

ಬೆಂಗಳೂರು: ರಾಜ್ಯದಲ್ಲಿ ಉತ್ತಮ ಜನಪ್ರತಿನಿಧಿಗಳನ್ನು ರೂಪಿಸಲು ವಿಧಾನಸಭೆ ಸಚಿವಾಲಯದಿಂದ ಒಂದು ವರ್ಷದ ತರಬೇತಿ ಕೋರ್ಸ್ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ತಿಳಿಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ ನಿನ್ನೆ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಸಹಯೋಗದಲ್ಲಿ “ರಾಷ್ಟ್ರೀಯ ಪತ್ರಿಕಾ ದಿನಾಚರಣೆ” ಅಂಗವಾಗಿ ಹಮ್ಮಿಕೊಳ್ಳಲಾದ ‘ಹೆಚ್ಚುತ್ತಿರುವ ಸುಳ್ಳು ಸುದ್ದಿಗಳ ನಡುವೆ ಮಾಧ್ಯಮಗಳ ವಿಶ್ವಾಸಾರ್ಹತೆಯ ರಕ್ಷಣೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಿಕೋದ್ಯಮ ಕೋರ್ಸ್ ಮುಗಿಸಿದವರು ಪತ್ರಕರ್ತರಾಗುತ್ತಾರೆ. ಕಾನೂನು ಓದಿದವರು ವಕೀಲರಾಗುತ್ತಾರೆ. ಅದೇ ರೀತಿ ಯಾವುದೇ ಪದವಿ ಮುಗಿಸಿದವರಿಗೆ ಒಂದು ವರ್ಷ ತರಬೇತಿ ನೀಡಿ ಉತ್ತಮ ನಾಯಕತ್ವ ರೂಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ತರಬೇತಿ ಕಾರ್ಯಕ್ರಮ
ಈ ತರಬೇತಿ ಕಾರ್ಯಕ್ರಮದಲ್ಲಿ 6 ತಿಂಗಳು ಥಿಯರಿ ಮತ್ತು 6 ತಿಂಗಳು ಪ್ರಾಯೋಗಿಕ ಕಾರ್ಯಕ್ರಮಗಳನ್ನು ನೀಡಲು ಅಲೋಚನೆ ಮಾಡಲಾಗಿದೆ. ಎಲ್ಲರ ವೈಯಕ್ತಿಕ ಸಲಹೆಗಳನ್ನು ನಾನು ಮುಕ್ತವಾಗಿ ಸ್ವೀಕರಿಸುತ್ತೇನೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಂಸದೀಯ ಮೌಲ್ಯಗಳನ್ನು ಎತ್ತಿಹಿಡಿಯಬೇಕಾಗಿದೆ ಎಂದು ಸಭಾಧ್ಯಕ್ಷರು ತಿಳಿಸಿದರು.
ಮುಂದಿನ ಅಧಿವೇಶನದ ವೇಳೆಗೆ ರಾಜ್ಯದ ವಿವಿಧ ಜಿಲ್ಲೆಗಳ ವಿಶ್ವವಿದ್ಯಾನಿಲಯಗಳಲ್ಲಿ ಅಭ್ಯಾಸ ಮಾಡುತ್ತಿರುವ 150 ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸದನವನ್ನು ಸಂಪೂರ್ಣವಾಗಿ ವೀಕ್ಷಿಸಲು ಅನುಕೂಲವಾಗುವಂತೆ ಅವಕಾಶವನ್ನು ಮಾಡಿಕೊಡುವ ಬಗ್ಗೆ ಚಿಂತನೆಯನ್ನು ನಡೆಸಲಾಗಿದೆ. ಇಡೀ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡುವ ಮೂಲಕ ಪತ್ರಕರ್ತರಿಗೆ ತರಬೇತಿ ನೀಡಲಾಗುವುದು ಎಂದರು.
