

ಬೆಂಗಳೂರು: ತಮ್ಮ ಏಕೈಕ ಮಗಳನ್ನು ಕಳೆದುಕೊಂಡು ನೋವಿನಲ್ಲಿದ್ದ ತಂದೆಯೊಬ್ಬರು (ಭಾರತ್ ಪೆಟ್ರೋಲಿಯಂ ನಿಗಮದ ನಿವೃತ್ತ ಸಿಎಫ್ಒ) ಪುತ್ರಿಯ ಸಾವಿನ ನಂತರದ ಪ್ರತಿಯೊಂದು ಹಂತದಲ್ಲೂ ಲಂಚಕ್ಕಾಗಿ ಅಧಿಕಾರಿಗಳು ಪೀಡಿಸಿದ ಅಮಾನವೀಯ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ.
ಭಾರತ್ ಪೆಟ್ರೋಲಿಯಂನ ನಿವೃತ್ತ ಕಾರ್ಯನಿರ್ವಾಹಕ (ಸಿಎಫ್ಒ) ಕೆ. ಶಿವಕುಮಾರ್ ಅವರು, ತಮ್ಮ ಮಗಳು ಅಕ್ಷಯಾ ಶಿವಕುಮಾರ್ ಅವರ ಮರಣದ ನಂತರ ತಮಗಾದ ಕಹಿ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್ ವೈರಲ್ ಆಗಿದೆ. ಅಧಿಕಾರಿಗಳ ಅಮಾನವೀಯ ವರ್ತನೆ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿದೆ.
ಪುತ್ರಿಯ ನಿಧನದ ಒಂದು ತಿಂಗಳ ನಂತರ ಶಿವಕುಮಾರ್ ಅವರು ಲಿಂಕ್ಡ್ಇನ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದು, ಮಗಳ ಸಾವಿಗೆ ಸಂಬಂಧಿಸಿದಂತೆ ಕೆಲವು ಔಪಚಾರಿಕ ಕೆಲಸಗಳನ್ನು ಮುಗಿಸುವಾಗ ಎಲ್ಲ ಹಂತದಲ್ಲಿಯೂ ಅಧಿಕಾರಿಗಳ ಭ್ರಷ್ಟಾಚಾರ, ತೋರಿದ ನಿರಾಸಕ್ತಿಯ ಕುರಿತು ವಿವರಿಸಿದ್ದಾರೆ.
ನಗರದಲ್ಲಿ ಕೆಲಸ ಮಾಡುತ್ತಿದ್ದ ಐಐಟಿ ಮದ್ರಾಸ್ ಮತ್ತು ಐಐಎಂ ಅಹಮದಾಬಾದ್ ಪದವೀಧರೆ ಅಕ್ಷಯ ಶಿವಕುಮಾರ್ (34) ಸೆಪ್ಟೆಂಬರ್ 18 ರಂದು ಮೆದುಳಿನ ರಕ್ತಸ್ರಾವದಿಂದ ನಿಧನರಾಗಿದ್ದರು, ಈ ದುಃಖದ ಸಮಯದಲ್ಲಿ, ಮಗಳ ಅಂತಿಮ ಕಾರ್ಯಗಳನ್ನು ಮಾಡಲು ಮುಂದಾದಾಗ, ವ್ಯವಸ್ಥೆಯ ಕ್ರೌರ್ಯ ಶಿವಕುಮಾರ್ ಅವರಿಗೆ ಅರಿವಾಗಿದೆ.
ಆ್ಯಂಬುಲೆನ್ಸ್ ಸೇವೆಯಿಂದ ಹಿಡಿದು, ಪೊಲೀಸ್ ಪ್ರಕ್ರಿಯೆಗಳು, ಮರಣ ಪ್ರಮಾಣಪತ್ರ ಪಡೆಯುವುದು ಮತ್ತು ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ಮಾಡುವವರೆಗೂ ಪ್ರತಿಯೊಂದು ಹಂತದಲ್ಲೂ ಅಧಿಕಾರಿಗಳು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಶಿವಕುಮಾರ್ ಅವರು ಆರೋಪಿಸಿದ್ದಾರೆ.
ಆಂಬುಲೆನ್ಸ್ ಸಿಬ್ಬಂದಿ ಕಸವನಹಳ್ಳಿಯ ಒಂದು ಆಸ್ಪತ್ರೆಯಿಂದ ಕೋರಮಂಗಲದ ಸೇಂಟ್ ಜಾನ್ಸ್ಗೆ ಅವಳನ್ನು ಕರೆದೊಯ್ಯಲು ರೂ.5,000 ಪಾವತಿಸಲು ಹೇಳಿದರು. ಪೊಲೀಸರು ತುಂಬಾ ಅಸಭ್ಯವಾಗಿ ವರ್ತಿಸಿದರು. ಅದರಲ್ಲೂ ವಿಶೇಷವಾಗಿ ಇನ್ಸ್ಪೆಕ್ಟರ್. ಅವರ ಕಿರಿಯರು ನಾವು ಮರಣೋತ್ತರ ಪರೀಕ್ಷೆಯೊಂದಿಗೆ ಮುಂದುವರಿಯಬಹುದು ಎಂದು ಹೇಳಿದಾಗಲೂ ಅತ್ಯಂತ ಕೆಟ್ಟದಾಗಿ ವರ್ತಿಸಿದರು.
