
ಬೆಂಗಳೂರು: 26 ಮಂದಿ ಸಾವಿಗೆ ಕಾರಣವಾದ ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ (operation sindoor) ಕಾರ್ಯಾಚರಣೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಕರ್ನಾಟಕ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ವೇಳೆ ಕುಂಕುಮ ಧರಿಸಿ ಬಂದಿದ್ದು ಎಲ್ಲರ ಗಮನ ಸೆಳೆಯಿತು.
ಸಿಎಂ ಸರ್ಕಾರಿ ನಿವಾಸದಲ್ಲಿ ನಿನ್ನೆ ಅಂದರೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹಣೆಗೆ ಕುಂಕುಮ ಇಟ್ಟುಕೊಂಡು ಆಗಮಿಸಿದ ಸಿದ್ದರಾಮಯ್ಯ ಅವರು, ಈ ಸಂದರ್ಭದಲ್ಲಿ 'ಕೇಂದ್ರ ಸರ್ಕಾರದ ಜೊತೆಗೆ ನಾವು ನಿಲ್ಲುತ್ತೇವೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ಗಳಲ್ಲಿನ ಉಗ್ರಗಾಮಿಗಳ ನೆಲೆಯನ್ನು ನಾಶ ಮಾಡಿ ಪರಾಕ್ರಮ ಮೆರೆದ ಭಾರತದ ಹೆಮ್ಮೆಯ ಧೀರ ಸೈನಿಕರಿಗೆ ಇಡೀ ರಾಜ್ಯದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ' ಎಂದರು.
ದಾಳಿ ಮಾಡದೇ ಬೇರೆ ದಾರಿ ಇರಲಿಲ್ಲ
ಉಗ್ರರ ನೆಲೆಗಳ ಮೇಲೆ ಸೇನಾದಾಳಿ ನಡೆಸದೆ ಭಾರತದ ಮುಂದೆ ಬೇರೆ ಆಯ್ಕೆಗಳಿರಲಿಲ್ಲ ಎಂದು ಹೇಳಿದ ಸಿದ್ದರಾಮಯ್ಯ, 'ಪಹಲ್ಗಾಮ್ ನಲ್ಲಿ ನಡೆದ ಹತ್ಯಾಕಾಂಡ ನಡೆಸಿದ ಉಗ್ರಗಾಮಿಗಳು ಪಾಕಿಸ್ತಾನಕ್ಕೆ ಸೇರಿದವರೆಂದು ಜಗಜ್ಜಾಹೀರಾಗಿದ್ದರೂ ಪಾಕಿಸ್ತಾನ ಇದನ್ನು ಒಪ್ಪಿಕೊಂಡು ಕ್ರಮಕೈಗೊಳ್ಳುವ ಭರವಸೆ ನೀಡದೆ ಹಠಮಾರಿ ಧೋರಣೆ ತಳೆದಿರುವ ಕಾರಣದಿಂದಾಗಿ ಭಾರತಕ್ಕೂ ಈ ದಾಳಿ ನಡೆಸದೆ ಬೇರೆ ಆಯ್ಕೆಗಳಿರಲಿಲ್ಲ' ಎಂದರು.
ಹಣೆಗೆ ಧರಿಸಿದ್ದ ಕುಂಕುಮದ ಹಿನ್ನಲೆ ಹೇಳಿದ ಸಿಎಂ
ಇನ್ನು ಸುದ್ದಿಗೋಷ್ಟಿ ಅಂತ್ಯದಲ್ಲಿ ಪತ್ರಕರ್ತರೊಬ್ಬರು ಕೇಳಿದ ಕುಂಕುಮದ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, 'ದೇವಸ್ಥಾನಕ್ಕೆ ಹೋಗಿದ್ದೆ. ಇಲ್ಲೇ ಪಟ್ಟಾಲಮ್ಮ ದೇವಸ್ಥಾನ ಇದೆ. ಅಲ್ಲಿ ಊರ ಜಾತ್ರೆ ಮಾಡ್ತಿದ್ರು.. ಕೆಎಂ ನಾಗರಾಜ್ ಒತ್ತಾಯ ಮಾಡಿ ನನ್ನ ಕರೆಸಿಕೊಂಡಿದ್ರು.. ಹೀಗಾಗಿ ಅಲ್ಲಿ ಹೋಗಿ ದೇವಸ್ಥಾನದಲ್ಲಿ ದರ್ಶನ ಮಾಡಿಕೊಂಡು ಬಂದೆ ಎಂದು ಹೇಳಿದರು.
ಸಾಮಾನ್ಯವಾಗಿ ಸಿಎಂ ಸಿದ್ದರಾಮಯ್ಯ ಹಣೆಗೆ ಕುಂಕುಮ ಧರಿಸುವುದು ಅಪರೂಪ.. ಯಾವುದೇ ದೇಗುಲಗಳಿಗೆ ಹೋದರೂ ತಿಲಕ ಅಥವಾ ಕುಂಕುಮ ಧರಿಸುವುದಿಲ್ಲ.. ಪೂಜಾರಿಗಳೇ ಕುಂಕುಮ ಇಡಲು ಮುಂದಾದರೂ ಸಿದ್ದರಾಮಯ್ಯ ಬೇಡ ಎನ್ನುತ್ತಾರೆ. ಈ ಕುರಿತು ಸಾಕಷ್ಟು ವಿಡಿಯೋಗಳು ಈ ಹಿಂದೆ ವೈರಲ್ ಆಗಿವೆ. ಆದರೆ ಇದೀಗ ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಕುರಿತು ಮಾತನಾಡುವಾಗ ಕುಂಕುಮ ಧರಿಸಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಎಲ್ಲರ ಗಮನ ಸೆಳೆದಿದೆ.
Advertisement