ದೇಶವನ್ನು ಬಲಿಷ್ಠಗೊಳಿಸುವಲ್ಲಿ ಮಾಧ್ಯಮ ಕ್ಷೇತ್ರದ ಕೊಡುಗೆ ಬಹಳ ಪ್ರಮುಖವಾಗಿದೆ. ಅದೇ ರೀತಿ ಮಾಧ್ಯಮಗಳು ಸಹ ಜನರ ವಿಶ್ವಾಸವನ್ನು ಗಳಿಸುವ ನಿಟ್ಟಿನಲ್ಲಿ ನಡೆದುಕೊಳ್ಳಬೇಕು. ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕಾರ್ಯ ನಿರ್ವಹಿಸುತ್ತಿದೆ. ದೇಶದ ಸಂಸ್ಕೃತಿ, ಸಾಹಿತ್ಯವನ್ನು ಎತ್ತಿ ಹಿಡಿಯುವಲ್ಲಿ ಮಾಧ್ಯಮ ಕ್ಷೇತ್ರವು ಮಹತ್ತರ ಪಾತ್ರ ವಹಿಸಿದೆ ಎಂದು ತಿಳಿಸಿದರು.
ಸುದ್ದಿ ವಸ್ತುನಿಷ್ಠವಾಗಿರಲಿ
ಮಾಧ್ಯಮಗಳು ಸಮಾಜದ ಸ್ವಾಸ್ಥ್ಯವನ್ನು ಕದಡುವ ಕೆಲಸ ಮಾಡದೇ, ಕಾಪಾಡುವಂತಹ ಕೆಲಸ ಮಾಡಬೇಕು. ಸುಳ್ಳು ಸುದ್ದಿಗಳನ್ನು ಹರಿಬಿಡದೆ ನಿಜ ಸ್ವರೂಪವಾದ ಸತ್ಯವಾದ ಸುದ್ದಿಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಸಾಮಾಜಿಕ ಬದಲಾವಣೆ ತರುವಂತಹ ಕೆಲಸ ಮಾಡಬೇಕು. ಸುದ್ದಿಯು ಸುದ್ದಿಯ ರೂಪದಿಲ್ಲಿಯೇ ಇರಬೇಕು. ನೋಡುವುದೆಲ್ಲಾ ಸುದ್ದಿಯಾಗಬಾರದು ರಾಜಕಾರಣ ಮತ್ತು ಮಾಧ್ಯಮವು ಸಮಾಜದ ಎರಡು ಕಣ್ಣುಗಳಿದ್ದಂತೆ. ಈ ಕಣ್ಣುಗಳಿಗೆ ಹಾನಿಯಾದಾಗ ಸಮಾಜ ಕತ್ತಲೆಗೆ ದೂಡುತ್ತದೆ ಎಂದು ತಿಳಿಸಿದರು.
ಪತ್ರಕರ್ತರು ನನ್ನ ಜೀವನದಲ್ಲಿ ಪ್ರಮುಖ ಪಾತ್ರ
ನನ್ನ ವಿದ್ಯಾರ್ಥಿ ಜೀವನದಿಂದ ರಾಜಕಾರಣ ಜೀವನದವರೆಗೂ ನನ್ನ ಸಮಸ್ಯೆಗಳನ್ನು ಬಗೆಹರಿಸಲು ಪತ್ರಕರ್ತರು ಪ್ರಮುಖ ಪಾತ್ರ ವಹಿಸಿದ್ದಾರೆ. ಪತ್ರಕರ್ತರ ಸಹಕಾರದಿಂದಲೇ ಜೀವನದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲಾಗಿದೆ. ಇಂದು ಸಾಮಾಜಿಕ ಮಾಧ್ಯಮಗಳು ಬಂದ ಮೇಲೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಕ್ಷೇತ್ರಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿದೆ. ಮಾಧ್ಯಮಗಳು ಅಳಿವಿನಂಚಿಗೆ ಹೋಗುತ್ತಿವೆ. ಮಾಧ್ಯಮಗಳನ್ನು ಉಳಿಸುವ ಕಾರ್ಯ ನಡೆಸಬೇಕಿದೆ.
