ದೇವಾಲಯಗಳ ಆದಾಯ ಬೇರೆ ಕಾರ್ಯಗಳಿಗೆ ಬಳಸಲ್ಲ: ಸಚಿವ ರಾಮಲಿಂಗಾ ರೆಡ್ಡಿ

ರಾಜ್ಯ ಸರ್ಕಾರ ಹಿಂದೂ ದೇವಸ್ಥಾನಗಳಿಂದ ಹಣ ಸಂಗ್ರಹಿಸುತ್ತಿದ್ದು, ಇದರಿಂದ ಹಿಂದೂ ಯಾತ್ರಿಕರಿಗೆ ಸಬ್ಸಿಡಿ ನೀಡುವ ಬದಲು ಇತರ ಧರ್ಮಗಳಿಗೆ ನೀಡುತ್ತಿದೆ ಎಂದು ವಿಧಾನಪರಿಷತ್‌ನಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಆವರು ಆರೋಪಿಸಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (ಸಂಗ್ರಹ ಚಿತ್ರ)
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೊಳಪಡುವ ದೇವಸ್ಥಾನಗಳ ಆದಾಯವನ್ನು ಸರ್ಕಾರ ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳುವುದಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಅವರು ಬುಧವಾರ ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರ ಹಿಂದೂ ದೇವಸ್ಥಾನಗಳಿಂದ ಹಣ ಸಂಗ್ರಹಿಸುತ್ತಿದ್ದು, ಇದರಿಂದ ಹಿಂದೂ ಯಾತ್ರಿಕರಿಗೆ ಸಬ್ಸಿಡಿ ನೀಡುವ ಬದಲು ಇತರ ಧರ್ಮಗಳಿಗೆ ನೀಡುತ್ತಿದೆ ಎಂದು ವಿಧಾನಪರಿಷತ್‌ನಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಆವರು ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು, ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ತಪ್ಪು ಸಂದೇಶಗಳು ಹರಡಲಾಗುತ್ತಿದೆ. ಸರ್ಕಾರ ದೇವಾಲಯಗಳ ಆದಾಯವನ್ನು ಬೇರೆ ಕಾರ್ಯಗಳಿಗೆ ಬಳಸುವುದಿಲ್ಲ. ರಾಜ್ಯ ಧಾರ್ಮಿಕ ಪರಿಷತ್‌ನಲ್ಲಿ ಅಧ್ಯಕ್ಷರು, 8 ಜನ ಸಮಿತಿ ಸದಸ್ಯರು ಹಾಗೂ ಅರ್ಚಕರು ಇರುತ್ತಾರೆ. ದೇವಸ್ಥಾನಗಳಿಂದ ಬರುವ ಆದಾಯವನ್ನು ಅವರೇ ಹೇಗೆ ವ್ಯಯಿಸಬೇಕು ಎಂಬುದನ್ನು ಚರ್ಚೆ ಮಾಡುತ್ತಾರೆ. ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ.

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಎ, ಬಿ ಮತ್ತು ಸಿ ಗ್ರೇಡ್‌ಗಳಾಗಿ ವಿಂಗಡಿಸಲಾಗಿದೆ. ರಾಜ್ಯದಲ್ಲಿ ಒಟ್ಟು 1,86,000 ದೇವಸ್ಥಾನಗಳಿವೆ. ಇದರಲ್ಲಿ ಎ ವರ್ಗದ 205, ಬಿ ವರ್ಗದ 193 ಹಾಗೂ ಸಿ ವರ್ಗದ 34,166 ದೇವಸ್ಥಾನಗಳಿವೆ. 5 ಕೋಟಿ ರೂ.ಗಿಂತ ಹೆಚ್ಚು ಆದಾಯವಿದ್ದರೆ ಎ ಗ್ರೇಡ್‌, 2 ಕೋಟಿ ರೂ‌.ಯೊಳಗಿದ್ದರೆ ಬಿ ಗ್ರೇಡ್‌ ಹಾಗೂ 5 ಲಕ್ಷ ರೂ.ಗಿಂತ ಕಡಿಮೆ ಇದ್ದರೆ ಸಿ ಗ್ರೇಡ್‌ ಎಂದು ವರ್ಗಾಯಿಸಲಾಗುತ್ತದೆ.

ದೇವಸ್ಥಾನಗಳಿಗೆ ಭಕ್ತರಿಂದ ಬರುವ ಆದಾಯವನ್ನು ಆಡಳಿತ ಮಂಡಳಿಯವರೇ ನಿರ್ವಹಣೆ ಮಾಡುವುದರಿಂದ ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಸ್ಪಷ್ಟಪಡಿಸಿದರು.

ಯಾವುದೇ ದೇವಾಲಯದ ಹಣ ಸರ್ಕಾರಕ್ಕೆ ಬರುವುದಿಲ್ಲ, ಈ ಹಣವನ್ನು ಸಬ್ಸಿಡಿಗಳನ್ನು ಒದಗಿಸಲು, ಬಡ ದೇವಾಲಯಗಳನ್ನು ನೋಡಿಕೊಳ್ಳಲು, ಅರ್ಚಕರಿಗೆ ಪಾವತಿಸಲು ಮತ್ತು ಇತರ ಖರ್ಚುಗಳಿಗೆ ಬಳಸಲಾಗುತ್ತದೆ. ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೂ ಸಬ್ಸಿಡಿಗಳನ್ನು ನೀಡಲಾಗುತ್ತಿದೆ. ಸಬ್ಸಿಡಿಗಾಗಿ 10,157 ಅರ್ಜಿಗಳಲ್ಲಿ 4,979 ಅರ್ಜಿಗಳನ್ನು ಅಂಗೀಕರಿಸಲಾಗಿದ್ದು, ಇತರರಿಗೆ ದಾಖಲೆಗಳು ಸ್ಪಷ್ಟವಾಗಿಲ್ಲದ ಕಾರಣ ಅದನ್ನು ಸ್ವೀಕರಿಸಿಲ್ಲ. 2022-23 ಮತ್ತು 2023-24 ರಲ್ಲಿ, ಕೈಲಾಸ ಮಾನಸ ಸರೋವರ ಮತ್ತು ಚಾರ್ ಧಾಮ್ ಯಾತ್ರೆ ಕೈಗೊಂಡ ಸ್ಥಳೀಯ ಯಾತ್ರಾರ್ಥಿಗಳಿಗೆ 9.96 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (ಸಂಗ್ರಹ ಚಿತ್ರ)
ಇಷ್ಟವಿರಲಿ ಬಿಡಲಿ, ಮೇ ತಿಂಗಳಿನಲ್ಲಿ ಬಿಬಿಎಂಪಿ ಚುನಾವಣೆ ನಡೆಯಲೇಬೇಕು: ಸಚಿವ ರಾಮಲಿಂಗಾ ರೆಡ್ಡಿ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com