ಅಕ್ರಮ ಗಣಿಗಾರಿಕೆ ಕೇಸ್ ಗಳ ಬಗ್ಗೆ ನಿರ್ಲಕ್ಷ್ಯ: ಸಿಎಂ ಸಿದ್ದರಾಮಯ್ಯಗೆ ಸಚಿವ ಎಚ್.ಕೆ ಪಾಟೀಲ್ ಪತ್ರ!

2010ರಲ್ಲಿ ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ಅಕ್ರಮ ಗಣಿಗಾರಿಕೆ ಹಗರಣದ ವಿರುದ್ಧ ಸಿದ್ದರಾಮಯ್ಯ ನೇತೃತ್ವದಲ್ಲಿ ಬಳ್ಳಾರಿವರೆಗೆ 320 ಕಿ.ಮೀ ಪಾದಯಾತ್ರೆ ನಡೆಸಿದ್ದನ್ನು ನೆನಪಿಸಿದ್ದಾರೆ.
CM Siddaramaiah and HK Patil Casual Images
ಸಿಎಂ ಸಿದ್ದರಾಮಯ್ಯ, ಎಚ್ ಕೆ ಪಾಟೀಲ್ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು/ರಾಯಚೂರು: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ತಾರ್ಕಿಕ ಘಟ್ಟಕ್ಕೆ ಕೊಂಡೊಯ್ಯುವಲ್ಲಿ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದಾಗಿ ಕಾನೂನು ಸಚಿವ ಎಚ್‌ಕೆ ಪಾಟೀಲ್ ಶನಿವಾರ ಹೇಳಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಮತ್ತು ಕಳೆದುಹೋದ ಸಂಪತ್ತನ್ನು ಮರಳಿ ಪಡೆಯಬೇಕು ಎಂದು ಅವರು ಬಯಸಿರುವುದಾಗಿ ತಿಳಿಸಿದರು.

ಕೇವಲ ಶೇ.7.6 ರಷ್ಟು ಮಾತ್ರ ತನಿಖೆ: ಈ ಸಂಬಂಧ ಜೂನ್ 18 ರಂದು ಏಳು ಪುಟಗಳ ಪತ್ರ ಬರೆದಿದ್ದು, 2007ರಿಂದ 2011ರ ಅವಧಿಯಲ್ಲಿ ಸರ್ಕಾರಕ್ಕೆ ಅಂದಾಜು 1.5 ಲಕ್ಷ ಕೋಟಿ ರೂ.ಗಳ ನಷ್ಟಕ್ಕೆ ಕಾರಣವಾದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳ ಪೈಕಿ ಇಲ್ಲಿವರೆಗೂ ಕೇವಲ ಶೇ.7.6ರಷ್ಟು ಮಾತ್ರ ತನಿಖೆ ನಡೆಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಲೂಟಿ ನಡೆದರೂ ಸರ್ಕಾರಕ್ಕೆ ತಕ್ಕ ಶಿಕ್ಷೆ ಹಾಗೂ ರಾಜ್ಯದ ಸಂಪತ್ತು ವಸೂಲಿ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆ ತೋರದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

2010ರಲ್ಲಿ ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ಅಕ್ರಮ ಗಣಿಗಾರಿಕೆ ಹಗರಣದ ವಿರುದ್ಧ ಸಿದ್ದರಾಮಯ್ಯ ನೇತೃತ್ವದಲ್ಲಿ ಬಳ್ಳಾರಿವರೆಗೆ 320 ಕಿ.ಮೀ ಪಾದಯಾತ್ರೆ ನಡೆಸಿದ್ದನ್ನು ನೆನಪಿಸಿದ್ದಾರೆ. ಪಾಟೀಲ ಅವರು ಮೊದಲ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ (2013-18) ಅಕ್ರಮ ಗಣಿಗಾರಿಕೆಯಿಂದ ಉಂಟಾದ ನಷ್ಟದ ಪ್ರಮಾಣ ಕುರಿತ ರಚಿಸಲಾದ ಸಚಿವ ಸಂಪುಟ ಉಪ ಸಮಿತಿಯ ನೇತೃತ್ವ ವಹಿಸಿದ್ದರು.

ರಾಯಚೂರಿನಲ್ಲಿ ಪತ್ರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಪಾಟೀಲ್, ಏನು ಮಾಡಬೇಕು ಎಂಬುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ, ಆ ಮೂಲಕ ರಾಜ್ಯಕ್ಕೆ ಸೇವೆ ಸಲ್ಲಿಸಿ ಸರಕಾರಕ್ಕೆ ಒಳ್ಳೆಯ ಹೆಸರು ಬರಬೇಕು ಎಂದು ಪತ್ರ ಬರೆಯಲಾಗಿದೆ. ಇದು ರಾಜಕೀಯ ಪತ್ರವಲ್ಲ.ರಾಜ್ಯ ಮತ್ತು ಜನತೆಯ ಹಿತದೃಷ್ಟಿಯಿಂದ ಬರೆಯಲಾಗಿದೆ. ಸಿಎಂ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದರು. ಅಕ್ರಮದ ದಾಖಲೆಗಳನ್ನು ನಾಶಪಡಿಸುವ ಅನುಮಾನವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಂತಹವುಗಳು ನಡೆಯಬಾರದು ಎಂದು ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗೆ ತಾಕೀತು ಮಾಡಿದ್ದಾರೆ.

