
ಬೆಂಗಳೂರು: ಹೆಚ್ಚುವರಿ ಹೊಣೆಗಾರಿಕೆಯಡಿ ನಿಯೋಜನೆಗೊಂಡಿದ್ದ ಬಿಬಿಎಂಪಿಯ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರಿಗೆ ರಾಜ್ಯ ಸರ್ಕಾರ ಪೂರ್ಣಾವಧಿ ಜವಾಬ್ದಾರಿ ವಹಿಸಿ ಶುಕ್ರವಾರ ಆದೇಶಿಸಿದೆ.
ಕಳೆದ ಬುಧವಾರ ಬಿಬಿಎಂಪಿಯವಷ್ಟೇ ಮುಖ್ಯ ಆಯುಕ್ತ ಹುದ್ದೆ ಯ ಹೆಚ್ಚುವರಿ ಹೊಣೆಗಾರಿಕೆ ವಹಿಸಿಕೊಂಡಿದ್ದ ಬಿಎ೦ಆರ್ಸಿಎಲ್ ನ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ್ ರಾವ್ ಅವರಿಗೆ ಶುಕ್ರವಾರ ಪೂರ್ಣಾವಧಿ ಜವಾಬ್ದಾರಿ ನೀಡಲಾಗಿದೆ. ಜೊತೆಗೆ ಬಿಎಂಆರ್ಸಿಎಲ್ನ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.
ಬೆಂಗಳೂರಿನ ಮೂಲಸೌಕರ್ಯನಿರ್ವಹಿಸುವ ಹೊಣೆಗಾರಿಕೆ ಬಿಬಿಎಂಪಿಯ ಜವಾಬ್ದಾರಿಯಾಗಿದ್ದು, ಇಷ್ಟು ದೊಡ್ಡ ಜವಾಬ್ದಾರಿ ನಿರ್ವಹಿಸಬೇಕಾದ ಹುದ್ದೆಗೆ ಬೇರೆ ಇಲಾಖೆಯ ಅಧಿಕಾರಿಗೆ ಹೆಚ್ಚುವರಿಯಾಗಿ ನಿಯೋಜಿಸಿರುವುದಕ್ಕೆ ಹಲವು ಟೀಕೆಗಳು ವ್ಯಕ್ತವಾಗಿತ್ತು.
ಟೀಕೆ ಬೆನ್ನಲ್ಲೇ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದ್ದು, ಮಹೇಶ್ವರ್ ರಾವ್ ಅವರಿಗೆ ಪೂರ್ಣಾವಧಿ ಜವಾಬ್ದಾರಿ ನೀಡಿದೆ.
ಇದರೊಂದಿಗೆ ಪಾಲಿಕೆಯ ವಿವಿಧ ವಿಶೇಷ ಆಯುಕ್ತರ ಜವಾಬ್ದಾರಿ ಯನ್ನು ಬದಲಾವಣೆ ಮಾಡಲಾಗಿದೆ. ವಿಶೇಷ ಆಯುಕ್ತ ಪ್ರೀತಿ ಗೆಹ್ಲೋಟ್ ಅವರು ನಿರ್ವಹಿಸುತ್ತಿದ್ದ ಶಿಕ್ಷಣ ವಿಭಾಗವನ್ನು ಕಲ್ಯಾಣ ಮತ್ತು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸೂರಲ್ಕರ್ ವಿಕಾಸ್ ಕಿಶೋರ್ ಅವರಿಗೆ ಹೆಚ್ಚುವರಿಯಾಗಿ ವಹಿಸಲಾಗಿದೆ.
Advertisement