
ಬೆಂಗಳೂರು: ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಬೃಹತ್ ಕಾಮಗಾರಿ ನಡೆಯುತ್ತಿರುವುದರಿಂದ ಮಿಲ್ಲರ್ಸ್ ರಸ್ತೆ ಹಾಗೂ ವಸಂತನಗರ ಕಡೆಯಿಂದ ಬರುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ದುಪ್ಪಟ್ಟು ಹಣ ಪೀಕುವ ಆಟೋ ಚಾಲಕರು ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದ ನಿಲ್ದಾಣ ಅನೇಕರಿಗೆ, ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ಹೊರಗಡೆಯಿಂದ ಬರುವ ಪ್ರಯಾಣಿಕರಿಗೆ ದುಃಸ್ವಪ್ನವಾಗಿ ಮಾರ್ಪಟ್ಟಿದೆ.
ಪ್ರಯಾಣಿಕರನ್ನು ಇಳಿಸಿ, ಹಾಗೆಯೇ ತೆರಳುವ ಆಟೋ ಚಾಲಕರು:
ನಿರ್ಮಾಣ ಕಾಮಗಾರಿಯಿಂದಾಗಿ ಮುಖ್ಯ ಪ್ರವೇಶ ದ್ವಾರವನ್ನು ನಿರ್ಬಂಧಿಸಲಾಗಿದೆ. ಇದರಿಂದಾಗಿ ಹೆಚ್ಚಿನ ಆಟೋ ಮತ್ತು ಕ್ಯಾಬ್ ಚಾಲಕರು ಈಗ ರೈಲುಗಳು ಮಿಲ್ಲರ್ಸ್ ರಸ್ತೆಯ ಕಡೆಯಿಂದ ಕಾರ್ಯನಿರ್ವಹಿಸುತ್ತವೆ ಅಂತಾ ಹೇಳಿ ಪ್ರಯಾಣಿಕರನ್ನು ಹಿಂಬದಿಯ ಗೇಟ್ನಲ್ಲಿ ಇಳಿಸುತ್ತಿವೆ. ಆದರೆ ಇಲ್ಲಿಯೂ ಕಾಮಗಾರಿ ನಡೆಯುತ್ತಿದ್ದು, ಪ್ಲಾಟ್ ಫಾರಂಗೆ ಸರಿಯಾಗಿ ತೆರಳಲು ಸಾಧ್ಯವಾಗುತ್ತಿಲ್ಲ. ಆಟೋ ಚಾಲಕರು ಪ್ರಯಾಣಿಕರನ್ನು ಇಳಿಸಿ, ಹಾಗೆಯೇ ಹೊರಡುತ್ತಾರೆ.
ಹೀಗಾಗಿ ಅನೇಕರು - ವಿಶೇಷವಾಗಿ ನಿಲ್ದಾಣದ ಬಗ್ಗೆ ಗೊತ್ತಿಲ್ಲದವರು ಸರಿಯಾದ ದಾರಿ ತಿಳಿಯದೆ ತೀವ್ರವಾಗಿ ಪರದಾಡುವಂತಾಗಿದೆ. ಭಾರವಾದ ಲಗೇಜ್ ಗಳು, ವೃದ್ದರು ಅಥವಾ ಮಕ್ಕಳೊಂದಿಗೆ ಬಂದಿರುವ ಪ್ರಯಾಣಿಕರು ಯಾವುದೇ ನೆರವು ಅಥವಾ ಮಾರ್ಗದರ್ಶನ ಸಿಗದೆ ಹೆಣಗಾಡುವಂತಾಗಿದೆ.
ಕಳಪೆ ಸ್ಥಿತಿಯಲ್ಲಿ ಪ್ಲಾಟ್ ಫಾರ್ಮ್:
"ಪ್ಲಾಟ್ಫಾರ್ಮ್ 1 ಮತ್ತು 2 ಎರಡೂ ಕಳಪೆ ಸ್ಥಿತಿಯಲ್ಲಿವೆ. ಎರಡೂ ಬದಿಯ ಕಟ್ಟಡಗಳನ್ನು ಕೆಡವಲಾಗಿದೆ. ಸಂಪೂರ್ಣ ವಾಕ್ವೇಗೆ ಯಾವುದೇ ಮೇಲ್ಛಾವಣಿ ಇಲ್ಲ. ಅಲ್ಲಿ ಯಾವುದೇ ಕುರ್ಚಿಗಳಿಲ್ಲ. ವೃದ್ಧರು ಪ್ರತಿದಿನ ತಾಸುಗಟ್ಟಲೇ ತುಂಬಾ ಕಷ್ಟಪಡುತ್ತಾರೆ ಎಂದು ಇತ್ತೀಚಿಗೆ ಕೇರಳದಿಂದ ತನ್ನ ವೃದ್ಧ ಪೋಷಕರೊಂದಿಗೆ ನಿಲ್ದಾಣಕ್ಕೆ ಬಂದ ಪ್ರಯಾಣಿಕ ಅನಿಲ್ ಕುಮಾರ್ ಹೇಳಿದರು.