ಹದಿನೈದು ವರ್ಷಗಳ ಹಿಂದೆ ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ಪಾದಯಾತ್ರೆ ಮಾಡಿದ್ದನ್ನು ನೆನಪಿಸಿಕೊಂಡ ಸಚಿವರು, 2013-18ರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಂಪುಟ ಉಪಸಮಿತಿ ನಷ್ಟದ ಬಗ್ಗೆ ವರದಿ ಸಲ್ಲಿಸಿ ಇಷ್ಟು ವರ್ಷಗಳಾದರೂ ತೆಗೆದುಕೊಂಡ ಕ್ರಮ ತೃಪ್ತಿಕರವಾಗಿಲ್ಲ. 12 ಸಾವಿರಕ್ಕೂ ಹೆಚ್ಚು ಅಕ್ರಮ ಗಣಿಗಾರಿಕೆ ಪ್ರಕರಣಗಳು ದಾಖಲಾಗಿದ್ದು, ಶೇ.7ರಷ್ಟು ಮಾತ್ರ ತನಿಖೆ ನಡೆದಿದೆ. ಇದರಲ್ಲಿ ಕೇವಲ ಶೇ.2ರಷ್ಟು ಅಂದರೆ ಒಟ್ಟು ಪ್ರಕರಣಗಳ ಪೈಕಿ ಶೇ.0.2ರಷ್ಟು ಪ್ರಕರಣಗಳಲ್ಲಿ ಮಾತ್ರ ತೀರ್ಪು ಬಂದು ಪ್ರಕರಣಗಳು ಅಂತಿಮಗೊಂಡಿವೆ ಎಂದು ತಿಳಿಸಿದರು.

CM Siddaramaiah and HK Patil Casual Images
'ಲಂಚ' ನೀಡಿದವರಿಗೆ ಮನೆಗಳ ಹಂಚಿಕೆ: ಸತ್ಯವನ್ನೇ ಮಾತನಾಡಿದ್ದೇನೆ ಎಂದ ಬಿ.ಆರ್ ಪಾಟೀಲ್; ಆರೋಪ ಖಂಡಿಸಿದ ಡಿಸಿಎಂ ಡಿ.ಕೆ ಶಿವಕುಮಾರ್!

ಅಕ್ರಮ ಗಣಿಗಾರಿಕೆಯಿಂದ ರೂ. 1.5 ಲಕ್ಷ ಕೋಟಿ ನಷ್ಟ: ಬಾಕಿ ಉಳಿದಿರುವ ಈ ಎಲ್ಲಾ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ನೀಡಬೇಕಿದೆ. ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ 1.5 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದ್ದು, ಈ ಬಗ್ಗೆ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಉದ್ದೇಶದಿಂದ ಸಿಎಂಗೆ ಪತ್ರ ಬರೆದಿರುವುದಾಗಿ ಹೇಳಿದರು. ಒಂಬತ್ತು ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿದೆ. ಅವುಗಳಲ್ಲಿ ಮೂರನ್ನು ಮಾತ್ರ ಅದು ತನಿಖೆ ನಡೆಸುತ್ತಿದೆ. ಆರು ಕೇಸ್ ಗಳ ತನಿಖೆ ನಡೆಯುತ್ತಿಲ್ಲ. ಅದೇ ರೀತಿ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಒಪ್ಪಿಸಿದ ಪ್ರಕರಣಗಳಲ್ಲಿ ಹೆಚ್ಚಿನವು ಇನ್ನೂ ತನಿಖೆಗೆ ಒಳಪಟ್ಟಿಲ್ಲ. ಹಾಗಾಗಿ ಸಿಎಂಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.

ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವನ್ನು ಕೋರಿದ ಅವರು, ಕ್ರಿಮಿನಲ್ ಕಾನೂನು ತಿದ್ದುಪಡಿ ಸುಗ್ರೀವಾಜ್ಞೆ, 1946 ರ ನಿಬಂಧನೆಗಳ ಪ್ರಕಾರ ರಿಕವರಿ ಕಮಿಷನರ್ ನೇಮಿಸುವಂತೆ ಸೂಚಿಸಿದ್ದಾರೆ. ತನಿಖೆಗೆ ಒಳಪಡದ ಪ್ರಕರಣಗಳ ತನಿಖೆಯನ್ನು ಕೈಗೊಳ್ಳಲು ಹೊಸ ಎಸ್‌ಐಟಿ ರಚಿಸುವಂತೆ ಮತ್ತು ಈ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com