Waqf bill ವಿರೋಧಿಸಿ ಕರ್ನಾಟಕದ ಸಚಿವರಿಂದ ಕಪ್ಪು ಪಟ್ಟಿ ಧರಿಸಿ ನಮಾಜ್, ಪ್ರತಿಭಟನೆ!

ಸಚಿವ ಜಮೀರ್ ಅಹ್ಮದ್ ಖಾನ್ ಬೆಂಗಳೂರಿನ ಚಾಮರಾಜಪೇಟೆ ಮೈದಾನದಲ್ಲಿ ತೋಳಿಗೆ ಕಪ್ಪು ಪಟ್ಟಿ ಧರಿಸಿ ನಮಾಜ್ ಮಾಡಿದರು.
Karnataka Ministers wear black bands to protest against Waqf bill
ಜಮೀರ್ ಅಹ್ಮದ್ ಖಾನ್
Updated on

ಬೆಂಗಳೂರು: ವಕ್ಫ್ ತಿದ್ದುಪಡಿ ಮಸೂದೆ 2024 ಅನ್ನು ವಿರೋಧಿಸಿ ಸೋಮವಾರ ರಂಜಾನ್ ಪ್ರಾರ್ಥನೆ ಸಲ್ಲಿಸುವಾಗ ಕರ್ನಾಟಕದ ಸಚಿವರು ತಮ್ಮ ಬೆಂಬಲಿಗರೊಂದಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು.

ವಕ್ಫ್ ಮತ್ತು ಪ್ರವಾಸೋದ್ಯಮ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಮತ್ತು ಪುರಸಭೆ ಆಡಳಿತ ಮತ್ತು ಹಜ್ ಸಚಿವ ಕೆ. ರೆಹಮಾನ್ ಖಾನ್ ಮತ್ತು ಅವರ ನೂರಾರು ಬೆಂಬಲಿಗರು ಬೆಂಗಳೂರು ಮತ್ತು ಬೀದರ್‌ನಲ್ಲಿ ಕ್ರಮವಾಗಿ ಕಪ್ಪು ಪಟ್ಟಿ ಧರಿಸಿ ಬೆಳಗಿನ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ಸಚಿವ ಜಮೀರ್ ಅಹ್ಮದ್ ಖಾನ್ ಬೆಂಗಳೂರಿನ ಚಾಮರಾಜಪೇಟೆ ಮೈದಾನದಲ್ಲಿ ತೋಳಿಗೆ ಕಪ್ಪು ಪಟ್ಟಿ ಧರಿಸಿ ನಮಾಜ್ ಮಾಡಿದರು. ಅಂತೆಯೇ ಅವರ ನೂರಾರು ಬೆಂಬಲಿಗರು ಸಹ ಕಪ್ಪು ಪಟ್ಟಿ ಧರಿಸಿ ಪ್ರಾರ್ಥನೆಯಲ್ಲಿ ಭಾಗವಹಿಸಿದರು.

ನಮಾಜ್ ಬಳಿಕ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, "ಜನರು ಭಾನುವಾರ ಯುಗಾದಿಯನ್ನು ಆಚರಿಸಿದರು, ಮತ್ತು ಇಂದು ರಂಜಾನ್ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಾನು ಎಲ್ಲರಿಗೂ ನನ್ನ ಶುಭಾಶಯಗಳನ್ನು ಕೋರುತ್ತೇನೆ. ಬಕ್ರೀದ್ ಜೊತೆಗೆ ಮುಸ್ಲಿಮರ ಪ್ರಮುಖ ಹಬ್ಬಗಳಲ್ಲಿ ಒಂದಾದ ರಂಜಾನ್ ಸಮಯದಲ್ಲಿ ನಾವು 30 ದಿನಗಳ ಕಾಲ ಉಪವಾಸ ಮಾಡುತ್ತೇವೆ. ಹಿಂದೂಗಳಿಗೆ, ಭಾನುವಾರ ಆಚರಿಸಲಾದ ಯುಗಾದಿಯು ಹೊಸ ವರ್ಷದ ಆರಂಭವನ್ನು ಸೂಚಿಸುವ ಮಹತ್ವದ ಹಬ್ಬವಾಗಿದೆ.