ತುರ್ತಾಗಿ ತಾತ್ಕಾಲಿಕ ಪರಿಹಾರಕ್ಕೆ ಒತ್ತಾಯ:
ಈ ಸಂಬಂಧ "ರೈಲ್ಮದಾದ್ (RailMadad)ಮೂಲಕ ಮೊದಲು ದೂರನ್ನು ಕಳುಹಿಸಲಾಗಿದೆ. ಆದರೆ ಸರಿಯಾದ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ತುರ್ತಾಗಿ ತಾತ್ಕಾಲಿಕ ಪರಿಹಾರಕ್ಕೆ ಒತ್ತಾಯಿಸಿ ರೈಲ್ವೇ ಮಂಡಳಿಗೆ ಎರಡನೇ ದೂರನ್ನು ಕಳುಹಿಸಲಾಗಿದೆ ಎಂದು ಕುಮಾರ್ TNIE ಗೆ ತಿಳಿಸಿದರು.
ಕಂಟೋನ್ಮೆಂಟ್ ರೈಲು ನಿಲ್ದಾಣ ನಿರ್ಮಾಣ ಮುಗಿಯಲು ವರ್ಷಗಳು ಬೇಕಾಗಬಹುದು. ತಾತ್ಕಾಲಿಕ ಶೆಡ್ಗಳು, ಹಿರಿಯರಿಗೆ ಬ್ಯಾಟರಿ ವಾಹನಗಳು, ಹೆಚ್ಚಿನ ಆಸನಗಳು ಮತ್ತು ಸ್ಪಷ್ಟ ಮಾಹಿತಿ ಫಲಕಗಳನ್ನೊಳಗೊಂಡ ತಾತ್ಕಾಲಿಕ ಪರಿಹಾರಗಳನ್ನು ಸರ್ಕಾರ ಒದಗಿಸಬೇಕು ಎಂದು ಅವರು ಸಲಹೆ ನೀಡಿದರು.
ರಸ್ತೆ ಮೇಲೆಲ್ಲಾ ಕೊಳಕು ಚರಂಡಿ ನೀರು:
ಸಾಮಾನ್ಯವಾಗಿ, ಪ್ಲಾಟ್ಫಾರ್ಮ್ 2 ರ ಪ್ರವೇಶವು ನೀರಿನಿಂದ ತುಂಬಿರುತ್ತದೆ, ಕೊಳಕು ಚರಂಡಿ ನೀರು ರಸ್ತೆಯ ಮೇಲೆ ತುಂಬಿರುತ್ತದೆ. ಮಿಲ್ಲರ್ಸ್ ರಸ್ತೆ ಮೂಲಕ ಆಗಮಿಸುವ ಜನರು ಇಂತಹ ದಾರಿ ಮೂಲಕವೇ ರೈಲು ನಿಲ್ದಾಣದ ಒಳಗಡೆ ಹೋಗಬೇಕು. ಆಸನಗಳ ಸಂಖ್ಯೆಯೂ ಕಡಿಮೆಯಿದೆ ಎಂದು ಪ್ರಯಾಣಿಕರು ತಿಳಿಸಿದರು. ಹಿರಿಯ ನಾಗರಿಕರು ಅಥವಾ ಅನಾರೋಗ್ಯದ ಪ್ರಯಾಣಿಕರಿಗೆ ನಿಲ್ದಾಣ ಪ್ರವೇಶಿಸುವ ಮುನ್ನವೇ ಸಮಸ್ಯೆಗಳು ಆರಂಭವಾಗುತ್ತವೆ ಎನ್ನುತ್ತಾರೆ ಸಾಫ್ಟ್ ವೇರ್ ಎಂಜಿನಿಯರ್ ಮಹೇಶ್ ಎಂ.
ಪ್ರಯಾಣಿಕರನ್ನು ವಂಚಿಸುವ ಆಟೋ ಚಾಲಕರು: ಆಟೋ ಚಾಲಕರು ಪ್ರಯಾಣಿಕರನ್ನು ಮೂರ್ಖರನ್ನಾಗಿ ಮಾಡುತ್ತಾರೆ ಮತ್ತು ಹೆಚ್ಚಿನ ದರವನ್ನು ವಿಧಿಸುತ್ತಾರೆ, ರಸ್ತೆಗಳು ಕೆಟ್ಟ ಸ್ಥಿತಿಯಲ್ಲಿವೆ, ಆದರೆ ಪ್ರಯಾಣಿಕರನ್ನು ಕೆಲವು ಮೀಟರ್ ದೂರದಲ್ಲಿಯೇ ಇಳಿಸಿ, ಮುಂದೆ ಹೋಗಲು ನಿರಾಕರಿಸುತ್ತಾರೆ. ಎಷ್ಟೋ ಜನರಿಗೆ ಜನರಿಗೆ ದೂರ ಎಷ್ಟಿದೆ ಎಂಬುದು ಗೊತ್ತಿರುವುದಿಲ್ಲ. ಹಣ ನೀಡಿದ ಬಳಿಕ ಭಾರವಾದ ಸಾಮಾನುಗಳನ್ನು ಸಾಗಿಸುವ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ.
Advertisement