದೇಶಾಂಗ ಸಚಿವಾಲಯ ಮತ್ತು ಮಿಲಿಟರಿ ಅಧಿಕಾರಿಗಳ ಹೇಳಿಕೆಗಳನ್ನು ಅವರು ನಂಬಬೇಕು ಎಂದು ಹೇಳಿದರು.
ಆಪರೇಷನ್ ಸಿಂಧೂರ್ನಲ್ಲಿ ಕದನ ವಿರಾಮವು ಅಮೆರಿಕದ ಒತ್ತಡದ ಪರಿಣಾಮವಾಗಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಗಳ ಕುರಿತು ಮಾತನಾಡಿ, ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನಾಪಡೆ ನಾಶಪಡಿಸಿರುವುದಕ್ಕೆ ನಮ್ಮ ಬಳಿ ಸಾಕ್ಷ್ಯಗಳಿವೆ. ತನ್ನ ವಾಯುನೆಲೆಗಳಿಗೆ ಆಗಿರುವ ಹಾನಿಯನ್ನು ಪಾಕಿಸ್ತಾನವೇ ಸ್ವತಃ ಒಪ್ಪಿಕೊಂಡಿದೆ.
ಪಾಕಿಸ್ತಾನದ ಡಿಜಿಎಂಒ ಅವರು ಭಾರತದ ದಾಳಿ ಬಳಿಕ ದೂರವಾಣಿ ಕರೆ ಮೂಲಕ ಮಾತನಾಡಿ, ಕದನ ವಿರಾಮಕ್ಕೆ ವಿನಂತಿಸಿದೆ. ಪಾಕಿಸ್ತಾನದ ಪ್ರಧಾನಿ ಕೂಡ ಅವರಿಗಾಗಿರುವ ಭಾರೀ ಹಾನಿಯನ್ನು ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ನಮ್ಮ ಸೇನೆಯನ್ನೇಕೆ ಪ್ರಶ್ನಿಸುತ್ತಿದ್ದಾರೆ? ಇದು ನನಗೆ ಅರ್ಥವಾಗುತ್ತಿಲ್ಲ. ನಿಮ್ಮ ಆಸಕ್ತಿಯಾದರೂ ಏನು? ಎಂದು ಪ್ರಶ್ನಿಸಿದರು.
Advertisement