
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಪುರುಷರನ್ನು ವಂಚಿಸುತ್ತಿದ್ದ ಮಹಿಳೆಯೊಬ್ಬಳಿಗೆ ನಗರದ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಕಸ್ಟಡಿ ವಿಚಾರಣೆ ಅಗತ್ಯವಿರುವುದರಿಂದ ಆಕೆಯನ್ನು ವಶಕ್ಕೆ ಪಡೆಯಲಾಗಿದೆ.
ಇತ್ತೀಚಿನ ಪ್ರಕರಣದಲ್ಲಿ ಗೋವಿಂದರಾಜನಗರದ ನಿವಾಸಿ ವಿನುತಾ ಎಂ.ಇ., ಇಸ್ರೋದಲ್ಲಿ ಗ್ರಾಫಿಕ್ ಡಿಸೈನರ್ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ವ್ಯಕ್ತಿಯೊಬ್ಬರಿಂದ 1.03 ಕೋಟಿ ರೂಪಾಯಿ ವಂಚಿಸಿದ್ದಳು.
ಕೋರ್ಟ್ ನೀಡಿರುವ ನೋಟಿಸ್ ಪ್ರಕಾರ, ಅರ್ಜಿದಾರರು ಮೇ 9 ರಂದು ತನಿಖಾ ಅಧಿಕಾರಿ ಮುಂದೆ ಹಾಜರಾಗಬೇಕಾಗಿತ್ತು. ಅರ್ಜಿದಾರರಿಗೆ ಹಾಜರಾಗಲು ನೋಟಿಸ್ ನೀಡಲಾಗಿತ್ತು, ಆದರೆ ವಿನುತಾ ನೊಟೀಸ್ ಗೆ ಕ್ಯಾರೇ ಅಂದಿರಲಿಲ್ಲ. ಯಾವುದೇ ವ್ಯಕ್ತಿಗೆ ಅಂತಹ ನೋಟಿಸ್ ನೀಡಿದಾಗ, ಆ ವ್ಯಕ್ತಿ ಸೂಚನೆಯನ್ನು ಪಾಲಿಸುವುದು ಕರ್ತವ್ಯವಾಗಿರುತ್ತದೆ ಎಂದು ಹೇಳುವ BNSS ನ ಸೆಕ್ಷನ್ 35(4) ಉಲ್ಲೇಖಿಸುತ್ತದೆ. ಅರ್ಜಿದಾರರು ನಿರೀಕ್ಷಣಾ ಜಾಮೀನಿಗೆ ಅರ್ಹರಲ್ಲ ಎಂದು ನ್ಯಾಯಾಲಯ ದೃಢವಾಗಿ ಅಭಿಪ್ರಾಯಪಟ್ಟಿದೆ ಎಂದು 66 ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶ ಜಯಪ್ರಕಾಶ್ ಎ ಹೇಳುತ್ತಾರೆ.
ಅರ್ಜಿದಾರರು ಇಸ್ರೋ ಹೆಸರಿನಲ್ಲಿ ಸೃಷ್ಟಿಸಿದ ನಕಲಿ ನೇಮಕಾತಿ ಪತ್ರಗಳನ್ನು ಅವರಿಂದ ವಶಪಡಿಸಿಕೊಳ್ಳಬೇಕೆಂದು ಐಒ ವರದಿ ಸೂಚಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರು ಕೊಳ್ಳೇಗಾಲ ಪೊಲೀಸ್ ಠಾಣೆ ಮತ್ತು ಚಿಕ್ಕಮಗಳೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಇದೇ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳುತ್ತದೆ. ಇದು ಅವರು ನಿಯಮಿತ ಅಪರಾಧಿ ಎಂದು ತೋರಿಸುತ್ತದೆ. ಈ ಸಂದರ್ಭಗಳಲ್ಲಿ, ಅವರು ಜಾಮೀನಿನ ಮೇಲೆ ಬಿಡುಗಡೆಯಾದರೆ, ಇದೇ ರೀತಿ ಅಪರಾಧಗಳನ್ನು ಮುಂದುವರಿಸುವ ಸಾಧ್ಯತೆಯಿದೆ ಅಥವಾ ಪರಾರಿಯಾಗುವ ಸಾಧ್ಯತೆಯೂ ಇದೆ, ಹೀಗಾಗಿ ನಿರೀಕ್ಷಣಾ ಜಾಮೀನು ಪಡೆಯಲು ಅರ್ಹತೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ.
