
ಬೆಂಗಳೂರು: ರಾಜ್ಯದಿಂದ ಆಯ್ಕೆಯಾಗಿರುವ ನಾಲ್ವರು ಸಂಸದರ ಹಾಗೂ 32 ಶಾಸಕರ ಸಾಧನೆ ಕುರಿತು ಬಗ್ಗೆ ‘ಸಿವಿಕ್’ ಸಂಸ್ಥೆಯು ನಾಗರಿಕ ವರದಿಯನ್ನು ಶನಿವಾರ ಬಿಡುಗಡೆ ಮಾಡಿದ್ದು, ವರದಿಯಲ್ಲಿ ಶಾಸಕರ ಆದಾಯ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿರುವುದಾಗಿ ತಿಳಿಸಿದೆ.
ಆದಾಯ ಹೆಚ್ಚಳದಲ್ಲಿ ಕೆ.ಗೋಪಾಲಯ್ಯ ಅವರು (ಶೇ 1,3399) ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಮುನಿರತ್ನ (ಶೇ 959) ಇರುವುದು ಕಂಡು ಬಂದಿದೆ. ಇನ್ನುಳಿದಂತೆ ಎನ್.ಎ. ಹ್ಯಾರಿಸ್ (ಶೇ 318) ಮತ್ತು ಆರ್.ಅಶೋಕ್ (ಶೇ 104) ನಂತರದ ಸ್ಥಾನ ಪಡೆದಿದ್ದಾರೆ.
ನಮ್ಮ ನೇತಾ ನಮ್ಮ ರಿವ್ಯೂ’ ಭಾಗವಾಗಿ ಶನಿವಾರ ಈ ವರದಿ ಬಿಡುಗಡೆಯಾಗಿದ್ದು, ವರದಿಯಲ್ಲಿ ಈ ಅಂಶ ಬಹಿರಂಗಗೊಂಡಿದೆ.
ಜೂನ್ 24 ರಂದು ಬೆಂಗಳೂರಿನ ನಾಲ್ವರು ಸಂಸದರು 18ನೇ ಲೋಕಸಭೆಯ ಸದಸ್ಯರಾಗಿ 1 ವರ್ಷವನ್ನು ಪೂರ್ಣಗೊಳಿಸಿದರು. ಇನ್ನು 32 ಮಂದಿ ಶಾಸಕರು ಮೇ.20ರಂದು ಎಕು ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸಂಸದರು ಹಾಗೂ ಶಾಸಕರ ವರ್ಷದ ಸಾಧನೆ ಕುರಿತು ವರದಿಯನ್ನು ಬಿಡುಗಡೆ ಮಾಡಲಾಗಿದೆ.
ಬೆಂಗಳೂರಿನ ನಾಲ್ವರು ಸಂಸತ್ ಸದಸ್ಯರು (ಸಂಸದರು) ಮತ್ತು ಬೆಂಗಳೂರನ್ನು ಪ್ರತಿನಿಧಿಸುವ 28 ಶಾಸಕರು ಸೇರಿದಂತೆ 32 ಶಾಸಕರ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ವರದಿ ಇದಾಗಿದೆ.
ನಾಗರಿಕ ಸ್ವಯಂಸೇವಕರು ಮತ್ತು ವಿದ್ಯಾರ್ಥಿಗಳು ಆರು ತಿಂಗಳುಗಳಲ್ಲಿ ಸಂಗ್ರಹಿಸಿದ ವರದಿ ಕಾರ್ಡ್ ಇದಾಗಿದ್ದು, ಈ ವರದಿ ಹಾಜರಾತಿ, ಶಾಸಕಾಂಗ ಭಾಗವಹಿಸುವಿಕೆ, ಸಂಸದರ ನಿಧಿ ಬಳಕೆ, ಕ್ರಿಮಿನಲ್ ದಾಖಲೆಗಳು ಮತ್ತು ವೈಯಕ್ತಿಕ ಆಸ್ತಿ ಬೆಳವಣಿಗೆಯನ್ನು ಪರಿಶೀಲನೆ ನಡೆಸಿವೆ.
2023 ರ ಹೊತ್ತಿಗೆ ಮುನಿರತ್ನ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪಗಳು ಸೇರಿದಂತೆ ಎಂಟು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಡಿಸೆಂಬರ್ 2024 ರಲ್ಲಿ ಅವರ ಮೇಲೆ ಅತ್ಯಾಚಾರ ಮತ್ತು ಹನಿಟ್ರ್ಯಾಪ್ ಆರೋಪಗಳೂ ಕೇಳಿ ಬಂದಿವೆ, ಇದರಿಂದಾಗಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಶಾಸಕರಾಗಿದ್ದಾರೆ.
ಇನ್ನು ಸಂಸತ್ ಅಧಿವೇಶನದಲ್ಲಿ ಭಾಗವಹಿಸುವುದರಲ್ಲಿ ಪಿ.ಸಿ. ಮೋಹನ್ ಮೊದಲ ಸ್ಥಾನ ಪಡೆದಿದ್ದರೆ, ತೇಜಸ್ವಿ ಸೂರ್ಯ ಕಡಿಮೆ ಹಾಜರಾತಿಯನ್ನು ಹೊಂದಿದ್ದಾರೆ. ಆದಾಗ್ಯೂ ಸಂಸತ್ತಿನಲ್ಲಿ ಚರ್ಚೆಗಳಲ್ಲಿ ಅತ್ಯಂತ ಸಕ್ರಿಯವಾಗಿ ಭಾಗವಹಿಸಿದ್ದಾರೆಂದು ತಿಳಿಸಲಾಗಿದೆ.