Karnataka Ministers wear black bands to protest against Waqf bill
11 ವರ್ಷ ಅಧಿಕಾರದಲ್ಲಿದ್ದರೂ ಮೋದಿ ಸರ್ಕಾರವೇಕೆ ವಕ್ಫ್ ಕಾಯ್ದೆ ರದ್ದು ಮಾಡಿಲ್ಲ: ಸಚಿವ ಎಂ.ಬಿ ಪಾಟೀಲ್ ಪ್ರಶ್ನೆ

ನಮ್ಮ ಧಾರ್ಮಿಕ ಬೋಧಕರು ಪ್ರಾರ್ಥನೆಗಳನ್ನು ನಡೆಸಿದ ನಂತರ, ನಾವು ದುವಾ (ಆಶಿರ್ವಾದ)ವನ್ನು ನಿರ್ವಹಿಸಿದ್ದೇವೆ. ದುವಾ ಸಮಯದಲ್ಲಿ, ಮುಸ್ಲಿಮರು, ಹಿಂದೂಗಳು ಮತ್ತು ಕ್ರಿಶ್ಚಿಯನ್ನರು - ಎಲ್ಲಾ ಸಮುದಾಯಗಳು ಸಹೋದರ ಸಹೋದರಿಯರಂತೆ ಒಟ್ಟಿಗೆ ಬದುಕಲು ಒಗ್ಗಟ್ಟಿನಿಂದ ಪ್ರಾರ್ಥಿಸಿದೆ. ನಮ್ಮ ಧಾರ್ಮಿಕ ಮುಖ್ಯಸ್ಥರು ಸಹ ಅದಕ್ಕಾಗಿ ಪ್ರಾರ್ಥಿಸಿದರು ಎಂದು ಹೇಳಿದರು.

ಇದೇ ವೇಳೆ "ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ವರ್ಷ ಬೆಳಿಗ್ಗೆ ಪ್ರಾರ್ಥನೆಗಳಿಗೆ ಹಾಜರಾಗುತ್ತಾರೆ. ಆದರೆ, ಈ ಬಾರಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಸೇರಲು ಸಾಧ್ಯವಾಗಲಿಲ್ಲ. ಅವರು ಬೆಳಿಗ್ಗೆ 9.30 ಕ್ಕೆ ನನಗೆ ಕರೆ ಮಾಡಿ ಕಾರ್ಯಕ್ರಮದಲ್ಲಿ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ಮಾಡಿಕೊಂಡರು. ಅಂತೆಯೇ ಎಲ್ಲಾ ಸಮುದಾಯದ ಸದಸ್ಯರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು. ನಮ್ಮ ಧಾರ್ಮಿಕ ಮುಖ್ಯಸ್ಥರು ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದರು ಎಂದು ಹೇಳಿದರು.

ವಕ್ಫ್ ಮಸೂದೆಗೆ ವಿರೋಧ

ಅಂತೆಯೇ ಕೇಂದ್ರ ಸರ್ಕಾರದ ಪ್ರಸ್ತಾವಿತ ವಕ್ಫ್ ಮಸೂದೆಯ ವಿರುದ್ಧ ಶಾಂತಿಯುತ ಪ್ರತಿಭಟನೆಯಾಗಿ ದೇಶಾದ್ಯಂತ ಧಾರ್ಮಿಕ ಮುಖಂಡರು ಕಪ್ಪು ಪಟ್ಟಿಗಳನ್ನು ಧರಿಸಲು ಜನರಿಗೆ ಸೂಚನೆ ನೀಡಿದ್ದಾರೆ ಎಂದು ಸಚಿವರು ವಿವರಿಸಿದರು. "ವಕ್ಫ್ ಕಾಯ್ದೆ ಇಂದು ನಿನ್ನೆ ಜಾರಿಗೆ ಬಂದಿದ್ದಲ್ಲ; ಇದು ಬ್ರಿಟಿಷ್ ಆಳ್ವಿಕೆಯ ಕಾಲದಿಂದಲೂ ಬಂದಿದೆ. ಕೇಂದ್ರ ಸರ್ಕಾರ ಈ ಹೊಸ ಮಸೂದೆಯನ್ನು ಮಂಡಿಸಬಾರದು ಎಂಬುದು ನಮ್ಮ ಬೇಡಿಕೆಯಾಗಿದೆ. ನಮ್ಮ ರಾಜ್ಯ ಸರ್ಕಾರ ಈಗಾಗಲೇ ಒಂದು ನಿಲುವನ್ನು ತೆಗೆದುಕೊಂಡಿದೆ ಮತ್ತು ಕಳೆದ ವಿಧಾನಸಭಾ ಅಧಿವೇಶನದಲ್ಲಿ, ನಾವು ಅದನ್ನು ಬೆಂಬಲಿಸದಿರಲು ನಿರ್ಧರಿಸಿದ್ದೇವೆ" ಎಂದು ಅವರು ಹೇಳಿದರು.

