
ಬೆಂಗಳೂರು: ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ 'ಅಜಾಗರೂಕ' ಸುರಂಗ ರಸ್ತೆ ಯೋಜನೆಯಿಂದ ನಗರದ ಐಕಾನಿಕ್ ಲಾಲ್ಬಾಗ್ ಸಸ್ಯೋದ್ಯಾನಕ್ಕೆ ಅಪಾಯ ಎದುರಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ ಸೋಮವಾರ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ 'ಡಿಸಿಎಂ ಡಿ ಕೆ ಶಿವಕುಮಾರ್ ಅವರ ಸುರಂಗದ ಹುಚ್ಚಿನಿಂದ ಲಾಲ್ಬಾಗ್ ಅಪಾಯ'ದಲ್ಲಿದೆ ಎಂಬ ಶೀರ್ಷಿಕೆಯಡಿಯಲ್ಲಿ ಪೋಸ್ಟ್ ಮಾಡಿರುವ ಅಶೋಕ್, ಬೆಂಗಳೂರಿನ ಹೆಮ್ಮೆ, ಜೀವಂತ ಪರಂಪರೆಯಾಗಿರುವ ಲಾಲ್ ಬಾಗ್ ಸಸ್ಯೋಧ್ಯಾನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಅಜಾಗರೂಕ ರೂ. 26,000 ಕೋಟಿ ವೆಚ್ಚದ ಸುರಂಗ ರಸ್ತೆ ಯೋಜನೆಯಿಂದ ಗಂಡಾಂತರ ಎದುರಾಗಿದೆ ಎಂದು ಬರೆದುಕೊಂಡಿದ್ದಾರೆ.
ಒಬ್ಬ ವ್ಯಕ್ತಿಯ ಪ್ರಚಾರ ಮತ್ತು ವ್ಯಾನಿಟಿ ಯೋಜನೆಗಾಗಿ ಲಾಲ್ಬಾಗ್ನ ಸುಮಾರು ಆರು ಎಕರೆ ಭೂಮಿ ಕಳೆದುಹೋಗುತ್ತದೆ. ಸಾವಿರಾರು ಮರಗಳನ್ನು ಕಡಿಯಲಾಗುತ್ತದೆ. ಪರಿಸರ ವ್ಯವಸ್ಥೆಯನ್ನು ಬದಲಾಯಿಸಲಾಗದಂತೆ ಹಾನಿಗೊಳಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.
ತಜ್ಞರು, ನಾಗರಿಕ ಗುಂಪುಗಳು ಮತ್ತು ಪರಿಸರವಾದಿಗಳು ವಿರೋಧ ವ್ಯಕ್ತಪಡಿಸುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ. ಬೆಂಗಳೂರಿನ ಅಸ್ಮಿತೆ ಮತ್ತು ಪರಿಸರದ ಬಗ್ಗೆ ಯಾಕೆ ಈ ದುರಹಂಕಾರ ಮತ್ತು ನಿರ್ಲಕ್ಷ್ಯ? ಎಂದು ಪ್ರಶ್ನಿಸಿದ್ದಾರೆ.
ಲಾಲ್ಬಾಗ್ ಮತ್ತೊಂದು ತುಂಡು ಭೂಮಿಯಲ್ಲ. ಇದು ನಮ್ಮ ನಗರದ ಆತ್ಮ, ನಮ್ಮ ಮಕ್ಕಳ ಆಮ್ಲಜನಕ ಮತ್ತು ರಾಜ್ಯದ ಸಂಪತ್ತು. ರಾಜಕೀಯ ಶೋಭೆಗಾಗಿ ಅದನ್ನು ನಾಶ ಮಾಡುವ ಹಕ್ಕು ಯಾವ ನಾಯಕರಿಗೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಲಾಲ್ ಬಾಗ್ ಕಾಪಾಡಲು ನಗರದ ಜನರೊಂದಿಗೆ ಬಿಜೆಪಿ ನಿಲ್ಲಲಿದೆ. ಈ ಯೋಜನೆಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೂಡಲೇ ಸ್ಥಗಿತಗೊಳಿಸಬೇಕು. ರಾಹುಲ್ ಗಾಂಧಿ ಈಗ ಬೆಂಗಳೂರಿನ ಪರಿಸರ ವ್ಯವಸ್ಥೆ ಬಗ್ಗೆ ಮಾತನಾಡಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
Advertisement