ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸರ್ಕಾರದೊಂದಿಗೆ ಸಾರ್ವಜನಿಕರೂ ಕೈ ಜೋಡಿಸಬೇಕು: ಸಂತೋಷ್‌ ಲಾಡ್

ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧವಾಗಿದ್ದು, ಯಾರೇ ಬಾಲಕಾರ್ಮಿಕ ಕಾಯಿದೆಯನ್ನು ಉಲ್ಲಂಘಿಸಿದರೆ ಆರು ತಿಂಗಳಿಂದ ಎರಡು ವರ್ಷದವರೆಗೆ ಶಿಕ್ಷೆ, ದಂಡ ವಿಧಿಸಲಾಗುತ್ತದೆ. ಹಾಗೆಯೇ ಪೋಷಕರಿಗೂ ಶಿಕ್ಷೆ ಆಗಲಿದೆ.
Santosh Lad at an awareness rally against child labour
ಬಾಲಕಾರ್ಮಿಕ ಪದ್ಧತಿ ವಿರೋಧಿ ಕಾರ್ಯಕ್ರಮದಲ್ಲಿ ಸಂತೋಷ್ ಲಾಡ್
Updated on

ಬೆಂಗಳೂರು: ಬಾಲಕಾರ್ಮಿಕ ಪದ್ದತಿಯನ್ನು ತಡೆಯಲು ಸರಕಾರವು ಹಲವು ಕ್ರಮ ಕೈಗೊಂಡಿದ್ದು, ಸರ್ಕಾರದೊಂದಿಗೆ ಸಾರ್ವಜನಿಕರು ಕೈ ಜೋಡಿಸಿದರೆ ಮಾತ್ರ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಕಾರ್ಮಿಕ ಇಲಾಖೆ ವತಿಯಿಂದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಆಯೋಜಿಸಿದ್ದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಕುಟುಂಬದಿಂದಲೇ ಅರಿವು ಮೂಡಿಸಬೇಕು. ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಬೇಕು ಎಂದರು.

ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧವಾಗಿದ್ದು, ಯಾರೇ ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯಿದೆಯನ್ನು ಉಲ್ಲಂಘಿಸಿದರೆ ಆರು ತಿಂಗಳಿಂದ ಎರಡು ವರ್ಷದವರೆಗೆ ಶಿಕ್ಷೆ, ದಂಡ ವಿಧಿಸಲಾಗುತ್ತದೆ. ಹಾಗೆಯೇ ಪೋಷಕರಿಗೂ ಶಿಕ್ಷೆ ಆಗಲಿದೆ. ಭಯ ಮೂಡಿಸುವುದು ಇಲಾಖೆಯ ಉದ್ದೇಶವಲ್ಲ. ಬಾಲಕಾರ್ಮಿಕ ಪದ್ಧತಿ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು.

ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಜಿಲ್ಲಾಧಿಕಾರಿ, ಎಸ್‍ಪಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ಸಭೆ ಮಾಡಿ ಮಕ್ಕಳು ಕಾರ್ಮಿಕರಾಗುವುದನ್ನು ತಡೆಯಲು ಕ್ರಮ ಕೈಗೊಂಡಿದ್ದೇವೆ. ಡಿಸಿ, ಸಿಇಒ, ಎಸ್ಪಿಗಳು ಮುತುವರ್ಜಿ ವಹಿಸಿದರೆ ಬಾಲಕಾರ್ಮಿಕ ನಿರ್ಮೂಲನೆ ಸುಲಭವಾಗಲಿದೆ. ವರ್ಷಕ್ಕೆ ಒಂದು ಬಾರಿ ದಿನಾಚರಣೆ ಮಾಡಿದರೆ ಸಾಲದು. ಎರಡು ತಿಂಗಳಿಗೆ ಒಂದು ಬಾರಿ ಈ ಸಂಬಂಧ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಅವರು ಹೇಳಿದರು.

Santosh Lad at an awareness rally against child labour
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಶತಮಾನಗಳೇ ಬೇಕು: ತಜ್ಞರ ಅಭಿಪ್ರಾಯ

ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿನ ಡಾಬಾ, ಹೋಟೆಲ್, ಸಣ್ಣ ಸಣ್ಣ ಮೆಕ್ಯಾನಿಕ್ ಶಾಪ್‍ಗಳಲ್ಲಿ ಮಕ್ಕಳು ಕೆಲಸ ಮಾಡುತ್ತಾರೆ. ಅವರು ಕೆಲಸ ಬಿಟ್ಟು ಶಾಲೆಗಳಿಗೆ ಹೋಗುವಂತಾಗಬೇಕು. ಬಾಲಕಾರ್ಮಿಕರನ್ನು ದುಡಿಮೆಗೆ ನೇಮಿಸಿಕೊಂಡಿದ್ದು, ಗಮನಕ್ಕೆ ಬಂದರೆ ಕೂಡಲೇ ಸಹಾಯವಾಣಿ 1098ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಸಚಿವರು ಹೇಳಿದರು.

