
ಹಾಸನ: ಕರ್ನಾಟಕ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಜಾತಿ ಗಣತಿ ಮುಂದುವರೆದಿದ್ದು, ಅತ್ತ ಹಾಸನದಲ್ಲಿ ಸರ್ವೇ ಕಾರ್ಯಕ್ಕಾಗಿ ಬಂದಿದ್ದ ಶಿಕ್ಷಕಿ ಮೇಲೆ ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ವರದಿಯಾಗಿದೆ.
ಹಾಸನ ಜಿಲ್ಲೆಯ ಬೇಲೂರಿನ ನೆಹರುನಗರದಲ್ಲಿ ಈ ಘಟನೆ ನಡೆದಿದ್ದು, ಜಾತಿ ಗಣತಿಗೆ ತೆರಳಿದ್ದ ಶಿಕ್ಷಕಿ ಮೇಲೆ ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ಮಾಡಿವೆ.
ಶಿಕ್ಷಕಿಯ ರಕ್ಷಣೆಗೆ ಬಂದ ಅವರ ಪತಿ ಸೇರಿ ಏಳು ಸಾರ್ವಜನಿಕರ ಮೇಲೂ ನಾಯಿಗಳು ಅಟ್ಯಾಕ್ ಮಾಡಿವೆ. ಪರಿಣಾಮ ಶಿಕ್ಷಕಿ ಅಲ್ಲದೆ ಇತರೆ 7 ಮಂದಿ ಕೂಡ ಗಾಯಗೊಂಡಿದ್ದಾರೆ.
ಬೇಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಚಿಕ್ಕಮ್ಮನವರ ಮುಖ, ಕೈ ಕಾಲಿಗೆ ಬೀದಿ ನಾಯಿಗಳು ಕಚ್ಚಿದ್ದು, ಶಿಕ್ಷಕಿ ರಕ್ಷಿಸಲು ಮುಂದಾಗಿದ್ದ ಅವರ ಪತಿ ಶಿವಕುಮಾರ್ ಸೇರಿದಂತೆ ಇನ್ನು 7 ಜನರ ಮೇಲೆ ನಾಯಿಗಳು ದಾಳಿ ಮಾಡಿವೆ. ಸದ್ಯ ತಾಲೂಕು ಆಸ್ಪತ್ರೆಯಲ್ಲಿ ಶಿಕ್ಷಕಿ ಸೇರಿದಂತೆ ಎಲ್ಲಾ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮೂಲಗಳ ಪ್ರಕಾರ ಶಿಕ್ಷಕಿ ಚಿಕ್ಕಮ್ಮಗೆ ನೀಡಿದ್ದ ಸಮೀಕ್ಷೆ ಅವಧಿ ಇಂದು ಕೊನೆಯಾಗಿತ್ತು. ಅವರಿಗೆ ನೀಡಿದ್ದ ಮನೆಗಳ ಪೈಕಿ 3 ಮನೆಗಳ ಸಮೀಕ್ಷೆ ಬಾಕಿ ಇತ್ತು. ನವೀನ್ ಎಂಬುವರ ಮನೆ ಸಮೀಕ್ಷೆಗೆ ಚಿಕ್ಕಮ್ಮ ತೆರಳಿದ್ದು, ಈ ವೇಳೆ 10ಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿವೆ.
ಪತ್ನಿ ರಕ್ಷಿಸಲು ಮುಂದಾದ ಪತಿ ಶಿವಕುಮಾರ್ಗೂ ನಾಯಿಗಳು ಕಚ್ಚಿವೆ. ಚಿಕ್ಕಮ್ಮ ಮತ್ತು ಪತಿ ಶಿವಕುಮಾರ್ ರಕ್ಷಣೆಗೆ ಮುಂದಾಗಿದ್ದ ಧರ್ಮ, ಪೃಥ್ವಿ ಮತ್ತು ಸಚಿನ್ ಸೇರಿದಂತೆ 7 ಜನರ ಮೇಲೂ ಅಟ್ಯಾಕ್ ಮಾಡಿವೆ.
ಅಷ್ಟೇ ಅಲ್ಲದೆ ಅಲ್ಲೇ ಆಟವಾಡುತ್ತಿದ್ದ 5 ವರ್ಷದ ಬಾಲಕ ಕಿಶನ್ಗೂ ನಾಯಿಗಳು ಕಚ್ಚಿವೆ. ಸದ್ಯ ತಾಲೂಕಾಸ್ಪತ್ರೆಯಲ್ಲಿ ಎಲ್ಲಾ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. ಇದೇ ವೇಳೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಬೇಲೂರು ಶಾಸಕ ಹೆಚ್.ಕೆ.ಸುರೇಶ್, ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.
Advertisement