ಪ್ರಮುಖ ಇಸ್ಲಾಮಿಕ್ ವಿದ್ವಾಂಸ ಮೌಲಾನಾ ಮೊಹಮ್ಮದ್ ಮಕ್ಸೂದ್ ಇಮ್ರಾನ್ ರಶಾದಿ ಕೂಡ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸುತ್ತಾ, "ಮುಂದಿನ ಎರಡು ಮೂರು ದಿನಗಳಲ್ಲಿ, ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು. ನಾವು ಯಾವುದೇ ಮೌಖಿಕ ಹೇಳಿಕೆಗಳನ್ನು ನೀಡುತ್ತಿಲ್ಲ, ಆದರೆ ಕಪ್ಪು ಪಟ್ಟಿಗಳನ್ನು ಧರಿಸುವ ಮೂಲಕ, ಈ ಬೆಳವಣಿಗೆ ಸರಿಯಲ್ಲ ಎಂಬ ಸಂದೇಶವನ್ನು ನಾವು ಕಳುಹಿಸುತ್ತಿದ್ದೇವೆ. ಸಂವಿಧಾನವು ನಮಗೆ ಪ್ರತಿಭಟಿಸುವ ಹಕ್ಕನ್ನು ನೀಡುತ್ತದೆ ಮತ್ತು ವಕ್ಫ್ ತಿದ್ದುಪಡಿ ಮಸೂದೆ ಸ್ವೀಕಾರಾರ್ಹವಲ್ಲ ಎಂದು ವ್ಯಕ್ತಪಡಿಸಲು ನಾವು ಈ ಹಕ್ಕನ್ನು ಬಳಸುತ್ತಿದ್ದೇವೆ" ಎಂದು ಜಮೀರ್ ಹೇಳಿದರು.

ವಿವಿಧ ಸಮುದಾಯಗಳ ನಡುವೆ ಏಕತೆ ಮತ್ತು ಪರಸ್ಪರ ಗೌರವದ ಮಹತ್ವವನ್ನು ಅವರು ಒತ್ತಿ ಹೇಳಿದರು. "ರಂಜಾನ್ ಹಬ್ಬವು ಬಡವರು ಮತ್ತು ಶ್ರೀಮಂತರನ್ನು ಒಟ್ಟುಗೂಡಿಸುತ್ತದೆ, ಶ್ರೀಮಂತರು ಅಗತ್ಯವಿರುವವರಿಗೆ ಸಹಾಯ ಮಾಡುವುದನ್ನು ಖಚಿತಪಡಿಸುತ್ತದೆ. ನಿನ್ನೆಯಷ್ಟೇ ಯುಗಾದಿಯನ್ನು ಆಚರಿಸಲಾಯಿತು, ಮತ್ತು ಇಂದು ರಂಜಾನ್ ಹಬ್ಬ. ಭಾರತವು ಕೋಮು ಸೌಹಾರ್ದತೆಗೆ ಉತ್ತಮ ಉದಾಹರಣೆಯಾಗಿದೆ. ಈ ಸಂದೇಶವು ಜಗತ್ತನ್ನು ತಲುಪಬೇಕು. ಹಿಂದೂಗಳು ವಿಶೇಷ ಸಂದರ್ಭಗಳಲ್ಲಿ ಮುಸ್ಲಿಮರಿಗೆ ಮಾಡುವಂತೆಯೇ ಮುಸ್ಲಿಮರು ಹಿಂದೂಗಳನ್ನು ಸ್ವಾಗತಿಸುತ್ತಾರೆ ಮತ್ತು ಅವರ ಶುಭಾಶಯಗಳನ್ನು ತಿಳಿಸುತ್ತಾರೆ. ಸದ್ಭಾವನೆ ಮತ್ತು ಏಕತೆಯ ಸಂಕೇತವಾಗಿ ಪೊಲೀಸ್ ಸಿಬ್ಬಂದಿ, ನೆರೆಹೊರೆಯವರು ಮತ್ತು ಆಸ್ಪತ್ರೆ ಸಿಬ್ಬಂದಿಗೆ ಉಡುಗೊರೆಗಳನ್ನು ನೀಡಲು ನಾನು ನನ್ನ ಮುಸ್ಲಿಂ ಸಹೋದರರನ್ನು ಪ್ರೋತ್ಸಾಹಿಸಿದ್ದೇನೆ ಎಂದರು.

ಏತನ್ಮಧ್ಯೆ, ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮಂಗಳೂರಿನ ಬಾವುಟಗದ್ದೆ ಈದ್ಗಾ ಮಸೀದಿಯಲ್ಲಿ ಬೆಳಿಗ್ಗೆ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಆದರೆ ಅವರು ಕಪ್ಪು ಪಟ್ಟಿ ಧರಿಸಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com