

ಬೆಂಗಳೂರು: ನಗರದ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಕಾರ್ತಿಕ ಕಡೆಯ ಸೋಮವಾರ ವಿಧ್ಯುಕ್ತ ಚಾಲನೆ ದೊರೆಯಿತು.
ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮತ್ತು ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರ ಸಮ್ಮುಖದಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿದರು.
ಷರಿಷೆಯ ಪ್ರಯುಕ್ತ ದೊಡ್ಡಗಣಪತಿ ಮತ್ತು ದೊಡ್ಡ ಬಸವಣ್ಣ ದೇವಸ್ಥಾನಕ್ಕೆ ಭಕ್ತರು ಆಗಮಿಸಿ ದರ್ಶನ ಪಡೆದು, ಕಡಲೆಕಾಯಿಯನ್ನು ಪ್ರಸಾದವಾಗಿ ಸ್ವೀಕರಿಸಿದರು. ಜಾತ್ರೆಯು ನವೆಂಬರ್ 21ರವರೆಗೆ ನಡೆಯಲಿದ್ದು, ಪರಿಷೆಯಲ್ಲಿ ಕಡಲೆಕಾಯಿ ಮಾರಾಟ, ತೆಪ್ಪೋತ್ಸವ, ಸಂಗೀತ, ನೃತ್ಯ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಜಾತ್ರೆ ಹಿನ್ನೆಲೆ ಬಸವನಗುಡಿಯ ರಸ್ತೆಗಳನ್ನು ದೀಪಗಳಿಂದ ಅಲಂಕರಿಸಲಾಗಿದ್ದು, ದೇವಾಲಯಗಳನ್ನು ಹೂವಿನ ಅಲಂಕಾರಗಳಿಂದ ಅಲಂಕರಿಸಲಾಗಿದೆ. ಬುಲ್ ಟೆಂಪಲ್ ರಸ್ತೆಯ ಸುತ್ತಲೂ ಕಡೆಯ ಘಮಲೂ ಹರಡಿದ್ದು, ಜಾತ್ರೆಯು ಲಕ್ಷಾಂತರ ಜನರ ಕಣ್ಮನ ಸೆಳೆಯುತ್ತಿದೆ.
ಇನ್ನು ಪರಿಷೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿಯವರು, ಈ ವರ್ಷದ ಪರಿಷೆ ಪ್ಲಾಸ್ಟಿಕ್ ಮುಕ್ತವಾಗಿದ್ದು, ಪ್ಲಾಸ್ಟಿಕ್ ಬಳಸಿದ ಯಾವುದೇ ಅಂಗಡಿಯನ್ನು ತಕ್ಷಣವೇ ಬಂದ್ ಮಾಡಲಾಗುವುದು. 700 ಪೊಲೀಸ್ ಸಿಬ್ಬಂದಿ, ಸಿಸಿಟಿವಿ ಕ್ಯಾಮೆರಾಗಳು, ಶೌಚಾಲಯಗಳು ಮತ್ತು ಸ್ವಯಂಸೇವಕರು ಸುರಕ್ಷತೆ ಮತ್ತು ಸ್ವಚ್ಛತೆಯನ್ನು ಖಚಿತಪಡಿಸಿಕೊಳ್ಳುವುದರೊಂದಿಗೆ ಐದು ಲಕ್ಷ ಪ್ರವಾಸಿಗರನ್ನು ನಾವು ನಿರೀಕ್ಷಿಸುತ್ತೇವೆ. ಕಾರ್ಯಕ್ರಮದ ನಂತರ ಒಂದೇ ಒಂದು ಕಡಲೆಕಾಯಿ ಸಿಪ್ಪೆಯೂ ಉಳಿಯದಂತೆ ಸ್ವಚ್ಛತೆ ಕಾಪಾಡಿಕೊಳ್ಳಲಾಗುವುದು ಎಂದು ಹೇಳಿದರು.
ಕಡಲೆಕಾಯಿ ಪರಿಷೆ ಬೆಂಗಳೂರಿನ ಪ್ರಮುಖ ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾಗಿದೆ, ಈ ಬಾರಿ ಪರಿಷೆಗೆ ಮತ್ತಷ್ಟು ಮೆರುಗು ನೀಡಲು, ಮೈಸೂರು ದಸರಾ ಮಾದರಿಯಲ್ಲಿ ಇಡೀ ಪ್ರದೇಶಕ್ಕೆ ವಿಶೇಷ ದೀಪಾಲಂಕಾರವನ್ನು ವ್ಯವಸ್ಥೆಗೊಳಿಸಲಾಗಿದೆ. ಇದು ಪರಿಷೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ರೈತರು ಹಾಗೂ ವ್ಯಾಪಾರಿಗಳ ಹಿತ ಕಾಯುವುದು ನಮ್ಮ ಆದ್ಯತೆಯಾಗಿದ್ದು, ಕಳೆದ ಒಂದು ವರ್ಷದಿಂದ ಕಡಲೆಕಾಯಿ ವ್ಯಾಪಾರಿಗಳಿಂದ ಯಾವುದೇ ರೀತಿಯ ಶುಲ್ಕವನ್ನು ವಿಧಿಸದೆ, ಅವರಿಗೆ ವ್ಯಾಪಾರ ಮಾಡಲು ಸಂಪೂರ್ಣ ಉಚಿತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸಂಸದ ತೇಜಸ್ವಿ ಸೂರ್ಯ ಅವರು ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಪರಿಷೆಗೆ ಕರೆತರುವಂತೆ ನಾನು ಒತ್ತಾಯಿಸುತ್ತೇನೆ. ಮಕ್ಕಳಿಗೆ ನಮ್ಮ ಕಥೆಗಳು, ನಮ್ಮ ಸಂಸ್ಕೃತಿ ಮತ್ತು ನಮ್ಮ ಸಂಪ್ರದಾಯಗಳ ಸಾರವನ್ನು ತೋರಿಸಿ. ಬೆಂಗಳೂರಿನಂತಹ ಮಹಾನಗರದಲ್ಲಿ ಮಕ್ಕಳು ಹಳ್ಳಿಯ ಜಾತ್ರೆಯ ಮೋಡಿಯನ್ನು ಅನುಭವಿಸಲು ಇದು ಒಂದು ಮಾರ್ಗವಾಗಿದೆ ಎಂದು ಹೇಳಿದರು.
ಜೆಡಿಎಸ್ ಎಂಎಲ್ಸಿ ಟಿ ಎ ಶರವಣ ಅವರು ಮಾತನಾಡಿ, ಇದು ಕೇವಲ ಕಡಲೆಕಾಯಿ ಮಾರಾಟವಲ್ಲ. ಇದು ಧಾರ್ಮಿಕ ಆಚರಣೆ, ರೈತರ ಹಬ್ಬ ಮತ್ತು ಸಂಪ್ರದಾಯದ ಪುನರುಜ್ಜೀವನ. ರಾಜ್ಯದ ಒಳಗಿನ ಮತ್ತು ಹೊರಗಿನ ರೈತರು ತಮ್ಮ ಉತ್ಪನ್ನಗಳೊಂದಿಗೆ ಪರಿಷೆಗೆ ಆಗಮಿಸುತ್ತಾರೆ, ಕೃತಜ್ಞತೆಯ ಅಭಿವ್ಯಕ್ತಿಯಾಗಿ ದೇವರಿಗೆ ಕಡಲೆಕಾಯಿಯನ್ನು ಅರ್ಪಿಸುತ್ತಾರೆಂದು ತಿಳಿಸಿದರು.
Advertisement