ಅವರ ಮಾಜಿ ಉದ್ಯೋಗದಾತ "ಸರಿಯಾದ ಕ್ರಮ ತೆಗೆದುಕೊಂಡ ನಂತರವೇ" ಪೊಲೀಸ್ ಅಧಿಕಾರಿ ತಮ್ಮ ಸ್ವರವನ್ನು ಬದಲಾಯಿಸಿದರು. ಮರಣೋತ್ತರ ಪರೀಕ್ಷೆಯ ನಂತರ ಅಂತ್ಯಕ್ರಿಯೆಗೂ ಮೊದಲು ಅಕ್ಷಯಳ ಕಣ್ಣುಗಳನ್ನು ದಾನ ಮಾಡಲಾಯಿತು.
ನಂತರ ಸ್ಮಶಾನದಲ್ಲೂ ಹಣ ಕೇಳಿದರು, ಆ ಹಣವನ್ನೂ ಪಾವತಿಸಿದೆವು. ನಂತರ, ಪೊಲೀಸರು ಎಫ್ಐಆರ್ ಮತ್ತು ಮರಣೋತ್ತರ ಪರೀಕ್ಷೆಯ ವರದಿಯ ಪ್ರತಿಯನ್ನು ನೀಡಬೇಕಾಗಿದ್ದರಿಂದ, ನಾವು ನಾಲ್ಕು ದಿನಗಳ ನಂತರ ಭೇಟಿಯಾದೆವು, ಅವರು ಪೊಲೀಸ್ ಠಾಣೆಯಲ್ಲಿ ಬಹಿರಂಗವಾಗಿ ಹಣ ಕೇಳಿದರು, ಅದನ್ನು ನಾನು ಪಾವತಿಸಿದೆ, ಲಂಚ ಸಂಗ್ರಹಿಸುತ್ತಿದ್ದ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲ, ಇದರಿಂದಾಗಿ ಹೊಣೆಗಾರಿಕೆ ಅಸಾಧ್ಯವಾಯಿತು. ಸಬ್-ಇನ್ಸ್ಪೆಕ್ಟರ್ ಗೌರವಯುತವಾಗಿ ವರ್ತಿಸಿದರೂ, ಸಹಾಯಕ ಅಧಿಕಾರಿಯೇ ಹಣ ಕೇಳುತ್ತಿದ್ದರು ಎಂದು ಆರೋಪಿಸಿದ್ದಾರೆ.
ಇದಲ್ಲದೆ ಬಿಬಿಎಂಪಿ ಕಚೇರಿಯಲ್ಲೂ ನಮ್ಮ ಸಂಕಷ್ಟ ಮುಂದುವರೆದಿತ್ತು, ಮಗಳ ಮರಣ ಪ್ರಮಾಣಪತ್ರಕ್ಕಾಗಿ ಸತತ ಐದು ದಿನಗಳ ಕಾಲ ಕಚೇರಿಗೆ ಭೇಟಿ ನೀಡಬೇಕಾಯಿತು. ಜಾತಿ ಸಮೀಕ್ಷೆಯಿಂದಾಗಿ ಯಾರೂ ಕಚೇರಿಯಲ್ಲಿಲ್ಲ ಎಂದು ನನಗೆ ತಿಳಿಸಲಾಯಿತು. ನಂತರ ನಾನು ಬಿಬಿಎಂಪಿಯ ಉನ್ನತ ಅಧಿಕಾರಿಯನ್ನು ಸಂಪರ್ಕಿಸಿದೆ, ಅಧಿಕೃತ ಶುಲ್ಕಕ್ಕಿಂತ ಹೆಚ್ಚಿನ ಹಣವನ್ನು ಪಡೆದ ನಂತರ ಮರಣ ಪ್ರಮಾಣಪತ್ರವನ್ನು ನೀಡಲಾಯಿತು.
ನಮ್ಮ ಸ್ಥಿತಿಯೇ ಹೀಗಾದರೆ ಬಡವರ ಪರಿಸ್ಥಿತಿ ಏನು? ವ್ಯಕ್ತಿಯೊಬ್ಬ ಈಗಾಗಲೇ ಕುಟುಂಬದ ಆತ್ಮೀಯರನ್ನು ಕಳೆದುಕೊಂಡು ಶೋಕದಲ್ಲಿರುವಾಗ, ಪೊಲೀಸರಿಗೆ ಲಂಚ ಕೇಳಲು ಮತ್ತು ಅಸಭ್ಯವಾಗಿ ಮಾತನಾಡಲು ಶುರುವಾದಾಗ ನಮಗೆ ಅನಿಸೋದು ಒಂದೇ ಅವರು ಮನುಷ್ಯರಾ ಅಥವಾ ಅವರಿಗೂ ಕುಟುಂಬ ಇದೆಯಾ ಎನ್ನುವುದು.
