
ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಭಾರತ ಯುದ್ಧಕ್ಕೆ ಸನ್ನದ್ಧವಾಗಿದ್ದು, ಮೇ 7 ರಂದು ಮಾಕ್ ಡ್ರಿಲ್ ನಡೆಸುವಂತೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯವು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರು, ಕಾರವಾರ ಮತ್ತು ರಾಯಚೂರಿನಲ್ಲಿ ಅಣಕು ಕವಾಯತುಗಳು ನಡೆಯಲಿವೆ.
ಈ ಕುರಿತು ಮಾಹಿತಿ ನೀಡಿದ ಡಿಜೆಪಿ ಪ್ರಶಾಂತ್ ಕುಮಾರ್ ಠಾಕೂರ್ ಅವರು, ಈ ಕವಾಯತುಗಳು ಒಂದು ವಾರ ಮುಂದುವರಿಯಲಿವೆ ಮತ್ತು ಸನ್ನದ್ಧತೆ ಹಾಗೂ ಸಂಪನ್ಮೂಲಗಳಲ್ಲಿನ ಅಂತರವನ್ನು ಗುರುತಿಸುವ ಮತ್ತು ಪರಿಹರಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
"ಬೆಂಗಳೂರು ನಗರ ಸೇರಿದಂತೆ ರಾಜ್ಯದ ಮೂರು ಸ್ಥಳಗಳಲ್ಲಿ ಅಣಕು ಕವಾಯತುಗಳು ನಡೆಯಲಿವೆ. ಬೆಂಗಳೂರು ಹಲವಾರು ರಕ್ಷಣಾ ಕಚೇರಿಗಳನ್ನು ಹೊಂದಿರುವ ಮಹಾನಗರ ಪ್ರದೇಶವಾಗಿದೆ ಮತ್ತು ಬಹಳ ಸೂಕ್ಷ್ಮ ಜಿಲ್ಲೆಯಾಗಿದೆ" ಎಂದು ಠಾಕೂರ್ ತಿಳಿಸಿದರು.
"ಎರಡನೇ ಸ್ಥಳ ಉತ್ತರ ಕನ್ನಡ ಜಿಲ್ಲೆಯ ಕಾರವಾರವಾಗಿದ್ದು, ಅದು ಕೈಗಾ ಪರಮಾಣು ವಿದ್ಯುತ್ ಸ್ಥಾವರದ ನೆಲೆಯಾಗಿದೆ. ಮೂರನೆಯದು ರಾಯಚೂರು, ಅಲ್ಲಿ ಉಷ್ಣ ವಿದ್ಯುತ್ ಸ್ಥಾವರ ಇರುವುದರಿಂದ ಆಯ್ಕೆ ಮಾಡಲಾಗಿದೆ" ಎಂದು ಅವರು ಹೇಳಿದರು.
"ನಾವು ಕೇಂದ್ರ ಗೃಹ ಸಚಿವಾಲಯದೊಂದಿಗೆ ಮಾಕ್ ಡ್ರಿಲ್ ಘಟಕಗಳ ಬಗ್ಗೆ ಚರ್ಚಿಸಿದ್ದೇವೆ. ಸೈರನ್ಗಳು ಈ ಕವಾಯತಿನ ಏಕೈಕ ಅಂಶವಲ್ಲ'' ಎಂದು ಅವರು ಸ್ಪಷ್ಟಪಡಿಸಿದರು.
ಈ ಮಾಕ್ ಡ್ರಿಲ್ ಆಸ್ಪತ್ರೆಗಳನ್ನು ಸಜ್ಜುಗೊಳಿಸುವುದು, ಪರಿಹಾರ ಪ್ರಯತ್ನಗಳು ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಸಹ ಒಳಗೊಂಡಿದೆ.
ಬೆಂಗಳೂರಿನಲ್ಲಿ ವೈದ್ಯರು, ವಿದ್ಯಾರ್ಥಿಗಳು, ಎನ್ಸಿಸಿ ಕೆಡೆಟ್ಗಳು ಮತ್ತು ಇತರರು ಸೇರಿದಂತೆ ಸುಮಾರು 5,000 ನಾಗರಿಕ ರಕ್ಷಣಾ ಸಿಬ್ಬಂದಿಗಳಿದ್ದು, ಅವರೆಲ್ಲರು ಈ ಮಾಕ್ ಡ್ರಿಲ್ ನಲ್ಲಿ ಭಾಗವಹಿಸುತ್ತಾರೆ. ನಾಳೆ ಸಂಜೆ 4 ಗಂಟೆಗೆ ಡ್ರಿಲ್ ನಡೆಯಲಿದೆ ಎಂದು ಠಾಕೂರ್ ಹೇಳಿದರು.
ವಿವಿಧ ಪೊಲೀಸ್ ಮತ್ತು ಅಗ್ನಿಶಾಮಕ ಠಾಣೆಗಳಲ್ಲಿ ಸೈರನ್ಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರಿನಲ್ಲಿ, 35 ಸೈರನ್ಗಳನ್ನು ನಿಯೋಜಿಸಲಾಗಿದ್ದು, ಅವುಗಳಲ್ಲಿ 32 ಕಾರ್ಯನಿರ್ವಹಿಸುತ್ತಿವೆ, ಪ್ರತಿಯೊಂದೂ ಸುಮಾರು 3 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ ಎಂದು ಅವರು ತಿಳಿಸಿದರು.
"ಸೈರನ್ ಕೇಳಿದಾಗ ಜನರು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಿಳಿದಿರಬೇಕು. ಈ ಕುರಿತು ದೆಹಲಿಯಿಂದ ಔಪಚಾರಿಕ ಮಾರ್ಗಸೂಚಿಯನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಈ ಕವಾಯತಿಗೆ ಸಂಬಂಧಿಸಿದ ನಿರ್ಧಾರವನ್ನು ನಿನ್ನೆ ದೆಹಲಿಯಲ್ಲಿ ತೆಗೆದುಕೊಳ್ಳಲಾಗಿದೆ ಮತ್ತು ನಿನ್ನೆ ರಾತ್ರಿ ನಮಗೆ ಮಾಹಿತಿ ನೀಡಲಾಗಿದೆ" ಎಂದರು.
Advertisement