
ಬಾಗಲಕೋಟೆ: ವಿಜಯಪುರ ಪ್ರವೇಶಕ್ಕೆ ಬಾಗಲಕೋಟೆ ಜಿಲ್ಲಾಧಿಕಾರಿಗಳು ನಿರ್ಬಂಧ ಹೇರಿದ್ದರೂ, ಆದೇಶವನ್ನು ಧಿಕ್ಕರಿಸಿದ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಗಳು, ಮಠಕ್ಕೆ ತೆರಳಿದ ಬೆಳವಣಿಗೆಗಳು ಶನಿವಾರ ಕಂಡು ಬಂದಿತು.
ವಿಜಯಪುರ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದ, ಕನೇರಿ ಶ್ರೀಗಳು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದ ಮಲ್ಲಿಕಾರ್ಜುನ ಮಠದಲ್ಲಿ (ಕನೇರಿ ಶಾಖಾ ಮಠ) ಕಳೆದ ಎರಡು ದಿನಗಳಿಂದ ವಾಸ್ತವ್ಯ ಹೂಡಿದ್ದರು.
ವಿಜಯಪುರ ಪ್ರವೇಶಕ್ಕೆ ನಿರ್ಬಂಧ ಆದೇಶ ಸ್ವೀಕರಿಸಿದ್ದರೂ, ಇದನ್ನು ಒಪ್ಪದ ಸ್ವಾಮೀಜಿಗಳು, ನೀವು ನನ್ನನ್ನು ಬಂಧಿಸಲು ಬಯಸಿದರೆ, ನನ್ನನ್ನು ಬಂಧಿಸಿ ನೀವು ಬಯಸಿದಷ್ಟು ಕಾಲ ಜೈಲಿನಲ್ಲಿಡಿ. ನಾನು ಜಾಮೀನಿಗೆ ಅರ್ಜಿ ಸಲ್ಲಿಸುವುದಿಲ್ಲ ಎಂದು ಹೇಳಿ ಮಠವನ್ನು ತೊರೆಯಲು ನಿರಾಕರಿಸಿದರು.
ಅವರ ಈ ನಿಲುವಿನಿಂದಾಗಿ ಅಧಿಕಾರಿಗಳು ಸ್ಥಳದಿಂದ ವಾಪಸಾಗಿದ್ದರು. ನಂತರ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಬಹುದು ಎಂದು ಜಿಲ್ಲಾಧಿಕಾರಿ ಸಂಗಪ್ಪ ಎಂ. ಅವರು ಸ್ವಾಮೀಜಿಗಳಿಗೆ ತಿಳಿಸಿದ್ದು, ಶುಕ್ರವಾರ ಮಠ ಖಾಲಿ ಸೂಚಿಸಿದ್ದರು. ನಂತರ ಶನಿವಾರ ಬೆಳಗ್ಗೆ ಸ್ವಾಮೀಜಿಗಳು ಮಠವನ್ನು ತೊರೆದಿದ್ದಾರೆ.
ಇದಕ್ಕೂ ಮೊದಲು, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮತ್ತು ಶಾಸಕ ಸಿದ್ದು ಸವದಿ ಮಠಕ್ಕೆ ಭೇಟಿ ನೀಡಿ ಶ್ರೀಗಳೊಂದಿಗೆ ಚರ್ಚೆ ನಡೆಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಸಂಸದ ಜಗದೀಶ್ ಶೆಟ್ಟರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ.
ಈ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿದ ಶ್ರೀಗಳು, "ಯಾವುದೇ ಕೊಲೆ ಅಥವಾ ಸುಲಿಗೆ ನಡೆದಿಲ್ಲ, ಆದರೂ ಸರ್ಕಾರ ನನ್ನ ಮಠದಲ್ಲಿ ಉಳಿಯಲು ನನಗೆ ಅವಕಾಶ ನೀಡುತ್ತಿಲ್ಲ. ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಸಂವಿಧಾನವನ್ನು ಕೈಯಲ್ಲಿ ಹಿಡಿದಿರುವವರು ಈಗ ಅದರ ಕತ್ತು ಹಿಸುಕುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಇಲ್ಲದ ಕಾರಣ ಸಾರ್ವಜನಿಕ ಗಮನವನ್ನು ಬೇರೆಡೆ ಸೆಳೆಯಲು ವಿವಾದ ಸೃಷ್ಟಿಸಲಾಗುತ್ತಿದೆ. ಇದು ತುಘಲಕ್ ಆಡಳಿತದಂತಿದೆ. ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ನಾನು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆಂದು ಹೇಳಿದ್ದಾರೆ.
Advertisement