
ಬೆಂಗಳೂರು: ನಗರದ ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ ಅನುದಾನ ಹಂಚಿಕೆಯನ್ನು ಶನಿವಾರ ಘೋಷಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸುರಂಗ ರಸ್ತೆ ಯೋಜನೆಗಾಗಿ ಸಸ್ಯೋದ್ಯಾನದ ಆರು ಎಕರೆಯನ್ನು ವಶಕ್ಕೆ ಪಡೆಯಲಾಗುತ್ತದೆ ಎಂಬ ಹೇಳಿಕೆಯನ್ನು ತಳ್ಳಿಹಾಕಿದರು. ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಸುರಂಗ ರಸ್ತೆ ಯೋಜನೆ ಲಾಲ್ ಬಾಗ್ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಭರವಸೆ ನೀಡಿದರು.
ಸುಮಾರು 240 ಎಕರೆ ವ್ಯಾಪಿಸಿರುವ ಲಾಲ್ ಬಾಗ್ ಬೆಂಗಳೂರಿನ ಪ್ರಮುಖ ಆಕರ್ಷಣೇಯ ಕೇಂದ್ರಗಳಲ್ಲಿ ಒಂದಾಗಿದೆ. ಹಲವು ಶತಮಾನಗಳಷ್ಟು ಹಳೆಯದಾದ ಮರಗಳನ್ನು ಒಳಗೊಂಡಂತೆ ಅಪರೂಪದ ಸಸ್ಯಗಳನ್ನು ಹೊಂದಿರುವ ಸಸ್ಯೋದ್ಯಾನ ಆಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ನಡಿಗೆದಾರರು ಮತ್ತು ನಾಗರಿಕರ ಜತೆ ಫಲಪ್ರದ ಚರ್ಚೆ ನಡೆಸಿದ್ದೇನೆ. ಅವರ ಕುಂದುಕೊರತೆ, ಸಲಹೆ-ಸೂಚನೆಗಳನ್ನು ಆಲಿಸಿ, ಲಾಲ್ಬಾಗ್ ಅಭಿವೃದ್ಧಿಗೆ ರೂ. 10 ಕೋಟಿ ರೂ. ಮಂಜೂರು ಮಾಡಲು ನಿರ್ಧರಿಸಿದ್ದೇವೆ. ಅದರ ಭಾಗವಾಗಿ ವೃದ್ಧರು, ಮಹಿಳೆಯರಿಗೆ ಅನುಕೂಲವಾಗುವಂತೆ ಜಿಮ್ ಸ್ಥಾಪಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಬೆಳಿಗ್ಗೆಯಿಂದ ಸಂಜೆಯವರೆಗೆ ವೈದ್ಯರು, ಆಂಬ್ಯುಲೆನ್ಸ್ ಲಭ್ಯ
'ಬೆಂಗಳೂರು ನಡಿಗೆ' ಕಾರ್ಯಕ್ರಮದ ಅಂಗವಾಗಿ ನಡಿಗೆದಾರರು ಮತ್ತು ನಾಗರಿಕರೊಂದಿಗೆ ಸಂವಾದ ನಡೆಸಿ, ಸುರಂಗ ಮಾರ್ಗದ ಪ್ರವೇಶ ಸ್ಥಳವನ್ನು ಪರಿಶೀಲಿಸಿದ ನಂತರ ಮಾತನಾಡಿದ ಡಿಕೆ ಶಿವಕುಮಾರ್, "ಲಾಲ್ಬಾಗ್ನಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ವೈದ್ಯರು ಮತ್ತು ಆಂಬ್ಯುಲೆನ್ಸ್ ಲಭ್ಯವಿರುವಂತೆ ವ್ಯವಸ್ಥೆ ಮಾಡಲು ನಿರ್ಧರಿಸಿದ್ದೇವೆ. ಇನ್ನು ಮುಂದೆ ಲಾಲ್ಬಾಗ್ನಲ್ಲಿ ಶೌಚಾಲಯಗಳನ್ನು ಉಚಿತವಾಗಿ ನೀಡಲಾಗುವುದು ಎಂದರು.