ನಟಿ ಅದಿತಿ ಪ್ರಭುದೇವ ಮಾತನಾಡಿ, ಬಾಲಕಾರ್ಮಿಕ ಪದ್ಧತಿಯನ್ನು ತಡೆಯುವುದು ಕೇವಲ ಸರಕಾರದ ಜವಾಬ್ದಾರಿಯಲ್ಲ, ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಬಡತನಕ್ಕೂ ಬಾಲಕಾರ್ಮಿಕ ಪದ್ಧತಿಗೂ ನಂಟಿದೆ. ಆದರೆ ಅದನ್ನು ಹೋಗಲಾಡಿಸಬಹುದು ಎಂದರು.

ಮಕ್ಕಳನ್ನು ಓದಿಸಲಾಗದ ಪರಿಸ್ಥಿತಿಯಲ್ಲಿ ಎಷ್ಟೋ ಪೋಷಕರು ಇದ್ದಾರೆ. ಅಂತಹವರಿಗೊಂದು ನಾವು ಸಣ್ಣ ಸಹಾಯ ಮಾಡಿದರೆ ಎಷ್ಟೋ ಮಕ್ಕಳು ಬಾಲಕಾರ್ಮಿಕರಾಗುವುದು ತಪ್ಪಲಿದೆ. ಒಳ್ಳೆಯ ಶಿಕ್ಷಣ ಸಿಕ್ಕರೆ ಮಕ್ಕಳು ಉತ್ತಮ ಪ್ರಜೆ ಆಗುತ್ತಾರೆ. ನಮ್ಮ ಸುತ್ತಮುತ್ತ ಬಾಲಕಾರ್ಮಿಕರು ಕಂಡು ಬಂದರೆ ನಮ್ಮ ಜವಾಬ್ದಾರಿ ನಿರ್ವಹಿಸೋಣ ಎಂದು ಅವರು ಕರೆ ನೀಡಿದರು.

ಬಾಲಕಾರ್ಮಿಕ ಪದ್ಧತಿಯ ಮುಂದುವರಿದ ಪ್ರಕರಣಗಳನ್ನು ನಿಭಾಯಿಸಲು ಜೂನ್ 10 ರಿಂದ ದಕ್ಷಿಣ ಭಾರತದಾದ್ಯಂತ ಪ್ರಾರಂಭವಾದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಗುರುತಿಸುವ ಮೂರು ದಿನಗಳ ಅಭಿಯಾನವನ್ನು ಮಕ್ಕಳ ಹಕ್ಕುಗಳು ಮತ್ತು ನೀವು (CRY) ನಡೆಸಿತು.

Santosh Lad at an awareness rally against child labour
ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕ್ರಮ: ತುಮಕೂರಿನಲ್ಲಿ ಅಭಿಯಾನ ಆರಂಭಕ್ಕೆ ಮಕ್ಕಳ ಹಕ್ಕುಗಳ ಆಯೋಗ ಮುಂದು

ಮಕ್ಕಳಿಗೆ ಕೆಲಸ ನೀಡುವ ಮೂಲಕ ಅವರಿಗೆ ಸಹಾಯ ಮಾಡಬೇಡಿ" ಎಂಬ ಶೀರ್ಷಿಕೆಯ ಈ ಅಭಿಯಾನವು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ 16 ಬ್ಲಾಕ್‌ಗಳು ಮತ್ತು 350 ಹಳ್ಳಿಗಳಲ್ಲಿ ನಡೆಯಿತು.

ದಕ್ಷಿಣ ಪ್ರದೇಶದಾದ್ಯಂತ 20 ಜಿಲ್ಲೆಗಳಲ್ಲಿ, CRY ನ ಪಾಲುದಾರ ಸಂಸ್ಥೆಗಳು 36,887 ಮನೆಗಳನ್ನು ಸಮೀಕ್ಷೆ ಮಾಡಿ 6,234 ಮಕ್ಕಳು ಕಾರ್ಮಿಕ ಚಟುವಟಿಕೆಯಲ್ಲಿ ತೊಡಗಿರುವುದು ಕಂಡುಬಂದಿದೆ.

ಈ ಅಭಿಯಾನವು ಶಾಲಾ ಮಟ್ಟದ ಚಟುವಟಿಕೆಗಳು, ಸಮುದಾಯ ಸಭೆಗಳು ಮತ್ತು ಸ್ಥಳೀಯ ಅಧಿಕಾರಿಗಳನ್ನು ಒಳಗೊಂಡ ಪಾಲುದಾರರ ಒಗ್ಗೂಡಿಸುವಿಕೆಯ ಮೇಲೆ ಕೇಂದ್ರೀಕರಿಸಿದೆ.

ಜಾಗೃತಿಯ ಜೊತೆಗೆ, ಕಾರ್ಮಿಕರಲ್ಲಿ ಕೆಲಸ ಮಾಡುವ ಮಕ್ಕಳನ್ನು ಗುರುತಿಸಲು ಮತ್ತು ಪುನರ್ವಸತಿ ಮಾಡಲು ರಕ್ಷಣಾ ಅಭಿಯಾನಗಳು ಮತ್ತು ಅಂತರ-ಇಲಾಖೆಯ ಸಮನ್ವಯ ಸಭೆಗಳನ್ನು ನಡೆಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com