ಸಂಸತ್ತಿನಲ್ಲಿ ಪ್ರಶ್ನೆ ಕೇಳುವುದರಲ್ಲಿ ತೇಜಸ್ವಿ ಸೂರ್ಯ ಮೊದಲ ಸ್ಥಾನ ಪಡೆದಿದ್ದಾರೆ. ಸಂಸದರ ನಿಧಿ ಬಳಕೆಯಲ್ಲಿ ಡಾ. ಸಿ.ಎನ್. ಮಂಜುನಾಥ್ ಮುಂಚೂಣಿಯಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
ಕಲಾಪದಲ್ಲಿ ಸಂಸದ ಪಿ.ಸಿ. ಮೋಹನ್ ಅವರು ಶೇ 98.51, ಸಿ.ಎನ್.ಮಂಜುನಾಥ್ ಶೇ 94ರಷ್ಟು ಭಾಗವಹಿಸಿದ್ದಾರೆ. ರಾಷ್ಟ್ರೀಯ ಸರಾಸರಿಯು ಶೇ 87 ಆಗಿದ್ದು, ತೇಜಸ್ವಿ ಸೂರ್ಯ ಶೇ 77.6ರಷ್ಟು ಹಾಜರಾತಿ ಹೊಂದಿದ್ದಾರೆ.
ತೇಜಸ್ವಿ ಸೂರ್ಯ 84 ಪ್ರಶ್ನೆಗಳನ್ನು ಕೇಳಿದ್ದರೆ, ಸಿ.ಎನ್. ಮಂಜುನಾಥ್ 9, ಪಿ.ಸಿ. ಮೋಹನ್ 1 ಪ್ರಶ್ನೆ ಮಾತ್ರ ಕೇಳಿದ್ದಾರೆ. ಮಂಜುನಾಥ್ ಶೇ 126.64, ತೇಜಸ್ವಿ ಸೂರ್ಯ ಶೇ 116, ಶೋಭಾ ಕರಂದ್ಲಾಜೆ ಶೇ 97.6ರಷ್ಟು ಸಂಸದರ ನಿಧಿ ಬಳಕೆ ಮಾಡಿದ್ದರೆ, ಪಿ.ಸಿ. ಮೋಹನ್ ಶೇ 9.48ರಷ್ಟು ಮಾತ್ರ ಬಳಕೆ ಮಾಡಿ ಕೊನೇ ಸ್ಥಾನದಲ್ಲಿದ್ದಾರೆ.
ಇನ್ನು ಬೆಂಗಳೂರಿನ ಶಾಸಕರಿಗೆ ಸಂಬಂಧಿಸಿದಂತೆ ಸಾಧನೆ ನೋಡಿದರೆ ಶಾಸಕರ ನಿಧಿಯನ್ನು ಬಳಸುವಲ್ಲಿ ನಿರ್ಲಕ್ಷ್ಯ ಕಂಡು ಬಂದಿದೆ.
ನಾಲ್ವರು ಶಾಸಕರು ಮಾತ್ರ ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ. 6 ಶಾಸಕರು ಶೇ 90ಕ್ಕಿಂತ ಅಧಿಕ ನಿಧಿ ಬಳಕೆ ಮಾಡಿದ್ದಾರೆ.
ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (ಕೆಎಲ್ಎಲ್ಎಡಿಎಸ್)ಯಡಿ 4 ಕೋಟಿ ರೂಪಾಯಿ ನಿಧಿಯನ್ನು ಕೇವಲ ನಾಲ್ವರು ಶಾಸಕರು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ, 40.79 ಕೋಟಿ ರೂಪಾಯಿಗಳು ಖರ್ಚಾಗದೆ ಉಳಿದಿದ್ದು, 4.84 ಕೋಟಿ ರೂಪಾಯಿಗಳು ರದ್ದಾಗುವ ಅಪಾಯದಲ್ಲಿದೆ. ಮಹದೇವಪುರ ಶಾಸಕಿ ಎಸ್.ಮಂಜುಳಾ ಯಾವುದೇ ಹಣ ಹಂಚಿಕೆ ಮಾಡಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವಿಧಾನಸಭಾ ಕಲಾಪದಲ್ಲಿ ನೆಲಮಂಗಲದ ಎನ್. ಶ್ರೀನಿವಾಸ ಅವರು ಶೇ 100ರಷ್ಟು ಹಾಜರಾತಿ ಹೊಂದಿದ್ದರೆ. ಮೂವರು ಶಾಸಕರು ಶೇ 70ಕ್ಕಿಂತ ಕಡಿಮೆ ಹಾಜರಾತಿ ಹೊಂದಿದ್ದಾರೆ. ಶೇ 53.62ರಷ್ಟು ಹಾಜರಾತಿ ಹೊಂದಿರುವ ಪ್ರಿಯಕೃಷ್ಣ ಕೊನೆಯ ಸ್ಥಾನದಲ್ಲಿದ್ದಾರೆ.
Advertisement