ಸಾಮಾಜಿಕ ಮಾಧ್ಯಮಗಳು
ಸಾಮಾಜಿಕ ಮಾಧ್ಯಮಗಳು ವಸ್ತು ಸ್ಥಿತಿಯನ್ನು ಅರಿಯದೇ ತತ್ಕ್ಷಣ ಸುದ್ದಿಗಳನ್ನು ಬಿತ್ತರಿಸುತ್ತವೆ. ಸುದ್ದಿಗಳ ನೈಜತೆಯನ್ನು ಸಹ ಗಮನಿಸುವುದಿಲ್ಲ. ಇಂತಹ ಕೆಲಸಗಳಾಗಬಾರದು. ಮುದ್ರಣ ಮಾಧ್ಯಮವಿರಲಿ ವಿದ್ಯುನ್ಮಾನ ಮಾಧ್ಯಮಗಳಿರಲಿ ಯಾವುದೇ ಮಾಧ್ಯಮಗಳಿರಲಿ ಸುದ್ದಿಯ ನೈಜತೆಯನ್ನು ಅರಿಯಬೇಕು. ಸಮಾಜದ ಶಾಂತಿಯನ್ನು ಕದಡುವ ಸುದ್ದಿಗಳನ್ನು ಬಿತ್ತರ ಮಾಡಬಾರದು. ಸತ್ಯವಾದ ಸುದ್ದಿಗಳನ್ನು ಪ್ರಕಟಿಸಿ ಜನತೆಯ ವಿಶ್ವಾಸವನ್ನು ಗಳಿಸಬೇಕು ಎಂದರು.
ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಷಾ ಖಾನಂ, ನಮ್ಮ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವ ಪತ್ರಿಕೆಗಳು ಹಾಗೂ ಸುದ್ದಿ ಸಂಸ್ಥೆಗಳ ಗುಣಮಟ್ಟವನ್ನು ಕಾಪಾಡುವ ಮತ್ತು ಸುಧಾರಿಸುವ ಉದ್ದೇಶದಿಂದ ಭಾರತೀಯ ಪತ್ರಿಕಾ ಮಂಡಳಿಯನ್ನು 1966ರ ನವೆಂಬರ್ 16ರಂದು ಸ್ಥಾಪಿಸಲಾಯಿತು. ಈ ಕಾರಣದಿಂದಾಗಿ ಪ್ರತಿ ವರ್ಷ ನವೆಂಬರ್ 16 ರಂದು ರಾಷ್ಟ್ರೀಯ ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸುತ್ತಾ, ಯುವ ಪತ್ರಿಕೋದ್ಯಮಿಗಳೇ ಮುಂದಿನ ಮಾಧ್ಯಮದ ಭವಿಷ್ಯ. ಅವರು ತಮ್ಮ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.ಇಂದು ಸುಳ್ಳು ಸುದ್ದಿಗಳ ನಡುವೆ ಮಾಧ್ಯಮಗಳ ವಿಶ್ವಾಸಾರ್ಹತೆ ಕಳೆದು ಹೋಗುತ್ತಿದೆ. ಎಲ್ಲರ ವಿಶ್ವಾಸವನ್ನು ಗಳಿಸುವಂತೆ ರಕ್ಷಣೆ ಮಾಡಬೇಕು. ಸತ್ಯದ ಪರವಾಗಿ ನ್ಯಾಯದ ಪರವಾಗಿ ಕೆಲಸ ಮಾಡಬೇಕು ಎಂದರು.