ಲಾಲ್ಬಾಗ್ ಮಾದರಿಯಲ್ಲಿ ನಗರದ ಅರಣ್ಯ ಪ್ರದೇಶಗಳಲ್ಲಿ ಟ್ರೀ ಪಾರ್ಕ್ಗಳನ್ನು ನಿರ್ಮಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚಿಸಲಾಗುವುದು, ಇದಕ್ಕೆ ಆರ್ಥಿಕ ನೆರವನ್ನು ಕೂಡಾ ನೀಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಲಾಲಾಬಾಗ್ ನ ಆರು ಎಕರೆ ಭೂಮಿ ಅವಶ್ಯಕತೆ ಇಲ್ಲ:
‘ಬೆಂಗಳೂರು ನಾಡಿಗೆ’ ಕಾರ್ಯಕ್ರಮ ಮುಂದುವರಿಯಲಿದೆ ಎಂದು ತಿಳಿಸಿದ ಶಿವಕುಮಾರ್, ಬೃಹತ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಎಲ್ಲ ಪ್ರಮುಖ ಉದ್ಯಾನವನಗಳಿಗೆ ಭೇಟಿ ನೀಡಿ ಸಾರ್ವಜನಿಕ ಕುಂದುಕೊರತೆ ಮತ್ತು ಸಲಹೆಗಳನ್ನು ಆಲಿಸುತ್ತೇವೆ. ಸುರಂಗ ರಸ್ತೆ ಯೋಜನೆಗಾಗಿ ಲಾಲ್ ಬಾಗ್ ನ ಆರು ಎಕರೆ ಭೂಮಿಯ ಅವಶ್ಯತೆ ಇಲ್ಲ ಎಂದರು.
"ಉದ್ಯಾನದ ಗಡಿಯಲ್ಲಿರುವ ಪಾರ್ಕಿಂಗ್ ಪ್ರದೇಶದ ಬಳಿ ಒಂದರಿಂದ 1.5 ಎಕರೆ ಪ್ರದೇಶದಲ್ಲಿ ಸುರಂಗ ಕಾಮಗಾರಿಗೆ ಬೇಕಾದ ಉಪಕರಣಗಳ ದಾಸ್ತಾನಿಗೆ ಬಳಸಲಾಗುವುದು. ಅದನ್ನು ನಂತರ ಮರುಸ್ಥಾಪಿಸಲಾಗುತ್ತದೆ. ಲಾಲ್ಬಾಗ್ ಗಡಿಯಲ್ಲಿರುವ ಅಶೋಕ ಸ್ತಂಭದ ಕಡೆಗೆ ಪ್ರವೇಶ ದ್ವಾರವನ್ನು ಒದಗಿಸಲಾಗುವುದು. ಸುರಂಗ ರಸ್ತೆ ಯೋಜನೆಯಿಂದ ಲಾಲ್ಬಾಗ್ಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಅವರು ಹೇಳಿದರು.
ಬಿಜೆಪಿಯವರು ಚುನಾವಣೆ ಬಹಿಷ್ಕರಿಸಲಿ:
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ಬಿಜೆಪಿಗೆ ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ಆಸಕ್ತಿಯಿಲ್ಲ ಆದರೆ ರಾಜಕೀಯದಲ್ಲಿ ಮಾತ್ರ ಆಸಕ್ತಿ ಇದೆ. ಶುಕ್ರವಾರ ನಡೆದ ಮೊದಲ ಜಿಬಿಎ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ನೀಡಬಹುದಾಗಿತ್ತು. ಆದರೆ ಅವರು ದೂರವಿರಲು ನಿರ್ಧರಿಸಿದರು. ಜಿಬಿಎಗೆ ಆಕ್ಷೇಪಿಸಿದರೆ, ಚುನಾವಣೆಯನ್ನು ಬಹಿಷ್ಕರಿಸಲಿ ಎಂದು ಸವಾಲು ಹಾಕಿದರು.
Advertisement