ದೂರುದಾರರು ಹೇಳುವುದೇನು?
ದೂರುದಾರ ಸಂಜಯ್ ಎನ್, ಲಗ್ಗೆರೆಯಲ್ಲಿರುವ ತಮ್ಮ ಮನೆಯ ನೆಲಮಹಡಿಯನ್ನು ಆರೋಪಿ ವಿನುತಾಗೆ ಬಾಡಿಗೆಗೆ ನೀಡಿದ್ದರು. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ವಿನುತಾ ನಾಗರಭಾವಿಯಲ್ಲಿರುವ ಸಂಜಯ್ ನಿವಾಸಕ್ಕೆ ಬಂದು ಇಸ್ರೋದಲ್ಲಿ ಗ್ರಾಫಿಕ್ ಡಿಸೈನರ್ ಕೆಲಸ ಪಡೆಯಲು ಮನವೊಲಿಸಿ, ಅವರಿಂದ 37 ಲಕ್ಷ ರೂಪಾಯಿಗಳನ್ನು ಪಡೆದರು. ಇದಕ್ಕಾಗಿ ವಿಕ್ಟೋರಿಯಾ ಆಸ್ಪತ್ರೆಯಿಂದ ಫಿಟ್ನೆಸ್ ಪ್ರಮಾಣಪತ್ರವನ್ನು ಸಹ ಪಡೆದಿದ್ದರು. ಆದರೆ ಅವರಿಗೆ ಯಾವುದೇ ನೇಮಕಾತಿ ಆದೇಶ ಸಿಗಲಿಲ್ಲ.
ಪ್ರಶ್ನಿಸಿದಾಗ, ನೇಮಕಾತಿ ಆದೇಶವನ್ನು ನವೆಂಬರ್ 5, 2024 ರಂದು ರವಾನಿಸಲಾಗಿದೆ. ಹೆಚ್ಚುವರಿಯಾಗಿ 23 ಲಕ್ಷ ರೂಪಾಯಿಗಳನ್ನು ನಗದು ರೂಪದಲ್ಲಿ ಪಾವತಿಸಬೇಕಾಗುತ್ತದೆ. ಪಾವತಿಸದಿದ್ದರೆ, ಅವರು ಹಿಂದೆ ಪಾವತಿಸಿದ ಮೊತ್ತವನ್ನು ಹಿಂತಿರುಗಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾಳೆ.
ಆರೋಪಿ ಸಂಜಯ್ ಅವರನ್ನು ಇಸ್ರೋಗೆ ಕರೆದೊಯ್ದು, ಸುಪ್ರಥೋ ಪಾಥೋ, ರೆಡ್ಡಪ್ಪ, ರಾಜೇಂದ್ರ ಎ.ಕೆ. ಮತ್ತು ಅನಿಲ್ ಕುಮಾರ್ ಅವರಿಗೆ ಪರಿಚಯಿಸಿದ್ದಾಳೆ, ಅವರು ಕೂಡ ಮೊತ್ತವನ್ನು ಪಾವತಿಸುವಂತೆ ಸಂಜಯ್ ಗೆ ಒತ್ತಾಯಿಸಿದ್ದಾರೆ. ಕೆಲಸ ಸಿಗುತ್ತದೆ ಎಂದು ನಂಬಿ ಸಂಜಯ್ 23 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದಾರೆ. ಕಾಲಾನಂತರದಲ್ಲಿ, ಸಂಜಯ್ ಒಟ್ಟು 1.03 ಕೋಟಿ ರೂಪಾಯಿಗಳನ್ನು ಕಂತುಗಳ ರೂಪದಲ್ಲಿ ನೀಡಿದ್ದಾರೆ. ಆದರೆ ಆರೋಪಿಗಳು ಕೆಲಸ ಕೊಡಿಸಲೂ ಇಲ್ಲ, ಸಂಜಯ್ ಹಣವನ್ನು ಹಿಂತಿರುಗಿಸಲೂ ಇಲ್ಲ.
ಕೊನೆಗೆ ಸಂಜಯ್ ಕಳೆದ ಮೇ ಮೊದಲ ವಾರದಲ್ಲಿ ಪ್ರಭಾಕರ್, ವಿನುತಾ ಎಂ.ಇ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದರು.
Advertisement