ಯಾರ ಒತ್ತಡಕ್ಕೂ ಮಣಿಯಬಾರದು. ನಿಜವಾದ, ಸತ್ಯವಾದ ಸುದ್ದಿಯನ್ನು ಜನರ ಮುಂದಿಡಲು ಹಿಂಜರಿಯಬಾರದು. ರಾಷ್ಟ್ರಪತಿಗಳ ಅವಧಿ 4 ವರ್ಷಗಳಾದರೇ ಪತ್ರಕರ್ತರ ಅವಧಿ ನಿರಂತರವಾಗಿರುತ್ತದೆ. ಸುಳ್ಳು ಸುದ್ದಿಗಳಿಂದ ಮಾಧ್ಯಮಗಳನ್ನು ರಕ್ಷಿಸುವ ಹೊಣೆ ನಿಜವಾದ ಪತ್ರಕರ್ತನ ಕೆಲಸ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಸಹ ಸುಳ್ಳು ಸುದ್ದಿಗಳ ಬಗ್ಗೆ ಬಹಳ ಕಳವಳ ವ್ಯಕ್ತಪಡಿಸಿದ್ದಾರೆ. ಸುಳ್ಳು ಸುದ್ದಿಗಳನ್ನು ಹರಿ ಬಿಡುವವರ ವಿರುದ್ದ ಹೋರಾಡಬೇಕು. ಯಾರೇ ಆಗಲಿ ಸುಳ್ಳು ಸುದ್ದಿಗಳನ್ನು ಹರಿಬಿಡಬಾರದು. ನಿಜವಾದ ಸುದ್ದಿಗಳನ್ನು ನೀಡುವುದರ ಮೂಲಕ ಜನರ ವಿಶ್ವಾಸರ್ಹತೆಯನ್ನು ಗಳಿಸಿ, ಸಮಾಜದಲ್ಲಿ ಸುಧಾರಣೆ ತನ್ನಿ ಎಂದು ಯುವ ಪತ್ರಕರ್ತರಿಗೆ ಸಲಹೆಯಿತ್ತರು.
ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನ ಅಧ್ಯಕ್ಷ ಆರ್. ಶ್ರೀಧರ್ ಅವರು ಮಾತನಾಡುತ್ತಾ, ಸತ್ಯವನ್ನು ಹೇಗೆ ಹೊರತರಬೇಕು ಎಂಬ ಪಾಠ ನಾವು ಕಲಿಯಬೇಕು. ಇಂದಿನ ಡಿಜಿಟಲ್ ಮಾಧ್ಯಮಗಳ ಯುಗದಲ್ಲಿ ನಾವುಗಳು ನಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕಾಗಿದೆ. ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಮಾತ್ರ ಮಾಧ್ಯಮಗಳು ಹೆಚ್ಚು ಸುದ್ದಿಯನ್ನು ನೋಡುತ್ತಿವೆ. ಆದರೆ ಇದು ಯಾಕೆ ರಾಜಸ್ಥಾನ, ಉತ್ತರ ಪ್ರದೇಶ ಇನ್ನಿತರೆ ಉತ್ತರ ಭಾರತದ ಕಡೆ ಇಲ್ಲ ಎಂದು ಪ್ರಶ್ನಿಸಿದರು.
ಮಾಧ್ಯಮ ಸಂಸ್ಥೆಗಳ ಮಾಲಿಕತ್ವದ ಒತ್ತಡ ಇಂದು ನಿಜವಾದ ಪತ್ರಕರ್ತರನ ಮೇಲೆ ಬೀರುತ್ತಿದೆ. ಇದರಿಂದ ಹೊರಬರಬೇಕು. ತಪ್ಪನ್ನು ತಪ್ಪು ಸರಿಯಾದದ್ದನ್ನು ಸರಿ ಎಂದು ಹೇಳಬೇಕು. ಅದು ನಿಜವಾದ ಮಾಧ್ಯಮದ ಕೆಲಸವಾಗಿದೆ. ಒಂದು ಉತ್ತಮವಾದ ದೇಶವನ್ನು ಕಟ್ಟುವ ಜವಾಬ್ದಾರಿ ಮಾಧ್ಯಮದ ಮೇಲೆದೆ ಎಂದು ಅವರು ತಿಳಿಸಿದರು.
Advertisement