2 ವಾರಗಳಲ್ಲಿ 'ಕೋಮು ವಿರೋಧಿ ಕಾರ್ಯಪಡೆ ರಚನೆ': ಗೃಹ ಸಚಿವ ಪರಮೇಶ್ವರ್

ಕಾರ್ಯಪಡೆಯಲ್ಲಿ ಇನ್ಸ್‌ಪೆಕ್ಟರ್ ಜನರಲ್ (ಐಜಿ) ಅಥವಾ ಅದಕ್ಕಿಂತ ಹೆಚ್ಚಿನ ಶ್ರೇಣಿಯ ಅಧಿಕಾರಿ ನೇತೃತ್ವ ವಹಿಸಲಿದ್ದಾರೆ.
G Parameshwar
ಗೃಹ ಸಚಿವ ಜಿ ಪರಮೇಶ್ವರ್
Updated on

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಕೋಮು ಸಂಘರ್ಷಗಳನ್ನು ತಡೆಯಲು 2 ವಾರಗಳಲ್ಲಿ ಮಂಗಳೂರಿನಲ್ಲಿ ಕೋಮು ವಿರೋಧಿ ಕಾರ್ಯಪಡೆ (ಎಸಿಟಿಎಫ್) ರಚನೆ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಶನಿವಾರ ಹೇಳಿದರು.

ಅಶ್ರಫ್ ಮತ್ತು ಸುಹಾಸ್ ಶೆಟ್ಟಿ ಅವರ ಹತ್ಯೆಗಳ ನಂತರ ದಕ್ಷಿಣ ಕನ್ನಡದಲ್ಲಿ ಉಂಟಾಗಿರುವ ಉದ್ವಿಗ್ನತೆ ವಾತಾವರಣವನ್ನುಗಮನದಲ್ಲಿಟ್ಟುಕೊಂಡು ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಪರಮೇಶ್ವರ್ ಅವರು, ನಕ್ಸಲ್ ವಿರೋಧಿ ಪಡೆಯ ಮಾದರಿಯಲ್ಲಿ ಎರಡು ವಾರಗಳಲ್ಲಿ ಎಸಿಟಿಎಫ್ ಅನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು. ಕಾರ್ಯಪಡೆಯಲ್ಲಿ ಇನ್ಸ್‌ಪೆಕ್ಟರ್ ಜನರಲ್ (ಐಜಿ) ಅಥವಾ ಅದಕ್ಕಿಂತ ಹೆಚ್ಚಿನ ಶ್ರೇಣಿಯ ಅಧಿಕಾರಿ ನೇತೃತ್ವ ವಹಿಸಲಿದ್ದಾರೆ. ಈ ಕಾರ್ಯಪಡೆಯ ಸ್ವರೂಪದ ಕುರಿತು ನಂತರದ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ಈ ಪ್ರದೇಶದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಖಚಿತಪಡಿಸಿಕೊಳ್ಳಲು ಕೋಮು ಉದ್ವಿಗ್ನತೆಯನ್ನು ಹೆಚ್ಚಿಸುವ ಶಕ್ತಿಗಳು ಮತ್ತು ಅವರ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾರ್ಯಪಡೆಗೆ ಅಧಿಕಾರ ನೀಡಲಾಗುವುದು ಎಸಿಟಿಎಫ್ ಕೋಮು ಭಾಷಣಗಳು, ಹೇಳಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಇಡಲಿದೆ. ಕಾನೂನಿನ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಿದೆ. ನಕ್ಸಲ್ ನಿಗ್ರಹ ಪಡೆ (ಎಎನ್ಎಫ್‌) ಮಾದರಿಯಲ್ಲಿ ಕೋಮು ಹಿಂಸೆ ನಿಗ್ರಹ ಕಾರ್ಯಪಡೆ ಇರಲಿದೆ,

G Parameshwar
ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಸಹಜ ಸ್ಥಿತಿಯತ್ತ ಮಂಗಳೂರು: ಮೇ 6ರವರೆಗೆ ನಿಷೇಧಾಜ್ಞೆ ಮುಂದುವರಿಕೆ

ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಈ ಜಿಲ್ಲೆಗಳಲ್ಲಿ ಕೋಮು ಹಿಂಸೆ ಮತ್ತೆ ಮರುಕಳಿಸಿದೆ ಎಂಬ ಭಾವನೆ ಜನರಲ್ಲಿ ಬಂದಿರಬಹುದು. ಜನ ಸಮುದಾಯ ಇದನ್ನು ಇಷ್ಟ ಪಡುವುದಿಲ್ಲ. ಈ ಜಿಲ್ಲೆಗಳು ಶಾಂತಿಯಿಂದ ಇರಬೇಕು, ಜನ ಶಾಂತಿಯಿಂದ ಬದುಕಬೇಕು. ಇಲ್ಲಿ ಬಂಡವಾಳ ಹೂಡಿಕೆ ಆಗಬೇಕು. ಜನರಿಗೆ ಉದ್ಯೋಗ ಸಿಗಬೇಕು ಎಂದು ಪೊಲೀಸ್ ಇಲಾಖೆ ಮತ್ತು ಸರ್ಕಾರ ಬಯಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಎರಡು ವರ್ಷಗಳಿಂದ ಎಲ್ಲ ರೀತಿಯ ಕ್ರಮ ತೆಗದುಕೊಂಡಿದ್ದೆವು. ಗುಂಪು ಹಲ್ಲೆ ನಡೆಸಿ ಕೇರಳದ ವಯನಾಡಿನ ಅಶ್ರಫ್‌ನನ್ನು ಕೊಲೆ ಮಾಡಿದ್ದು ಹಾಗೂ ಸುಹಾಸ್ ಶೆಟ್ಟಿ ಹತ್ಯೆ ಕೋಮು ಸೌಹಾರ್ದಕ್ಕೆ ಸವಾಲು ಆಗಿವೆ.

‘ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೆಲ ವರ್ಷಗಳಿಂದ ಕೋಮು ಹಿಂಸಾಚಾರ ಮರುಕಳಿಸುತ್ತಿದೆ. ಅನೇಕ ಸಂದರ್ಭಗಳಲ್ಲಿ ಈ ಕಾರಣಕ್ಕಾಗಿಯೇ ಈ ಎರಡು ಜಿಲ್ಲೆಗಳು ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿವೆ. ಈ ಎರಡು ಜಿಲ್ಲೆಗಳಲ್ಲಿ ಶಾಂತಿ ಸ್ಥಾಪಿಸುವುದೇ ಈ ಕಾರ್ಯಪಡೆ ರಚನೆಯ ಉದ್ದೇಶ. ಕೋಮು ಹಿಂಸೆ ನಿಗ್ರಹ ಕೋಶವನ್ನು ಈ ಹಿಂದೆ ರಚಿಸಿದ್ದೆವು. ಆದರೆ, ಅದು ಪೊಲೀಸ್ ಬಲದ ಒಳಗೆ ಇತ್ತು. ಈಗ ಸ್ಥಾಪಿಸುವ ಕಾರ್ಯಪಡೆ ಪ್ರತ್ಯೇಕ ಘಟಕವಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಇದೇ ವೇಳೆ ಸುಹಾಸ್ ಹತ್ಯೆಯ ಹಿಂದೆ ಗುಪ್ತಚರ ವೈಫಲ್ಯ ಇರುವ ಆರೋಪವನ್ನು ಸಚಿವರು ನಿರಾಕರಿಸಿದರು. ತನಿಖೆ ಬಳಿಕ ಸತ್ಯಾಸತ್ಯತೆಗಳು ತಿಳಿದುಬರಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com