ಕೆಲವರು ನೀವು ಈ ವಿಚಾರವನ್ನು ಪೊಲೀಸರು, ರಾಜಕಾರಣಿ ಹಾಗೂ ಬಿಬಿಎಂಪಿಯ ಮೇಲಿನ ಅಧಿಕಾರಿಗಳಿಗೆ ಪತ್ರ ಮುಖೇನ ತಿಳಿಸಬೇಕು ಎಂದರು. ಆದರೆ, ನನಗೆ ಇದ್ಯಾವುದು ಪ್ರಯೋಜನಕ್ಕೆ ಬರೋದಿಲ್ಲ ಎನಿಸಿದೆ. ನನಗೆ 64 ವರ್ಷ. ಬೆಂಗಳೂರನ್ನು ಈ ಅರಾಜಕತೆಯಿಂದ ಉಳಿಸಬಹುದೇ ಎನ್ನುವ ಪ್ರಶ್ನೆ ನನ್ನ ಎದುರಲ್ಲಿದೆ. ನಾರಾಯಣಮೂರ್ತಿ, ಅಜೀಮ್ ಪ್ರೇಮ್ಜೀ, ಕಿರಣ್ ಮಜುಂದಾರ್ ಶಾರಂಥ ದೊಡ್ಡ ವ್ಯಕ್ತಿ, ಕೋಟ್ಯಧಿಪತಿಗಳು ಈ ನಗರವನ್ನು ಕಾಪಾಡಬಲ್ಲರೆ? ಅವರು ನಗರದ ಬಗ್ಗೆ ತುಂಬಾ ಮಾತನಾಡುತ್ತಾರೆ..ಆದರೇ...' ಎಂದು ಹೇಳುವ ಮೂಲಕ ತಮ್ಮ ಬರವಣಿಗೆಯನ್ನು ಅಲ್ಲಿಗೇ ನಿಲ್ಲಿಸಿದ್ದಾರೆ.
ಇದೀಗ ಪೋಸ್ಟ್ ವೈರಲ್ ಆಗುತ್ತಿದ್ದು, ಸಾಕಷ್ಟು ಮಂದಿ ಭ್ರಷ್ಟಾಚಾರ ವ್ಯವಸ್ಥೆಯ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. ಅಲ್ಲದೆ, ಅಧಿಕಾರಿಯ ಸ್ಥಿತಿಗೆ ಸಂತಾಪ ಹಾಗೂ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಪೋಸ್ಟ್ ಕುರಿತು ವೈಟ್ಫೀಲ್ಡ್ ಡಿಸಿಪಿ ಕೆ ಪರಶುರಾಮ ಅವರು ಪ್ರತಿಕ್ರಿಯೆ ನೀಡಿದ್ದು. ಪೋಸ್ಟ್ ಆಧರಿಸಿ ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ. ತನಿಖೆಯ ಆಧಾರದ ಮೇಲೆ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಶಿವಕುಮಾರ್ ಅವರು ಬಹು ಸಂಸ್ಥೆಗಳ ಮೇಲೆ ಆರೋಪಮಾಡಿದ್ದಾರೆ. ಇದಕ್ಕೆ ವಿವರವಾದ ತನಿಖೆ ಅಗತ್ಯವಿದೆ. ವಿಚಾರಣೆಯ ಭಾಗವಾಗಿ ಶಿವಕುಮಾರ್ ಅವರನ್ನು ವಿಚಾರಣೆಗೊಳಪಡಿಸರುವ ಸಾಧ್ಯತೆಯಿದೆ ಎಂದೂ ತಿಳಿಸಿದ್ದಾರೆ.
ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ, ಕೆ ಶಿವಕುಮಾರ್ ಅವರು, 1987 ರಿಂದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ನೊಂದಿಗೆ ಸಂಬಂಧ ಹೊಂದಿದ್ದಾರೆ, ಹಣಕಾಸು ಇಲಾಖೆಯಲ್ಲಿ ಹಲವಾರು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಅವರ ಜವಾಬ್ದಾರಿಗಳಲ್ಲಿ ಆಂತರಿಕ ಲೆಕ್ಕಪರಿಶೋಧನೆ, ಉದ್ಯಮ ಸಂಪನ್ಮೂಲ ಯೋಜನೆ ಮತ್ತು ಕಾರ್ಯದರ್ಶಿ ಕಾರ್ಯಗಳು ಸೇರಿವೆ.
ಹಣಕಾಸು ನಿರ್ದೇಶಕ ಮತ್ತು ಸಿಎಫ್ಒ ಆಗಿ ಸೇವೆ ಸಲ್ಲಿಸಿದ ನಂತರ, ಅವರು ಸಲಹೆಗಾರರಾಗಿ ಬಿಪಿಸಿಎಲ್ನೊಂದಿಗೆ ಸಂಪರ್ಕದಲ್ಲಿದ್ದಾರೆ.
Advertisement