
ಚಿಕ್ಕಬಳ್ಳಾಪುರ: ಇದೇ ಮೊದಲ ಬಾರಿಗೆ ತೆರಿಗೆ ವಸೂಲಾತಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಬೆಂಗಳೂರು ಗ್ರಾಮಾಂತರ ಮತ್ತು ದಕ್ಷಿಣ ಕನ್ನಡ ನಂತರದ ಸ್ಥಾನದಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ತಿ ಮೌಲ್ಯಮಾಪನದ ಆಧಾರದ ಮೇಲೆ 2025–26ಕ್ಕೆ ಒಟ್ಟು 29.81 ಕೋಟಿ ರೂ.ಗಳ ಗುರಿಯನ್ನು ನಿಗದಿಪಡಿಸಲಾಗಿದ್ದು, ಅದರಲ್ಲಿ 16.35 ಕೋಟಿ ರೂ.ಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ. ಇದುವರೆಗೆ ಒಟ್ಟು 61,200 ರಶೀದಿಗಳನ್ನು ಸೃಜಿಸಲಾಗಿದೆ, ತೆರಿಗೆ ವಸೂಲಾತಿಯು ಆಯಾ ಗ್ರಾಮ ಪಂಚಾಯಿತಿಗಳ ಪ್ರಾಥಮಿಕ ಕರ್ತವ್ಯ ಎಂದು ಅವರು ಹೇಳಿದರು.
ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಥಮಬಾರಿಗೆ ಗ್ರಾಮ ಪಂಚಾಯಿತಿ ಆಸ್ತಿ ತೆರಿಗೆ ವಸೂಲಾತಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ಮೊದಲ ಸ್ಥಾನ ಪಡೆದಿದೆ. ಇದರ ಶ್ರೇಯಸ್ಸು ಇಡೀ ತಂಡಕ್ಕೆ, ವಿಶೇಷವಾಗಿ ಪಂಚಾಯತ್ ಬಿಲ್ ಕಲೆಕ್ಟರ್ಗಳು, ಕಾರ್ಯದರ್ಶಿಗಳು ಮತ್ತು ಅವರ ಮೇಲಧಿಕಾರಿಗಳಿಗೆ ಸಲ್ಲುತ್ತದೆ" ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ನವೀನ್ ಭಟ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಸೆಪ್ಟೆಂಬರ್ ಅಂತ್ಯದ ವೇಳೆಗೆ, ಜಿಲ್ಲೆ ತನ್ನ ಗುರಿಯ ಶೇಕಡಾ 54.82 ರಷ್ಟು ಸಾಧಿಸಿ ಅಗ್ರಸ್ಥಾನದಲ್ಲಿದೆ. ಬೆಂಗಳೂರು ಗ್ರಾಮಾಂತರವು ಶೇ. 54 ರಷ್ಟು ಸಂಗ್ರಹದೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ದಕ್ಷಿಣ ಕನ್ನಡವು ಶೇ. 51.45 ರಷ್ಟು ಸಂಗ್ರಹಿಸಿ ಮೂರನೇ ಸ್ಥಾನದಲ್ಲಿದೆ.
ಗ್ರಾಮ ಪಂಚಾಯಿತಿಗಳಿಂದ ಸಂಗ್ರಹಿಸಲಾದ ತೆರಿಗೆಯನ್ನು ಸ್ಥಳೀಯ ಅಭಿವೃದ್ಧಿ ಮತ್ತು ಆಡಳಿತಾತ್ಮಕ ವೆಚ್ಚಗಳಿಗೆ ಬಳಸಿಕೊಳ್ಳಲಾಗುತ್ತಿದೆ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ಸಬಲೀಕರಣ, ಸ್ವಾವಲಂಬನೆ ಮತ್ತು ಸುಧಾರಿತ ಸಾರ್ವಜನಿಕ ಸೇವೆಗಳಿಗೆ ಕೊಡುಗೆ ನೀಡಲಾಗುತ್ತಿದೆ ಎಂದು ಡಾ. ನವೀನ್ ಹೇಳಿದರು.
ಪಂಚಾಯತ್ ಮಟ್ಟದಲ್ಲಿ, ಚಿಂತಾಮಣಿ ತಾಲ್ಲೂಕಿನ ನಂದಿಗನಹಳ್ಳಿ ಗ್ರಾಮ ಪಂಚಾಯಿತಿಯು ಶೇ. 90.48 ರಷ್ಟು ತೆರಿಗೆ ಸಂಗ್ರಹ ದರದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಹಣಕಾಸು ವರ್ಷದಲ್ಲಿ ರೂ. 11.43 ಲಕ್ಷ ಗುರಿ ಹೊಂದಿತ್ತು ಆದರೆ, ಪಂಚಾಯತ್ ರೂ. 10.32 ಲಕ್ಷ ಸಂಗ್ರಹಿಸಿದೆ.
ಸಾರ್ಜನಿಕರು ತಮ್ಮ ಬಾಕಿ ತೆರಿಗೆಯನ್ನು ಖುದ್ದಾಗಿ ಗ್ರಾಮ ಪಂಚಾಯತಿ ಅಥವಾ ಆನ್ಲೈನ್ https://bsk.karnataka.gov.in/ UPI/Google pay/ PhonePe/Paytm ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಜಿಲ್ಲೆಯಲ್ಲಿ ತೆರಿಗೆ ವಸೂಲಾತಿ ಮೇಲ್ವಿಚಾರಣೆ ಕೈಗೊಳ್ಳಲಾಗಿದೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಶೇಷ ತೆರಿಗೆ ವಸೂಲಾತಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಮಟ್ಟದಲ್ಲಿ ವಾರಕ್ಕೆ ಒಮ್ಮೆ ವಿಡಿಯೊ ಸಂವಾದ ಮೂಲಕ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುತ್ತಿದೆ. ಕರವಸೂಲಿಗಾರ, ಬಿಲ್ ಕಲೆಕ್ಟರ್ ಹುದ್ದೆ ಖಾಲಿ ಇರುವ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಂದ ತೆರಿಗೆ ಸಂಗ್ರಹಿಸಲಾಗುತ್ತಿದೆ. ತೆರಿಗೆ ಸಂಗ್ರಹಣೆ ಜೊತೆಗೆ ನಾಗರಿಕರು ತಮ್ಮ ಆಸ್ತಿಯ ವಿವರಗಳನ್ನು ಪರಿಶೀಲಿಸಿಕೊಂಡು ಇ-ಸ್ವತ್ತು ದಾಖಲಾತಿ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
Advertisement