
ಬೆಂಗಳೂರು: ರಾಜ್ಯ ಸರ್ಕಾರದ ಸಾಧನೆಗಳನ್ನು ಪ್ರದರ್ಶಿಸಲು ಬಿಬಿಎಂಪಿ ವ್ಯಾಪ್ತಿಯಲ್ಲಿ ಬಸ್ ತಂಗುದಾಣಗಳನ್ನು ಬಳಸಿಕೊಂಡು ತೀವ್ರ ನಷ್ಟಕ್ಕೀಡಾದರೂ ಕೂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ (DIPR) ಕೋಟ್ಯಂತರ ರೂಪಾಯಿ ಜಾಹೀರಾತು ತೆರಿಗೆಯನ್ನು ವಸೂಲಿ ಮಾಡದೆ ಮೌನ ವಹಿಸಿದ್ದು, ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಕಾರ್ಪೊರೇಟರ್ ಎನ್ ಆರ್ ರಮೇಶ್ ಸಲ್ಲಿಸಿದ ಖಾಸಗಿ ದೂರಿನಲ್ಲಿ ಆರೋಪಿಸಲಾಗಿದೆ.
ಈ ಜಾಹೀರಾತುಗಳು ಸಿದ್ದರಾಮಯ್ಯನವರು 2013-18ರಲ್ಲಿ ಮುಖ್ಯಮಂತ್ರಿಯಾಗಿದ್ದಾಗಿನ ಅವಧಿಗೆ ಸಂಬಂಧಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆಗಿನ ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರು ಡಿಐಪಿಆರ್ನ ಅಧಿಕಾರಿಗಳಿಗೆ ಮೌನವಾಗಿರಲು ಅಕ್ರಮವಾಗಿ ಲಂಚ ನೀಡಿರಬಹುದು ಎಂದು ದೂರಿನಲ್ಲಿ ಆರೋಪಿಸಿದ್ದು, ಊಹೆಯ ಆಧಾರದ ಮೇಲೆ ಸಲ್ಲಿಸಿರುವ ದೂರನ್ನು ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
ರಾಜ್ಯದ ಮಾಜಿ ಮತ್ತು ಹಾಲಿ ಸಂಸದರು/ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್, ಆರೋಪಗಳನ್ನು ಊಹೆಯ ಮೇಲೆ ಹೊರಿಸಲಾಗಿದೆ ಎಂದು ಹೇಳಿದ್ದಾರೆ. ಇದು ಕ್ರಿಮಿನಲ್ ಕಾನೂನನ್ನು ಜಾರಿಗೆ ತರಲು ಆಧಾರವಾಗಿರಲು ಸಾಧ್ಯವಿಲ್ಲ. ಅಲ್ಲದೆ, ಆರೋಪಿಗಳ ವಿರುದ್ಧ ಯಾವುದೇ ಆಧಾರಗಳಿಲ್ಲ ಎಂದು ಹೇಳಿ ದೂರನ್ನು ವಜಾಗೊಳಿಸಲಾಗಿದೆ ಎಂದು ಹೇಳಿದರು.
2025 ರಲ್ಲಿ ಎನ್.ಆರ್. ರಮೇಶ್ ಅವರು ದೂರು ದಾಖಲಿಸಿದ್ದರು. ಆರೋಪಿಗಳಾದ ಸಿದ್ದರಾಮಯ್ಯ, ಕೆ ಜೆ ಜಾರ್ಜ್, ಆಗಿನ ಡಿಐಪಿಆರ್ ಪ್ರಧಾನ ಕಾರ್ಯದರ್ಶಿಗಳಾದ ಲಕ್ಷ್ಮಿನಾರಾಯಣನ್, ಮಣಿವಣ್ಣನ್ ಪಿ ಮತ್ತು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಲೋಕಾಯುಕ್ತ ಪೊಲೀಸರಿಂದ ಸೂಕ್ತ ತನಿಖೆಗೆ ದೂರನ್ನು ಉಲ್ಲೇಖಿಸಬೇಕು ಎಂದು ಕೋರಿದ್ದರು.
2015 ರಿಂದ 2017 ರವರೆಗೆ 439 ಬಸ್ ತಂಗುದಾಣಗಳಲ್ಲಿ ಅನುಮತಿ ಪಡೆಯದೆ ಮತ್ತು ಶುಲ್ಕ ಪಾವತಿಸದೆ ಜಾಹೀರಾತುಗಳನ್ನು ಪ್ರದರ್ಶಿಸುವ ಮೂಲಕ ಬಿಬಿಎಂಪಿಗೆ 68.14 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಆರೋಪಿಸಿ, ಜುಲೈ 29, 2024 ರಂದು ಲೋಕಾಯುಕ್ತರು ತಮ್ಮ ದೂರನ್ನು ಮುಕ್ತಾಯಗೊಳಿಸಿದ ನಂತರ ಎನ್ ಆರ್ ರಮೇಶ್ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದರು.
Advertisement